ಮಂಗಳೂರಿನಲ್ಲಿ ಮೀನು ವ್ಯಾಪಾರಿ ಮುಸ್ಲಿಮ್ ಯುವಕನೋರ್ವನನ್ನು ತಂಡವೊಂದು ಕೊಲೆಗೆ ಯತ್ನಿಸಿರುವ ಘಟನೆ ಮಂಗಳೂರಿನ ಕುಂಟಿಕಾನ ಎಂಬಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದ್ದು, ಈ ವೇಳೆ ಹಿಂದೂ ಮಹಿಳೆ ಬೊಬ್ಬೆ ಹೊಡೆದು ದುಷ್ಕರ್ಮಿಗಳಿಂದ ಯುವಕನನ್ನು ರಕ್ಷಿಸಿದ್ದಾರೆ.
ರೌಡಿಶೀಟರ್ ಸುಹಾಸ್ ಶೆಟ್ಟಿ ಎಂಬಾತನನ್ನು ದುಷ್ಕರ್ಮಿಗಳ ಗುಂಪು ಬಜಪೆಯಲ್ಲಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಹತ್ಯೆಗೈದ ಬೆನ್ನಲ್ಲೇ ಈ ಘಟನೆ ನಡೆದಿದೆ. ಮೀನಿನ ವ್ಯಾಪಾರಿಯ ಮೇಲೆ ಸುಮಾರು 4ರಿಂದ 5 ಮಂದಿಯಿದ್ದ ತಂಡವು ದಾಳಿ ನಡೆಸುತ್ತಿರುವ ದೃಶ್ಯ ಸ್ಥಳೀಯ ಕಟ್ಟಡವೊಂದರಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಉಳ್ಳಾಲ ನಿವಾಸಿ ಲುಕ್ಮಾನ್ ಎಂಬಾತ ತನ್ನ ಗ್ರಾಹಕನಿಗೆ ಮೀನು ನೀಡಲೆಂದು ಎಂದಿನಂತೆ ಮಂಗಳೂರಿನ ಕುಂಟಿಕಾನಕ್ಕೆ ತೆರಳಿದ್ದರು. “ಬೆಳಗ್ಗೆ 6:30ರ ಸುಮಾರಿಗೆ ಗ್ರಾಹಕನನ್ನು ಕಾಯುತ್ತಾ ನಿಂತಿದ್ದಾಗ ಕಪ್ಪು ಬಣ್ಣದ ಇನ್ನೋವ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ನನ್ನ ಮೇಲೆ ದಾಳಿ ಮಾಡಿ ಕೊಲೆಗೆ ಯತ್ನಿಸಿತು” ಎಂದು ದಾಳಿಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲುಕ್ಮಾನ್ ಆರೋಪಿಸಿದ್ದಾರೆ.
“ಅಪಾಯದ ಅರಿವಾಗಿ ಸ್ಥಳದಿಂದ ಓಡಿದಾಗ ಅಟ್ಟಾಡಿಸಿಕೊಂಡು ಬಂದ ದುಷ್ಕರ್ಮಿಗಳು ನನ್ನನ್ನು ಕೆಳಗೆ ಬೀಳಿಸಿ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿದ್ದಾರೆ. ಈ ವೇಳೆ ಹಿಂದೂ ಮಹಿಳೆಯೊಬ್ಬರು ಬೊಬ್ಬೆ ಹಾಕುತ್ತಾ ಓಡೋಡಿ ಬಂದು ದುಷ್ಕರ್ಮಿಗಳಿಂದ ನನ್ನನ್ನು ರಕ್ಷಿಸಿದ್ದಾರೆ” ಎಂದು ಲುಕ್ಮಾನ್ ತಿಳಿಸಿದ್ದಾರೆ.
“ಮಹಿಳೆಯ ಬೊಬ್ಬೆಗೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಅದೇ ಮಹಿಳೆ ನನ್ನನ್ನು ಪೊಲೀಸರ ಬಳಿ ಡ್ರಾಪ್ ಮಾಡಿದ್ದಾರೆ” ಎಂದು ಲುಕ್ಮಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
