ದಿಗಂತ್ ನಾಪತ್ತೆ ಪ್ರಕರಣಕ್ಕೆ ಕೋಮುಬಣ್ಣ ಹಚ್ಚಿ ಮತೀಯ ಸಂಘರ್ಷಕ್ಕೆ ಯತ್ನಿಸಿದ ಶಾಸಕರ ಸಹಿತ ಸಂಘಪರಿವಾರದ ಪ್ರಮುಖರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದ ಕ ಜಿಲ್ಲಾ ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳ ಜಂಟಿ ವೇದಿಕೆ ಸಂಚಾಲಕ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಮನವಿ ಸಲ್ಲಿಸಿದರು.
“ಬಂಟ್ವಾಳ ತಾಲೂಕು ಫರಂಗಿಪೇಟೆಯ ನಿವಾಸಿ, ಹದಿಹರೆಯದ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ, ವಿದ್ಯಾರ್ಥಿಯ ಸುರಕ್ಷಿತ ಪತ್ತೆಯ ಮೂಲಕ ಸುಖಾಂತ್ಯ ಕಂಡಿದೆ. ದಿಗಂತ್ ಪತ್ತೆಗೆ ಅಪಾರ ಶ್ರಮವಹಿಸಿದ ಪೊಲೀಸ್ ಇಲಾಖೆಯ ಕ್ರಮಗಳು ಶ್ಲಾಘನೀಯ. ಆದರೆ, ವಿದ್ಯಾರ್ಥಿ ದಿಗಂತ್ ನಾಪತ್ತೆಯ ವಿಚಾರ ಬಹಿರಂಗಗೊಂಡ ಕ್ಷಣದಿಂದ ಬಜರಂಗದಳ ಸಹಿತ ಸಂಘಪರಿವಾರದ ಸಂಘಟನೆಗಳು ಹಾಗೂ ಬಿಜೆಪಿ ಪ್ರಮುಖರು ಪ್ರಕರಣಕ್ಕೆ ಕೋಮುಬಣ್ಣ ಬಳಿದು, ಎರಡು ಸಮುದಾಯಗಳ ನಡುವೆ ಸಂಘರ್ಷ ಹುಟ್ಟುಹಾಕುವ, ಅಪನಂಬಿಕೆಯನ್ನು ಹೆಚ್ಚಿಸುವ ಕೆಲಸ ನಡೆಸಿದ್ದಾರೆ” ಎಂದು ಆರೋಪಿಸಿದರು.
“ಯಾವ ಸಣ್ಣ ಆಧಾರವೂ ಇಲ್ಲದೆ, ʼವಿದ್ಯಾರ್ಥಿ ದಿಗಂತ್ನನ್ನು ಅಪಹರಣ ನಡೆಸಲಾಗಿದೆ. ಮುಸ್ಲಿಂ ಸಮುದಾಯ ಈ ಘಟನೆಯ ಹಿಂದಿದೆʼಯೆಂದು ಕತೆಕಟ್ಟಲಾಗಿದೆ. ಮಾಧ್ಯಮಗಳಿಗೂ ಅದೇ ಅರ್ಥದ ಹೇಳಿಕೆ ನೀಡಲಾಗಿದೆ. ಅದರ ಜತೆಗೆ ಫರಂಗಿಪೇಟೆ ಪರಿಸರದಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶಗಳನ್ನೇ ಗುರಿಯಾಗಿಸಿ ʼಅಮ್ಮೆಮಾರ್ ಪ್ರದೇಶದಲ್ಲಿ ಬಹುಸಂಖ್ಯಾತರು ಓಡಾಡುವುದೇ ಕಷ್ಟವಾಗಿದೆ, ಅಲ್ಲಿ ಓಡಾಡುವವರಿಗೆ ಜೀವಭಯ ಒಡ್ಡಲಾಗುತ್ತದೆ. ಗಾಂಜಾ ವ್ಯಸನಿಗಳು, ಪೆಡ್ಲರ್ಗಳು, ಕ್ರಿಮಿನಲ್ಗಳು ಅಮ್ಮೆಮಾರ್ನಲ್ಲಿ ತುಂಬಿಕೊಂಡಿದ್ದಾರೆʼ ಎಂದು ಇಡಿಯಾಗಿ ಒಂದು ಊರು ಹಾಗೂ ಸಮುದಾಯವನ್ನು ಕ್ರಿಮಿನಲೀಕರಣಗೊಳಿಸಿ ತೀರಾ ಕೆಟ್ಟದಾಗಿ ಆರೋಪಿಸಲಾಗಿದೆ. ಮತೀಯ ದ್ವೇಷ, ಪೂರ್ವಾಗ್ರಹಗಳನ್ನು ಹುಟ್ಟಿಸಲು ಯತ್ನಿಸಲಾಗಿದೆ” ಎಂದು ಆರೋಪಿಸಿದರು.

“ಸಾಲದು ಎಂಬಂತೆ, ನಾಪತ್ತೆ ಪ್ರಕರಣದ ಸರಿಯಾದ ತನಿಖೆಗೆ ಅವಕಾಶ ಕೊಡದೆ ಮತೀಯತೆಯ ಆಧಾರದಲ್ಲಿ ಪ್ರತಿಭಟನೆ, ಬಂದ್ ನಡೆಸಿ ಪೊಲೀಸ್ ಇಲಾಖೆಯನ್ನು ತೀರಾ ಒತ್ತಡಕ್ಕೆ ಸಿಲುಕಿಸಲಾಗಿದೆ. ಪೊಲೀಸ್ ಇಲಾಖೆಯನ್ನು ಕ್ರಿಮಿನಲ್ ಸಮುದಾಯದ ಪಕ್ಷಪಾತಿಗಳೆಂದು ವಿನಾಕಾರಣ ಆರೋಪಿಸಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಫರಂಗಿಪೇಟೆ ಬಂದ್ ದಿವಸ ಮಂಗಳೂರು ಉತ್ತರ ಹಾಗೂ ಬೆಳ್ತಂಗಡಿಯ ಬಿಜೆಪಿ ಶಾಸಕರುಗಳಾದ ಭರತ್ ಶೆಟ್ಟಿ, ಹರೀಶ್ ಪೂಂಜಾ ಹಾಗೂ ಸಂಘ ಪರಿವಾರದ ಸ್ಥಳೀಯ ಮುಂದಾಳುಗಳು ದ್ವೇಷ ಭಾಷಣ ಮಾಡಿದ್ದಾರೆ. ಮತೀಯ ಉದ್ವಿಗ್ನತೆ ಕೆರಳಿಸುವ ರೀತಿಯಲ್ಲಿ ಮುಸ್ಲಿಂ ಸಮುದಾಯದ ಮೇಲೆ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಆ ಮೂಲಕ ಧರ್ಮಗಳ ನಡುವೆ ಸಂಘರ್ಷವನ್ನು ಹುಟ್ಟಿಸಲು ಯತ್ನಿಸಿದ್ದಾರೆ. ಇಡೀ ಮುಸ್ಲಿಂ ಸಮುದಾಯವನ್ನು ಕ್ರಿಮಿನಲ್ ಸಮುದಾಯವೆಂಬ ಭಾವನೆ ಹುಟ್ಟುವ ರೀತಿಯ ಮಾತುಗಳನ್ನಾಡಿದ್ದಾರೆ. ಮುಸ್ಲಿಂ ಬಾಹುಳ್ಯದ ಪ್ರದೇಶಗಳು ಅಪಾಯಕಾರಿ ವಲಯ, ಅಪರಾಧಿಗಳ ನೆಲೆಯೆಂಬ ಆರೋಪ ಮಾಡಿದ್ದಾರೆ” ಎಂದರು.
“ಮುಸ್ಲಿಮರು ಮಾತ್ರ ಗಾಂಜಾ, ಡ್ರಗ್ಸ್ ದಂಧೆ ನಡೆಸುತ್ತಾರೆ ಎಂಬರ್ಥದ ಮಾತುಗಳನ್ನಾಡಿರುವುದು ಖಂಡನೀಯ. ಇದು ನೆಲದ ಕಾನೂನು ಹಾಗೂ ಸಂವಿಧಾನದ ಜಾತ್ಯತೀತ ಆಶಯಗಳಿಗೆ, ನಿಯಮಗಳಿಗೆ ವಿರುದ್ಧವಾಗಿದೆ. ಮೊದಲೇ ಕೋಮುಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿರುವ ಫರಂಗಿಪೇಟೆ, ಬಂಟ್ವಾಳ, ಮಂಗಳೂರಿನಲ್ಲಿ ಇಂತಹ ನಡೆಗಳು ದೊಡ್ಡ ಸಂಘರ್ಷಕ್ಕೆ, ಅನಾಹುತಕ್ಕೆ ಕಾರಣವಾಗುವ ಸಾಧ್ಯತೆಗಳು ಹೆಚ್ಚು. ಪ್ರಕರಣಕ್ಕೆ ಮತೀಯ ಬಣ್ಣ ಹಚ್ಚಿದೆ. ಒಂದು ಸಮುದಾಯವನ್ನು ಅಪಾರಾಧಿ ಸಮುದಾಯವೆಂದು ಹಣೆಪಟ್ಟಿ ಕಟ್ಟಿದ, ಮುಸ್ಲಿಂ ಬಾಹುಳ್ಯದ ಊರುಗಳು ಕ್ರಿಮಿನಲ್ಗಳು ತುಂಬಿದ ಅಪಾಯಕಾರಿ ವಲಯಗಳೆಂದು ಆರೋಪ ಹೊರಿಸಿ, ಕೋಮು ಸಂಘರ್ಷಕ್ಕೆ ಪ್ರಚೋದಿಸಿದ ಶಾಸಕರುಗಳಾದ ಭರತ್ ಶೆಟ್ಟಿ, ಹರೀಶ್ ಪೂಂಜಾ, ಹಾಗೂ ಬಜರಂಗದಳದ ಭರತ್ ಕುಂಬ್ಡೇಲು ಸೇರಿದಂತೆ ಇತರರ ಮೇಲೆ ಪೊಲೀಸ್ ಇಲಾಖೆ ಸ್ವಯಂ ಪ್ರೇರಣೆಯಿಂದ ಮೊಕದ್ದಮೆ ಹೂಡಬೇಕು. ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಗಂಗಾವತಿ | ಅತ್ಯಾಚಾರ ಪ್ರಕರಣ; ಪರಾರಿಯಾಗಿದ್ದ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಿದ ಪೊಲೀಸರು
ನಿಯೋಗದಲ್ಲಿ ವೇದಿಕೆಯ ಸಂಚಾಲಕ, ಸಿಪಿಐಎಂ ದ ಕ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಕಾಂಗ್ರೆಸ್ ರಾಜ್ಯ ವಕ್ತಾರ ಎಮ್ ಜಿ ಹೆಗ್ಡೆ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಶೇಖರ್ ಬಿ, ಆಮ್ ಆದ್ಮಿಯ ಎಸ್ ಎಲ್ ಪಿಂಟೊ, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಕೆ ಅಶ್ರಫ್, ಕರ್ನಾಟಕ ಪ್ರಾಂತ ರೈತ ಸಂಘದ ಕೆ ಯಾದವ ಶೆಟ್ಟಿ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸದಾಶಿವ ಪಡುಬಿದ್ರೆ, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ಎಐಟಿಯುಸಿ ಮುಂದಾಳು ಎಚ್ ವಿ ರಾವ್, ಕಾರ್ಮಿಕ ಮುಂದಾಳುಗಳಾದ ವಿ ಕುಕ್ಯಾನ್, ಸೀತಾರಾಮ ಬೇರಿಂಜೆ, ಡಿವೈಎಫ್ಐ ಬಿ ಕೆ ಇಮ್ತಿಯಾಝ್, ಸಂತೋಷ್ ಬಜಾಲ್, ಜನವಾದಿ ಮಹಿಳಾ ಸಂಘಟನೆಯ ಜಯಂತಿ ಶೆಟ್ಟಿ, ಪ್ರಮೀಳಾ ಕೆ, ಎಸ್ಎಫ್ಐ ವಿನುಷ ರಮಣ, ಸಮುದಾಯ ರಾಜ್ಯ ಕಾರ್ಯದರ್ಶಿ ಮನೋಜ್ ವಾಮಂಜೂರು, ವಿವಿಧ ಸಂಘಟನೆಗಳ ಮುಂದಾಳುಗಳಾದ ಸರೋಜಿನಿ ಬಂಟ್ವಾಳ, ಕರುಣಾಕರ ಮಾರಿಪಳ್ಳ, ಸಮರ್ಥ್ ಭಟ್, ನೀತ್ ಶರಣ್, ಯೋಗಿತಾ ಸೇರಿದಂತೆ ಮುಂತಾದವರು ಇದ್ದರು.