ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಠಾಣೆಯಲ್ಲಿ ವಿವಾಹಿತ ಮಹಿಳೆಯೊಬ್ಬರು ಬೇರೆ ಸಮುದಾಯಕ್ಕೆ ಸೇರಿದ ಯುವಕನೊಂದಿಗೆ ಊರು ತೊರೆದಿದ್ದಾಳೆ ಎಂದು ಹೇಳಲಾಗುತ್ತಿರುವ ನಡುವೆಯೇ ಬಣಕಲ್ ಗ್ರಾಮದಲ್ಲಿ ಉದ್ವಿಗ ಪರಿಸ್ಥಿತಿ ಉಂಟಾಗಿದೆ.
ಗುಂಪೊಂದು ಬಣಕಲ್ ಠಾಣೆ ಎದುರು ಜಮಾಯಿಸಿದ್ದು, ಬಣಕಲ್ ಪಟ್ಟಣದಲ್ಲಿ ಏಕಾಏಕಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ. ಸಂಘಪರಿವಾರದ ನಾಯಕರು, ಕಾರ್ಯಕರ್ತರಿಗೂ ಪೊಲೀಸರಿಗೂ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಹಾವೇರಿ | ಮನೆ ತೊರೆದಿದ್ದ ಪ್ರೇಮಿಗಳು; ಯುವಕನ ಮಾವನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ
ತನ್ನ ಪತ್ನಿ ಮುಸ್ಲಿಮ್ ಯುವಕನೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ಮಹಿಳೆಯ ಪತಿ ಬಣಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದು ಪತ್ತೆ ಹಚ್ಚಿದ್ದಾರೆ ಎಂದು ವರದಿಯಾಗಿದೆ.
ಇದಾದ ಬೆನ್ನಲ್ಲೇ ಸಂಘಪರಿವಾರದ ನಾಯಕರು, ಕಾರ್ಯಕರ್ತರು ಮತ್ತು ಗ್ರಾಮಸ್ಥರು ಪೊಲೀಸ್ ಠಾಣೆ ಎದುರು ಜಮಾಯಿಸಿದ್ದಾರೆ. ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಪೊಲೀಸರು ಗೇಟ್ ಮುಚ್ಚಿದ್ದು, ಜನರು ಏಕಾಏಕಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಇನ್ನು ಮಹಿಳೆಯು ತನ್ನನ್ನು ಯಾರೂ ಬಲವಂತದಿಂದ ಕರೆದೊಯ್ದಿಲ್ಲ ತಾನೇ ಮನೆಯಿಂದ ಹೋಗಿರುವುದಾಗಿ ಹೇಳಿಕೆ ನೀಡಿದ್ದಾರೆ. ಸದ್ಯ ಮಹಿಳೆಯನ್ನು ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಲಾಗಿದೆ. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
