ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕುಡುಪು ಮೈದಾನದಲ್ಲಿ ಗುಂಪಿನಿಂದ ಹಲ್ಲೆಗೊಳಗಾಗಿ ಮೃತಪಟ್ಟ ಕೇರಳದ ಯುವಕ ಅಶ್ರಫ್ ಅವರ ಅಂತ್ಯಸಂಸ್ಕಾರವು ಮಲಪ್ಪುರಂ ಜಿಲ್ಲೆಯಲ್ಲಿ ನಡೆಸಲಾಯಿತು.
ಗುಂಪಿನಿಂದ ಹತ್ಯೆಯಾಗಿದ್ದ ವ್ಯಕ್ತಿಯನ್ನು ಮೊದಲು ಅಪರಿಚಿತ ಎಂದು ಕಂಡುಬಂದಿತ್ತು. ಆ ಬಳಿಕ ಗುರುತನ್ನು ಪತ್ತೆ ಹಚ್ಚಲಾಗಿದ್ದು, ಕೇರಳದ ವಯನಾಡ್ ಜಿಲ್ಲೆಯ ಮಾನಂದವಾಡಿ ತಾಲೂಕಿನ ಪುಲ್ಪಳ್ಳಿ ನಿವಾಸಿ ಮುಹಮ್ಮದ್ ಅಶ್ರಫ್(38) ಎಂದು ಗುರುತಿಸಲಾಗಿತ್ತು.
ಮರಣೋತ್ತರ ಪರೀಕ್ಷೆಯ ನಂತರ ವೆನ್ಲಾಕ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲೇ ಇರಿಸಲಾಗಿತ್ತು. ಮಂಗಳವಾರ ರಾತ್ರಿ ಮಂಗಳೂರಿಗೆ ಅಶ್ರಫ್ ಅವರ ತಮ್ಮ ಅಬ್ದುಲ್ ಜಬ್ಬಾರ್ ಅವರು ಆಗಮಿಸಿದ ಬಳಿಕ ಮೃತದೇಹವನ್ನು ಮಂಗಳೂರಿನ ಕೇಂದ್ರ ಜುಮಾ ಮಸೀದಿಯಾದ ಝೀನತ್ ಭಕ್ಷ್ ಮಸೀದಿಯಲ್ಲಿ ಸ್ನಾನ ಮಾಡಿಸಿ, ಆ್ಯಂಬುಲೆನ್ಸ್ನ ಮೂಲಕ ಕೇರಳಕ್ಕೆ ಕೊಂಡೊಯ್ಯಲಾಗಿತ್ತು.
ಸದ್ಯ ಅಶ್ರಫ್ ಅವರ ಕುಟುಂಬವು ಮಲಪ್ಪುರಂ ಜಿಲ್ಲೆಯ ಚೋಲಕ್ಕುಂಡು ಎಂಬಲ್ಲಿ ವಾಸಿಸುತ್ತಿದ್ದು, ಅಲ್ಲಿಯೇ ಸಮೀಪದ ಮಸೀದಿಯಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ.

ಮೃತಪಟ್ಟ ಅಶ್ರಫ್ ಅವರು ಸಣ್ಣ ಪ್ರಮಾಣದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ನಿರ್ದಿಷ್ಟವಾದ ಕೆಲಸ ಎಂಬುದು ಇರಲಿಲ್ಲ. ಅವರು ಊರೂರು ತಿರುಗುತ್ತಾ ಸಿಕ್ಕಿದ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮಗನ ಮೃತದೇಹ ಕಂಡು ಕಣ್ಣೀರಿಟ್ಟ ತಾಯಿ ರುಕಿಯಾ
ಮೃತಪಟ್ಟ ಅಶ್ರಫ್ ಅವರು ಮಾನಸಿಕವಾಗಿ ಸ್ವಲ್ಪ ಸಮಸ್ಯೆ ಇದ್ದುದ್ದರಿಂದ ವಿವಾಹಿತರಾಗಿರಲಿಲ್ಲ. ತಂದೆ ಕುಂಞೀದುಕ್ಕ ಹಾಗೂ ತಾಯಿ ರುಕಿಯಾ ಸೇರಿದಂತೆ ಇಬ್ಬರು ಸಹೋದರಿಯರು ಹಾಗೂ ಇಬ್ಬರು ಸಹೋದರರನ್ನು ಅಗಲಿದ್ದಾರೆ.
ಅಶ್ರಫ್ ಅವರ ಮೃತದೇಹ ವೀಕ್ಷಿಸಲು ಕುಟುಂಬದ ಸದಸ್ಯರಿಗೆ ಆ್ಯಂಬುಲೆನ್ಸ್ನಲ್ಲಿಯೇ ವ್ಯವಸ್ಥೆ ಮಾಡಿದ್ದರು. ಮಗನ ಮೃತದೇಹ ಊರಿಗೆ ತಲುಪುತ್ತಿದ್ದಂತೆಯೇ ಆ್ಯಂಬುಲೆನ್ಸ್ನಲ್ಲಿದ್ದ ಮಗನ ಮೃತದೇಹವನ್ನು ವೀಕ್ಷಿಸಿದ ತಾಯಿ ರುಕಿಯಾ ಅವರು, ಕಣ್ಣೀರಿಟ್ಟು ಮಗನ ಹಣೆಗೆ ಮುತ್ತಿಟ್ಟು, ಬೀಳ್ಕೊಟ್ಟರು. ಈ ದೃಶ್ಯ ನೋಡಿ, ಅಲ್ಲಿ ನೆರೆದಿದ್ದವರೆಲ್ಲ ಕಣ್ಣೀರಾದರು.
ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡಿದ ಅಶ್ರಫ್ ಅವರ ಸಹೋದರ ಹಮೀದ್, “ನನ್ನ ತಮ್ಮ ಯಾರೊಂದಿಗೂ ಹೆಚ್ಚು ಮಾತನಾಡುವ ಸ್ವಭಾವದವನಲ್ಲ. ಮಾನಸಿಕ ಸಮಸ್ಯೆ ಇದ್ದರೂ ಕೂಡ ಕಾರ್ಮಿಕನಾಗಿ ದುಡಿಯುತ್ತಿದ್ದ. ಕೈಯ್ಯಲ್ಲಿ ಸಿಕ್ಕ ಹಣವನ್ನು ತಮಗಿಷ್ಟ ಬಂದವರಿಗೆ ಹಂಚುತ್ತಿದ್ದ. ಮನಸಾದಾಗ ಅಮ್ಮನನ್ನು ನೋಡಲು ಊರಿಗೆ ಬರುತ್ತಿದ್ದ. ಕಳೆದ ಎರಡು ತಿಂಗಳ ಹಿಂದಷ್ಟೇ ಅಮ್ಮನನ್ನು ನೋಡಲು ಬಂದಿದ್ದ. ಸಾಧು ಸ್ವಭಾವದವನ್ನು ಹೊಡೆದು ಕೊಂದವರಿಗೆ ಸರಿಯಾದ ಶಿಕ್ಷೆ ಆಗಲೇಬೇಕು” ಎಂದು ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು ಘಟನೆ | ಇನ್ಸ್ಪೆಕ್ಟರ್ ಅಮಾನತು ಮಾಡಿ, ಉನ್ನತ ತನಿಖೆ ನಡೆಸಿ: ಗೃಹ ಸಚಿವರಿಗೆ ಉಸ್ತುವಾರಿ ಸಚಿವರಿಂದಲೇ ಪತ್ರ
“ಸಹೋದರ ಅಶ್ರಫ್ ಈ ಹಿಂದೆ ಬಾಂಬೆಗೂ ಹೋಗಿದ್ದರು. ಅಲ್ಲಿ ನೋಡಿದ ನಮ್ಮ ಪರಿಚಯದವರು ನಮಗೆ ತಿಳಿಸಿದ್ದರು. ಮಾನಸಿಕವಾಗಿ ಸ್ವಲ್ಪ ಸಮಸ್ಯೆ ಇದ್ದುದ್ದರಿಂದ ಚಿಕಿತ್ಸೆ ಕೂಡ ನೀಡಲು ಶ್ರಮಿಸಿದ್ದೆವು. ಆದರೂ ಗುಣಮುಖರಾಗಿರಲಿಲ್ಲ. ಅವರು ಊರೂರು ತಿರುಗುತ್ತಾ ಸಿಕ್ಕಿದ ಕೆಲಸ ಮಾಡುತ್ತಿದ್ದರು. ಸಹೋದರನ ಗುಂಪು ಹತ್ಯೆಗೆ ಕಾರಣರಾದ ಪ್ರತಿಯೊಬ್ಬರಿಗೂ ಕರ್ನಾಟಕ ಸರ್ಕಾರ ಶಿಕ್ಷೆಯಾಗುವಂತೆ ಮಾಡಬೇಕೆಂಬುದೇ ನಮ್ಮ ಆಗ್ರಹ. ನ್ಯಾಯ ಸಿಗಲಿದೆ ಎಂಬುದು ನಮ್ಮ ನಂಬಿಕೆ. ಓರ್ವನನ್ನು ಈ ರೀತಿಯಲ್ಲಿ ಹೊಡೆದು ಕೊಲ್ಲುತ್ತಾರೆಂದರೆ ಅವರು ಮನುಷ್ಯರೇ?” ಎಂದು ಮೃತ ಅಶ್ರಫ್ ಅವರ ಸಹೋದರ ಹಮೀದ್ ಈದಿನ ಡಾಟ್ ಕಾಮ್ ಜೊತೆಗೆ ಮಾತನಾಡುತ್ತಾ ಭಾವುಕರಾದರು.

ಈವರೆಗೆ 20 ಮಂದಿಯ ಬಂಧನ
ದಕ್ಷಿಣ ಕನ್ನಡ ಜಿಲ್ಲೆಯ ವಾಮಂಜೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಮುಸ್ಲಿಂ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಮತ್ತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆ ಮೂಲಕ ಈ ಪ್ರಕರಣದಲ್ಲಿ ಬಂಧಿತರಾದ ಒಟ್ಟು ಆರೋಪಿಗಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಬಂಧಿತ ಆರೋಪಿಗಳನ್ನು ಯತಿರಾಜ್, ಸಚಿನ್, ಅನಿಲ್, ಸುಶಾಂತ್ ಮತ್ತು ಆದರ್ಶ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಈ ಹಿಂದೆ ಇದೇ ಪ್ರಕರಣದಲ್ಲಿ 15 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಐವರನ್ನು ಬಂಧಿಸುವ ಮೂಲಕ ತನಿಖೆಗೆ ಮತ್ತಷ್ಟು ಬಲ ಬಂದಿದೆ ಎಂದಿದ್ದಾರೆ.