ಬೆಳ್ತಂಗಡಿ ತಾಲ್ಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ನಿವಾಸಿ ಜೋಸ್ಸಿ ಅಲ್ವಿನ್ ಲೋಬೋ ಅವರ ಮನೆಗೆ ಮೇಲೆ ಜು. 12ರಂದು ತಡರಾತ್ರಿ ಬೆಳ್ತಂಗಡಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿ ಕಾಡು ಪ್ರಾಣಿಯ 17 ಕೆಜಿ ಮಾಂಸ ಮತ್ತು ಬೇಟೆಗೆ ಬಳಸಿದ ಕೋವಿ ಸೇರಿದಂತೆ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಡು ಪ್ರಾಣಿಯನ್ನು ಭೇಟೆಯಾಡಿ ಮಾಂಸ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಕಾರಿನಲ್ಲಿ ಸಾಗಿಸುವ ವೇಳೆ ಖಚಿತ ಮಾಹಿತಿ ಮೇರೆಗೆ ಇಲಾಖೆಯ ಸಿಬ್ಬಂದಿಗಳು ದಾಳಿ ನಡೆಸಿದ್ದರು. ಕುಲಾಯಿ ಮೇಗಿನ ಮನೆ ನಿವಾಸಿ ಶರತ್ ಶೆಟ್ಟಿಗೆ ಸೇರಿದ ಬಿಳಿ ಬಣ್ಣದ ಕಾರು, ಒಂದು ಸಿಂಗಲ್ ಬ್ಯಾರಲ್ ಕೋವಿ, ಮೂರು ಕಾಟ್ರಿಜ್, ಕತ್ತಿಯನ್ನು ದಾಳಿ ವೇಳೆ ವಶಪಡಿಸಿಕೊಂಡಿದ್ದಾರೆ.
ದಾಳಿ ವೇಳೆ ಸಿಕ್ಕ ಮಾಂಸವನ್ನು ಯಾವ ಪ್ರಾಣಿಯದ್ದು, ಎಂದು ತಿಳಿಯಲು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯಲ್ಲಿ ಆರೋಪಿಗಳಾದ ಜೋಸ್ಸಿ ಅಲ್ವಿನ್ ಲೋಬೋ ಮತ್ತು ಶರತ್ ಶೆಟ್ಟಿ ವಿರುದ್ಧ ವನ್ಯಜೀವಿ ಅಪರಾಧ ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.
ಇದನ್ನೂ ಓದಿ: ಪುತ್ತೂರು-ಮಂಗಳೂರು ತಡೆರಹಿತ ಬಸ್ಗೆ ಶಾಸಕ ಅಶೋಕ್ ಕುಮಾರ್ ಚಾಲನೆ
ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಟಿ.ಎನ್., ಡಿಆರ್ಎಫ್ಒ ಸಂದೀಪ್, ರಾಘವೇಂದ್ರ, ಕಿರಣ್ ಪಾಟೀಲ್, ಕಮಲಾ, ಬೀಟ್ ಫಾರೆಸ್ಟರ್ ಪರಶುರಾಮ ಮೇಟಿ, ಚಾಲಕ ದಿವಾಕರ ತಂಡದಲ್ಲಿದ್ದರು.
20ಕ್ಕೂ ಹೆಚ್ಚು ಸದ್ಯಸರಿಂದ ಬೇಟೆ?
ಕಾಡುಪ್ರಾಣಿ ಬೇಟೆ ತಂಡದಲ್ಲಿ ಬೆಳ್ತಂಗಡಿ ತಾಲ್ಲೂಕಿನ 20ಕ್ಕೂ ಹೆಚ್ಚು ಸದಸ್ಯರು ಇದ್ದರು ಎನ್ನುವ ಮಾಹಿತಿ ಇದೆ. ಈ ತಂಡದಲ್ಲಿ ಇದ್ದ ಕೆಲವರ ಪೈಕಿ ಪರವಾನಿಗೆ ಇರುವ ಕೋವಿಯಿದ್ದರೆ ಇನ್ನೂ ಕೆಲವರು ಅಕ್ರಮ ಕೋವಿ ಹೊಂದಿದರು. ಈ ಒಂದು ತಿಂಗಳಲ್ಲಿ 30ಕ್ಕೂ ಹೆಚ್ಚು ಕಾಡುಪ್ರಾಣಿಗಳನ್ನು ಬೇಟೆಯಾಡಿದ್ದಾರೆ ಎಂದು ಈ ಬೇಟೆಗಾರರ ಸದಸ್ಯನೊಬ್ಬ ಮಾಹಿತಿ ನೀಡಿದ್ದಾನೆ. ಹಗಲು ಹೊತ್ತಲ್ಲೇ ಹೆಚ್ಚಾಗಿ ಈ ತಂಡ ಬೇಟೆಯಲ್ಲಿ ನಿರತರಾಗುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.