ಮಂಗಳೂರಿನಲ್ಲಿ ಮೂರೇ ದಿನಗಳಲ್ಲಿ ಎರಡು ಹತ್ಯೆಗಳು ನಡೆದಿವೆ. ಕೇರಳ ಮೂಲದ ಮುಸ್ಲಿಂ ವಲಸೆ ಕಾರ್ಮಿಕನನ್ನು ಹಿಂದುತ್ವವಾದಿ ಗುಂಪೊಂದು ಹೊಡೆದು ಕೊಂದ ಮೂರೇ ದಿನಗಳಲ್ಲಿ ರೌಡಿಶೀಟರ್ ಸುಹಾಸ್ ಶೆಟ್ಟಿ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಕೊಲೆ ಮಾಡಲಾಗಿದೆ. ಮಂಗಳೂರು ಪ್ರಕ್ಷ್ಯುಬ್ದಗೊಂಡಿದೆ. ಹಿಂಸೆ ಮೇಲೆ ಹಿಂಸೆ, ಕೊಲೆಯ ಮೇಲೊಂದು ಕೊಲೆಗಳು ನಡೆಯುತ್ತಿವೆ. ಆದರೆ, ಹಿಂಸೆಗೆ ಹಿಂಸೆಯೇ ಪರಿಹಾರವಲ್ಲ, ಕೊಲೆಗೆ ಕೊಲೆಯೇ ನ್ಯಾಯವಲ್ಲ, ಬೆಂಕಿ ಆರಿಸಲು ಬೆಂಕಿಯೇ ಮದ್ದಲ್ಲ. ಬೆಂಕಿ ಆರಿಸಲು ಬೇಕಿರುವುದು ನೀರು ಎಂದು ಕರಾವಳಿಯ ಜನರು ಹೇಳುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಇತ್ತೀಚೆಗೆ, ಮಂಗಳೂರಿನಲ್ಲಿ ನಡೆದ ಎರಡು ಕೊಲೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಬಿ.ವಿ ಭಟ್ ಎಂಬವರು, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಈಗ ಕೊಲೆ, ಅತ್ಯಾಚಾರ, ದರೋಡೆ, ಮೋಸ, ವಂಚನೆ, ಅನ್ಯಾಯ, ಭೃಷ್ಟಾಚಾರ, ಲೂಟಿ, ಸುಲಿಗೆ ಯಾವುದೂ ಚರ್ಚೆ ಅಗ್ತಿಲ್ಲ. ಎಲ್ಲವನ್ನೂ ಜಾತಿ ಧರ್ಮದ ಮೇಲೆ ನಿರ್ಧರಿಸಲಾಗುವ ದುರಂತ ದುಸ್ಥಿತಿಗೆ ನಮ್ಮ ಜಿಲ್ಲೆ ಬಂದಿದೆ. ನಿಜವಾಗಿ ಕೊಲೆ ಮಾಡುವ ದುಷ್ಟರಿಗೆ ಜಾತಿ ಧರ್ಮ ಯಾವುದೂ ಇರಲ್ಲ. ಅವರನ್ನ ನಾವು ಪುರಾಣದ ಕತೆಗಳಲ್ಲಿ ರಾಕ್ಷಸರು ಎಂದಷ್ಟೇ ಕರೆಯುತ್ತಿದ್ದೆವು. ಜಾತಿ ಹೆಸರಲ್ಲಿ ಗುರುತಿಸುತ್ತಿರಲಿಲ್ಲ. ಮನುಷ್ಯರನ್ನ ಬದುಕಲು ಬಿಡದ, ಭಯೋತ್ಪಾದನೆ ಮಾಡುತ್ತಿರುವ, ತನ್ನನ್ನೇ ದೇವರೆಂದು ಪೂಜಿಸಬೇಕೆಂದು ಹೇಳಿಕೊಳ್ಳುವ, ತಾನು ಪೂಜಿಸುವ ದೇವರನ್ನಷ್ಟೇ ಎಲ್ಲರೂ ಪೂಜಿಸಬೆಕೆಂದು ನಿರ್ಭಂದಿಸುವ ಇತ್ಯಾದಿ ರಾಕ್ಷಸೀಯ ಪ್ರವೃತ್ತೀ ಇರುವ ಎಲ್ಲಾ ದುಷ್ಟರನ್ನ ನಾಶ ಮಾಡಲು, ಈ ಅಧರ್ಮ ಕೊನೆಗಾಣಿಸಲು ಹಿಂದೆ ಅವತಾರಿಗಳು ಬಂದಂತೆ ಇಂದು ಮತದಾರ ದೇವರುಗಳು, ಶ್ರಮಜೀವಿ ವರ್ಗ ಒಟ್ಟಾಗಬೇಕು. ಈ ನೀಚತನಗಳ ವಿರುದ್ದ ಐಕ್ಯ ರಣ ಕಹಳೆ ಮೊಳಗಿಸಬೇಕು. ಜನತಾ ಪ್ರಜಾಪ್ರಭುತ್ವ ಜಾರಿಗೆ ಸಿದ್ದರಾಗಬೇಕು” ಎಂದಿದ್ದಾರೆ.
“ಕೊಲೆಗೆ ಕೊಲೆಯಾಗಲಿ, ಹಿಂಸೆಗೆ ಹಿಂಸೆಯಾಗಲಿ ಪರಿಹಾರ ಅಲ್ಲ ಎಂಬ ಸತ್ಯವ ಮನವರಿಕೆ ಮಾಡಿಕೊಳ್ಳೋಣ. ಕೊಲ್ಲುವುದರಲ್ಲಿ ಸ್ಪರ್ದೆ ಬೇಡ. ಇದರಲ್ಲಿ ಪ್ರತಿಷ್ಟೆ ಬೇಡ. ಶಾಂತಿಯಿಂದ ಎದುರಿಸೋಣ. ಈಗ ಶಾಂತಿ ರಕ್ಷಣೆಗೆ ಅಹಿತಕರ ಘಟನೆಗಳಾಗದಂತೆ ಎಚ್ಚರ ವಹಿಸೋಣ. ದ.ಕ. ಜಿಲ್ಲೆಯ ಪೋಲೀಸರಿಗೆ ಪೂರ್ಣ ಬೆಂಬಲ ನೀಡಿ ಜಿಲ್ಲೆಯನ್ನು ಉಳಿಸೋಣ. ಜಿಲ್ಲೆಯ ಜನರಿಗೆ ಬದುಕುವ ದೈರ್ಯ ತುಂಬಲು ಶ್ರಮಿಸೋಣ. ಜನಪ್ರತಿನಿಧಿಗಳು ಕೂಡಾ ಉದ್ರೇಕ ಕಾರಿ ಹೇಳಿಕೆ ಕೊಡುವ ಬದಲು ಜನಶಾಂತಿಯಿಂದ ಇರುವಂತೆ ಕರೆ ನೀಡುವವರಾಗಬೇಕು. ಅದರ ಬದಲು ಕೆಲವರು ಮತ್ತಷ್ಟು ಹಿಂಸೆಗೆ ಕರೆ ಕೊಡುವ ರೀತಿ ಪ್ರತಿಕಾರ ತೀರಿಸಲು ಬದ್ದ ಎಂದು ಹೇಳಿಕೆ ಕೊಡುವುದು ಖಂಡನೀಯ. ಅವರ ವಿರುದ್ದ ಸರಕಾರ ತಕ್ಷಣ ಕ್ರಮಕೈಗೊಳ್ಳಬೇಕು. ಸರ್ವೇ ಜನ ಸುಖಿನೋ ಭವಂತು, ವಸುದೈವ ಕುಟುಂಬಕಂ ಎಂಬ ಸಂದೇಶ ಮರೆಯದಿರೋಣ” ಎಂದು ಹೇಳಿದ್ದಾರೆ.
ಮಂಗಳೂರಿನ ಸತೀಶ್ ಆರ್ ಪೂಜಾರಿ ಎಂಬವರು ಪ್ರತಿಕ್ರಿಯಿಸಿದ್ದು, “ಕರಾವಳಿಯಲ್ಲಿ ಕುಖ್ಯಾತ ರೌಡಿಶೀಟರ್ ಸುಹಾಸ್ ಶೆಟ್ಟಿ ಎಂಬಾತನ ಬರ್ಬರವಾಗಿ ಹತ್ಯೆಯಾಗಿದೆ. ಈತ ಎರಡು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಕೊಲೆಯತ್ನ ಸಹಿತ 23 ಪ್ರಕರಣದಲ್ಲಿ ಆರೋಪಿಯಾಗಿದ್ದ. ಕತ್ತಿ ಹಿಡಿದವನು ಕತ್ತಿಯಿಂದಲೇ ಹತ್ಯೆಯಾದ. ಅಷ್ಟರಲ್ಲೇ ನಳಿನ್ ಕುಮಾರ್ ಕಟೀಲ್ ಕ್ಷಣಾರ್ಧದಲ್ಲಿ ಭೇಟಿ ನೀಡಿ ಕೋಮು ಬಣ್ಣ ಬಳಿದರು. ಮಾಧ್ಯಮಗಳು ಸಂಪೂರ್ಣವಾಗಿ ವೈಭವೋಪೇತ ಸುದ್ದಿ ಪ್ರಸಾರ ಮಾಡುವಲ್ಲಿ ಬ್ಯುಸಿ ಆಗಿವೆ. ಇದರಿಂದ ಇನ್ನಷ್ಟು ಕೆರಳಿದ ಹಿಂದು ಕಾರ್ಯಕರ್ತರು ನಾಳೆ ಮುಸ್ಲಿಮರ ಎರಡು ವಿಕೆಟ್ ಪತನ ಖಚಿತ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಹತ್ಯೆಗಳು ಮುಂದುವರಿಯುವಂತೆ ಕಾಣುತ್ತದೆ. ಹಾಗಾಗಿ ಪೋಲಿಸರು ತಕ್ಷಣ ಜಿಲ್ಲೆಗೆ ಸೆಕ್ಷನ್ ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕಾಶ್ಮೀರಿಯೊಬ್ಬಳ ನಿತ್ಯ ನಿಜಾಯಿತಿಯ ಸತ್ಯ ಸ್ವಗತ
“ಎರಡು ದಿನಗಳ ಹಿಂದೆಯಷ್ಟೇ ಹಿಂದೂ ಕಾರ್ಯಕರ್ತರಿಂದ ಮುಸ್ಲಿಂ ಯುವಕನ ಹತ್ಯೆ ಕೂಡ ಆಗಿತ್ತು. ಕಳೆದ ಬಾರಿ ಪ್ರವೀಣ್ ನೆಟ್ಟಾರ್ ಹತ್ಯೆಯ ಸಂದರ್ಭದಲ್ಲಿ ಪೋಲಿಸರು ಶವ ಮೆರವಣಿಗೆಗೆ ಅವಕಾಶ ನೀಡಿ ಹಿಂದು ಕಾರ್ಯಕರ್ತರನ್ನು ಇನ್ನಷ್ಟು ಕೆರಳಲು ಅವಕಾಶ ಮಾಡಿ ನಂತರ ಫಾಝಿಲ್ ಎಂಬಾತನ ಹತ್ಯೆಗೆ ಕಾರಣವಾಗಿತ್ತು. ಈ ಘಟನೆಯಲ್ಲಿ ಯಾರಿಗೂ ಯಾವುದೇ ತಾಲೂಕು ಬಿಟ್ಟು ಬಾರದಂತೆ ಪೋಲಿಸ್ ಇಲಾಖೆ ಆದೇಶ ಹೊರಡಿಸಬೇಕು. ದುರದೃಷ್ಟವಶಾತ್ ಓರ್ವ ಯುವಕನ ಹತ್ಯೆ ಆಗಿದೆ. ಆತನ ಹಿನ್ನೆಲೆ ಏನೇ ಇರಲಿ ಪೋಲಿಸ್ ಇಲಾಖೆ ಕಟ್ಟೆಚ್ಚರ ವಹಿಸಬೇಕು. ಯುವಜನರನ್ನು ಕೆರಳಿಸಲು ಹಿಂದು ನಾಯಕರು ಮುಂದೆ ಬರಬಹುದು. ನಂತರ ಮಚ್ಚು ಲಾಂಗು ಹಿಡಿದು ನಾಳೆ ಹಿಂದು ಯುವಕರು ಬಂದು ಇನ್ನೊಂದು ಹತ್ಯೆ ಮಾಡಬಹುದು. ಇಂದು ಅದೇ ಮರುಕಳಿಸಿದೆ ಫಾಝಿರ್ ಕೊಂದಾತನು ಇಂದು ಶವವಾಗಿದ್ದಾನೆ. ಹತ್ಯೆ ಆದಾಗ ಕುಟುಂಬದ ಹೆತ್ತವರಿಗೆ ಮಾತ್ರ ನಷ್ಟ ಹೊರತು ಇಂದು ಬಂದು ಕೆರಳಿಸಿದ ಯಾವ ರಾಜಕೀಯ ನಾಯಕನ ಮಗನೋ, ಸಹೋದರನೋ ಇಂತಹ ಕೊಲೆ, ದೊಂಬಿ, ಗಲಾಟೆಯಲ್ಲಿ ಭಾಗಿ ಆಗುವುದಿಲ್ಲ. ಬದಲು ನಿಮ್ಮ ಮೇಲಿನ ಕೇಸು, ನಿಮ್ಮ ಹತ್ಯೆ ಅವರಿಗೆ ಮತ ಪಡೆಯುವ ವೇದಿಕೆ ಆಗುತ್ತದೆ. ಈ ಸಂದೇಶವನ್ನು ಪ್ರತಿ ಮನೆಯವರಿಗೂ ತಲುಪಿಸಿ. ನಿಮ್ಮ ಮಕ್ಕಳನ್ನು ನಿಮ್ಮ ಮನೆಯಲ್ಲೇ ಇರಿಸಿ” ಎಂದು ಆಗ್ರಹಿಸಿದ್ದಾರೆ.
ಎ.ಕೆ ಕುಕ್ಕಿಲ ಎಂಬವರು, “ಮೊಟ್ಟ ಮೊದಲ ಗುಂಪು ಹತ್ಯೆಯ ಆಘಾತದಿಂದ ದಕ್ಷಿಣ ಕನ್ನಡ ಜಿಲ್ಲೆ ಇನ್ನೂ ಹೊರಬರುವ ಮೊದಲೇ ಇನ್ನೊಂದು ಹತ್ಯೆಯಾಗಿದೆ. ಇದರಿಂದಾಗಿ ಬಸ್ ಗಳು ಓಡಾಟ ನಿಲ್ಲಿಸಿವೆ. ವಾಹನ ಸಂಚಾರ ಕಡಿಮೆಯಾಗಿದೆ. ಜನರೂ ಕಡಿಮೆಯಾಗಿದ್ದಾರೆ. ಬಂದರು, ರೈಲು ಮತ್ತು ವಿಮಾನ ನಿಲ್ದಾಣ… ಈ ಮೂರೂ ಸೌಲಭ್ಯಗಳುಳ್ಳ ಜಿಲ್ಲೆಯೊಂದು ಪದೇ ಪದೇ ಹಿಂಸೆಯ ಕಾರಣಕ್ಕಾಗಿ ಸುದ್ದಿಯಲ್ಲಿರುವುದು ನಿಜಕ್ಕೂ ದುರದೃಷ್ಟಕರ. ಇದರ ಹೊಣೆಯನ್ನು ಯಾರು ವಹಿಸಿಕೊಳ್ಳಬೇಕು? ಸಂಜೆ 7ರ ನಂತರ ದಕ್ಷಿಣ ಕನ್ನಡ ಜಿಲ್ಲೆ ಡೆಡ್ ಆಗುತ್ತದೆ ಎಂದು ಉಪಮುಖ್ಯಮಂತ್ರಿ ಹೇಳುತ್ತಾರೆ. ಸರ್ಕಾರ ಅವರದು. ಗೃಹ ಸಚಿವರೂ ಅವರದೇ. ಹೀಗಿರುವಾಗ ದಕ್ಷಿಣ ಕನ್ನಡ ಜಿಲ್ಲೆಯನ್ನು ಶಾಂತಿಯುತವಾಗಿ ಇಟ್ಟುಕೊಳ್ಳಬೇಕಾದ ಹೊಣೆಗಾರಿಕೆ ಯಾರದು? ಡೆಡ್ ಆಗದಂತೆ ನೋಡಿಕೊಳ್ಳಬೇಕಾದವರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾಗುವಂತೆ ನೋಡಿಕೊಳ್ಳಬೇಕಾದವರು ಬರೇ ಸಮಸ್ಯೆಯನ್ನು ಹೇಳಿ ಸುಮ್ಮನಿದ್ದರೆ ಸಾಕೇ” ಎಂದು ಪ್ರಶ್ನಿಸಿದ್ದಾರೆ.
“ವಯನಾಡಿನ ಅಶ್ರಫ್ ಹತ್ಯೆಯನ್ನು ಖಂಡಿಸಿ ಜಿಲ್ಲೆಯಲ್ಲಿ ಹೇಳಿಕೆ, ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ಸುಹಾಸ್ ಶೆಟ್ಟಿಯ ಹತ್ಯೆ ನಡೆದಿದೆ. ಇನ್ನೀಗ ಪುನಃ ಪ್ರತಿಭಟನೆ, ಹೇಳಿಕೆ, ಬಂದ್, ನಿಷೇಧಜ್ಞೆಗಳನ್ನು ಜಿಲ್ಲೆ ಸಹಿಸಿಕೊಳ್ಳಬೇಕು. ಸುಹಾಸ್ ಶೆಟ್ಟಿಯ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಕಾನೂನನ್ನು ಕೈಗೆತ್ತಿಕೊಳ್ಳುವವರು ಯಾರೇ ಇರಲಿ , ಅವರ ಧರ್ಮ ಮತ್ತು ಸಂಘಟನೆಗಳನ್ನು ನೋಡದೆ ಖಂಡಿಸುವುದಕ್ಕೆ ಮತ್ತು ಸಮಾಜದ ಮುಖ್ಯ ವಾಹಿನಿಯಿಂದ ಅವರನ್ನು ಪ್ರತ್ಯೇಕಿಸಿ ಇಡುವುದಕ್ಕೆ ಎಲ್ಲರೂ ಮುಂದಾಗಬೇಕು. ಹತ್ಯೆ ಯಾವುದಕ್ಕೂ ಪರಿಹಾರ ಅಲ್ಲ. ಅದು ಇನ್ನೊಂದು ಸಮಸ್ಯೆಯ ಆರಂಭ. ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಿದವರನ್ನು ಪೊಲೀಸ್ ಇಲಾಖೆ ಹೆಡೆಮುರಿ ಕಟ್ಟಲಿ. ಅವರಿಗೆ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳಲಿ” ಎಂದು ಒತ್ತಾಯಿಸಿದ್ದಾರೆ.