ರಾಷ್ಟ್ರೀಯ ಹೆದ್ದಾರಿ 169ರ ಚತುಷ್ಪಥ ವಿಸ್ತರಣಾ ಕಾಮಗಾರಿ ನಡೆಯುತ್ತಿರುವ ಕೆತ್ತಿಕಲ್ ಪ್ರದೇಶದಲ್ಲಿ ಭೌಗೋಳಿಕ ಮಾನದಂಡ ಉಲ್ಲಂಘಿಸಿ ನಡೆದಿರುವ ಅವೈಜ್ಞಾನಿಕ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಖಂಡಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಮಂಗಳೂರು ನಗರದ ವಾಮಂಜೂರು ಜಂಕ್ಷನ್ನಲ್ಲಿ ಭಾನುವಾರ ಪ್ರತಿಭಟನೆ ನಡೆಸಿತು.
ಪ್ರತಿಭಟನಕಾರರನ್ನು ಉದ್ಧೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್, “ಗುರುಪುರ ಸೇತುವೆ ನಿರ್ಮಿಸುವ ವೇಳೆ ಕೆತ್ತಿಕಲ್ ಗುಡ್ಡದಿಂದ ಭಾರೀ ಪ್ರಮಾಣದ ಮಣ್ಣು ತೆಗೆಯಲಾಗಿತ್ತು. ಪರ್ಮಿಟ್ ಇಲ್ಲದೆ ಅಕ್ರಮವಾಗಿ ಮಣ್ಣು ಮಾರಾಟ ಮಾಡಲಾಗಿದೆ. ಈ ವಿಷಯ ಗಣಿ ಇಲಾಖೆ ಸಹಿತ ಜಿಲ್ಲಾಡಳಿತಕ್ಕೆ ಗೊತ್ತಿದ್ದರೂ ಮೌನವಾಗಿತ್ತು. ವಯನಾಡು ಸಂತ್ರಸ್ತರಿಗೆ ಕೇರಳ ಸರ್ಕಾರ 500ಕ್ಕೂ ಹೆಚ್ಚು ಮನೆ ನಿರ್ಮಿಸಿ ಕೊಡುತ್ತಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಇಂತಹ ವಿಚಾರಗಳ ಬಗ್ಗೆ ಅಸಡ್ಡೆ ತೋರಿಸುತ್ತಿದೆ. ಜನರ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ” ಎಂದರು.
ಸಂಸದರು ಮತ್ತು ಶಾಸಕರು ಕೆತ್ತಿಕಲ್ನ ಜಟಿಲ ಸಮಸ್ಯೆಗೆ ಪರಿಹಾರ ನೀಡುವ ಬದಲು ದ.ಕ. ಜಿಲ್ಲೆಗೆ ‘ಮಂಗಳೂರು’ ಎಂದು ಪುನಃ ನಾಮಕಾರಣ ಮಾಡಲು ಟೊಂಕಕಟ್ಟಿ ನಿಂತಿದ್ದಾರೆ. ಬಡವರ ಕಷ್ಟಗಳಿಗೆ ಸ್ಪಂದಿಸದ ಹಾಗೂ ಉದ್ಯೋಗ ಸೃಷ್ಠಿ ವಿಷಯದಲ್ಲಿ ಆಸಕ್ತಿ ತೋರದ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತಕ್ಕೆ ಧಿಕ್ಕಾರ ಕೂಗಿದರು.
ಇದನ್ನೂ ಓದಿ: ಮಂಗಳೂರು | ವಿಕಲಚೇತನ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ; ಅರ್ಜಿ ಆಹ್ವಾನ
ಪ್ರತಿಭಟನೆಯಲ್ಲಿ ಡಿವೈಎಫ್ಐ ಖಜಾಂಚಿ ಮನೋಜ್ ಕುಮಾರ್ ವಾಮಂಜೂರು, ಸಿಪಿಎಂ ಮುಖಂಡ ಬಾಬು ಸಾಲ್ಯಾನ್, ಡಿವೈಎಫ್ಐ ವಾಮಂಜೂರು ವಲಯ ಅಧ್ಯಕ್ಷ ದಿನೇಶ್ ಬೊಂಡಂತಿಲ, ಮುಖಂಡರಾದ ಹೊನ್ನಯ್ಯ ಅಮೀನ್, ಭವಾನಿ ಇರುವೈಲು, ಬಾಬು ಅಣೆಬಳಿ ಮುಂತಾದವರು ಇದ್ದರು.