ಕೆಲವೊಂದು ಸಮಸ್ಯೆಗಳನ್ನು ಪರಿಹರಿಸಲು ಎಷ್ಟೇ ಗೋಗರೆದರೂ ಕೂಡ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸುವುದೇ ಇಲ್ಲ. ಸಂಬಂಧಪಟ್ಟವರು ಸ್ಪಂದನೆ ನೀಡಬೇಕು ಎಂದಾದರೆ ಏನಾದರೊಂದು ಅವಘಡ ಸಂಭವಿಸಬೇಕು ಅಥವಾ ಜನರೇ ಸ್ವಯಂಪ್ರೇರಿತವಾಗಿ ಬೀದಿಗಳಿಯಬೇಕಾದಂತಹ ಪರಿಸ್ಥಿತಿ ಬರಬೇಕು.
ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನಲ್ಲಿ ಕೂಡ ಇದೇ ಆಗಿದೆ.
ಹೌದು. ಒಂದು ರಸ್ತೆ ಗುಂಡಿಯನ್ನು ಮುಚ್ಚಿ ಎಂದು ಆಗ್ರಹಿಸಿ ಕಳೆದ ಹಲವಾರು ವರ್ಷಗಳಿಂದ ಜನರು ಸತತವಾಗಿ ಶಾಸಕ ಯು ಟಿ ಖಾದರ್, ಉಳ್ಳಾಲ ನಗರಸಭೆಯ ಅಧಿಕಾರಿಗಳನ್ನು ಮನವಿ ಮಾಡಿಕೊಂಡಿದ್ದಾರಾದರೂ ತೊಕ್ಕೊಟ್ಟು ಪೇಟೆ ಸಮೀಪದ ಚೆಂಬುಗುಡ್ಡೆಯಲ್ಲಿನ ರಸ್ತೆಯ ಅವ್ಯವಸ್ಥೆ ಸರಿಯಾಗಿರಲಿಲ್ಲ. ಶನಿವಾರ ಸಂಜೆ ತನ್ನ ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದಾಗ ಅಪಘಾತ ಸಂಭವಿಸಿ, ಮಹಿಳೆಯೋರ್ವರು ಮೃತಪಟ್ಟಿದ್ದರು.
ಸ್ಕೂಟರ್ ಚೆಂಬುಗುಡ್ಡೆಯ ರಸ್ತೆ ಗುಂಡಿಯ ಕಾರಣ ಚಾಲಕನ ನಿಯಂತ್ರಣ ತಪ್ಪಿ ಬಿದ್ದ ವೇಳೆ ರಸ್ತೆಗೆ ಎಸೆಯಲ್ಪಟ್ಟ ಮಹಿಳೆಯ ಮೇಲೆ ಟ್ಯಾಂಕರ್ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಚೆಂಬುಗುಡ್ಡೆ ಬಳಿ ಶನಿವಾರ ಸಂಜೆ ನಡೆದಿತ್ತು.

ಮೃತ ಮಹಿಳೆಯನ್ನು ಮೂಲತಃ ಕುಳಾಯಿಯ ಪ್ರಸಕ್ತ ದೇರಳಕಟ್ಟೆಯಲ್ಲಿ ವಾಸವಾಗಿದ್ದ ರಹಮತ್ (47) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ರಹಮತ್ ಅವರ ಪತಿ ಅಬ್ದುಲ್ ರಶೀದ್ ಜಿ. ಅವರಿಗೂ ಗಾಯವಾಗಿದೆ.
ಪತಿ ರಶೀದ್ ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಯಲ್ಲಿ ಇಲೆಕ್ಟ್ರಿಕಲ್ ವಿಭಾಗದ ಸಿಬ್ಬಂದಿಯಾಗಿದ್ದು, ಶನಿವಾರ ಸಂಜೆ ಸುಮಾರು 4:30ಕ್ಕೆ ತನ್ನ ಸ್ಕೂಟರ್ನಲ್ಲಿ ತನ್ನ ಪತ್ನಿ ರಹಮತ್ ಅವರನ್ನು ಕುಳ್ಳಿರಿಸಿ ದೇರಳಕಟ್ಟೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದರು. ತೊಕ್ಕೊಟ್ಟು-ಚೆಂಬುಗುಡ್ಡೆಯ ಸೇವಾ ಸೌಧದ ಬಳಿ ಹದಗೆಟ್ಟ ರಸ್ತೆಯ ಗುಂಡಿಯಿಂದ ಪಾರಾಗಲು ರಶೀದ್ ಹರಸಾಹಸ ಪಡುತ್ತಿದ್ದಂತೆಯೇ ನಿಯಂತ್ರಣ ಕಳಕೊಂಡು ಸ್ಕೂಟರ್ ಸ್ಕಿಡ್ಡಾಗಿ ಬಿತ್ತು. ಇದರಿಂದ ಸ್ಕೂಟರ್ ಹಿಂಬದಿ ಕುಳಿತಿದ್ದ ರಹಮತ್ ರಸ್ತೆಗೆ ಎಸೆಯಲಟ್ಟರು. ಈ ವೇಳೆ ಆದೇ ರಸ್ತೆಯಲ್ಲಿ ಅಮಿತ ವೇಗದಲ್ಲಿದ್ದ ಟ್ಯಾಂಕರ್ ರಹ್ಮತ್ರ ಮೇಲೆಯೇ ಹರಿದಿದ್ದರಿಂದ ಮೃತಪಟ್ಟ ಘಟನೆ ನಡೆದಿತ್ತು.
ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಹದಗೆಟ್ಟ ರಸ್ತೆಯನ್ನು ದುರಸ್ತಿಪಡಿಸಬೇಕು ಎಂದು ಆಗ್ರಹಿಸಿ ಕೆಲಕಾಲ ಪ್ರತಿಭಟನೆ ಕೂಡ ನಡೆಸಿದರು.
ಶನಿವಾರ ತಡರಾತ್ರಿ ಡಿವೈಎಫ್ಐ ಕಾರ್ಯಕರ್ತರು ಕೂಡ ಶಾಸಕ ಯು ಟಿ ಖಾದರ್ ವಿರುದ್ಧ ಪ್ರತಿಭಟನೆ ನಡೆಸಿದರು. ಜನರ ಆಕ್ರೋಶದ ಬೆಂಕಿಯನ್ನು ಅರಿತ ಶಾಸಕ ಯು ಟಿ ಖಾದರ್, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ನಿರ್ದೇಶನ ನೀಡಿ, ಕೂಡಲೇ ರಸ್ತೆಯನ್ನು ಸರಿಪಡಿಸಲು ಸೂಚನೆ ನೀಡಿದ್ದಾರೆ.

ಶಾಸಕರ ಕರೆ ಬರುತ್ತಿದ್ದಂತೆಯೇ ಎಚ್ಚರಗೊಂಡ ಸಂಬಂಧಪಟ್ಟ ಅಧಿಕಾರಿಗಳು, ಶನಿವಾರ ರಾತ್ರಿಯೇ ಜಲ್ಲಿಕಲ್ಲು, ಸಿಮೆಂಟ್ ಮಿಶ್ರಿತ ಕಾಂಕ್ರೀಟ್ ಅನ್ನು ಚೆಂಬುಗುಡ್ಡೆಯ ರಸ್ತೆಗೆ ಸುರಿದು, ಗುಂಡಿಯನ್ನು ಮುಚ್ಚುವ ಮೂಲಕ ತಾತ್ಕಾಲಿಕ ಪರಿಹಾರ ಕಲ್ಪಿಸಿದ್ದಾರೆ. ಆ ಮೂಲಕ ಜನಾಕ್ರೋಶ ಇನ್ನಷ್ಟು ಹೆಚ್ಚಾಗದಂತೆ ತಡೆ ನೀಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸ್ಪೀಕರ್ ಯು.ಟಿ.ಖಾದರ್ಗೆ ಈ ರಸ್ತೆಯ ಬಗ್ಗೆ ಸಂಪೂರ್ಣ ಅರಿವು ಇದೆ. ಆದರೆ ಅವರು ಇದರ ದುರಸ್ತಿಗೆ ಆದ್ಯತೆ ನೀಡಿಲ್ಲ. ಅಧಿಕಾರಿ ಗಳು ಕೂಡ ಇದರತ್ತ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಂತರ, ತಾತ್ಕಾಲಿಕ ಪರಿಹಾರವನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ.

“ಆದಷ್ಟು ಶೀಘ್ರವಾಗಿ ದೇರಳಕಟ್ಟೆ-ನಾಟೆಕಲ್ ಪರಿಸರದಲ್ಲಿರುವ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ನಮಗೆ ತಾತ್ಕಾಲಿಕ ಪರಿಹಾರ ಬೇಡ. ರಸ್ತೆ ಗುಂಡಿಗಳಿಗೆ ಶಾಸಕ ಯು ಟಿ ಖಾದರ್ ಶಾಶ್ವತ ಪರಿಹಾರ ಕಲ್ಪಿಸಬೇಕು. ಜೊತೆಗೆ ಶನಿವಾರ ನಡೆದ ಅಪಘಾತದಲ್ಲಿ ಮೃತರಾದ ಮಹಿಳೆಯ ಕುಟುಂಬವನ್ನು ಶಾಸಕರು ಭೇಟಿ ಮಾಡಿ, ಸಾಂತ್ವನ ಹೇಳುವುದರ ಜೊತೆಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕು” ಎಂದು ಈ ದಿನ.ಕಾಮ್ ಜೊತೆಗೆ ಮಾತನಾಡಿದ ಡಿವೈಎಫ್ಐ ಉಳ್ಳಾಲ ತಾಲೂಕು ಘಟಕದ ಕಾರ್ಯದರ್ಶಿ ರಿಝ್ವಾನ್ ಹರೇಕಳ ಆಗ್ರಹಿಸಿದ್ದಾರೆ.

