ಶಾಸಕರೊಂದಿಗೆ ಹಳ್ಳಿಗಳಿಗೆ ತೆರಳಿದ ಅಧಿಕಾರಿಗಳ ದಂಡು | ಅನಾಥ ಮಕ್ಕಳಿಗೆ 2 ಲಕ್ಷ ಧನಸಹಾಯ ನೀಡದ ಶಾಸಕ
ಚಿಕ್ಕಬಳ್ಳಾಪುರ ನಗರ ಶಾಸಕ ಪ್ರದೀಪ್ ಈಶ್ವರ್ ಜನರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ʼನಮ್ಮ ಊರಿಗೆ ನಮ್ಮ ಶಾಸಕರುʼ ನೂತನ ಕಾರ್ಯಕ್ರಮವನ್ನು ರೂಪಿಸಿದ್ದು, ಬುಧವಾರ ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಸಂಚರಿಸಿದರು.
ಘಟ್ಟಿಗಾನಹಳ್ಳಿಯಿಂದ ಆರಂಭವಾದ ಗ್ರಾಮ ಸಂಚಾರ ಕಾರ್ಯಕ್ರಮದಲ್ಲಿ ಶಾಸಕರೊಂದಿಗೆ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಆರೋಗ್ಯ, ಬೆಸ್ಕಾಂ, ಆಹಾರ, ಸರ್ವೆ ಹೀಗೆ ವಿವಿಧ ಇಲಾಖೆಗಳ ಅಧಿಕಾರಿಗಳ ದಂಡು ಬಸ್ನಲ್ಲಿ ಚಿಗಟೇನಹಳ್ಳಿ, ಕಳವಾರ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿ, ಅಹವಾಲುಗಳನ್ನು ಸ್ವೀಕರಿಸಿದರು.
ನುಡಿದಂತೆ ನಡೆದ ಶಾಸಕ
ಕೆಲವು ತಿಂಗಳ ಹಿಂದೆ ಹಾಸನದ ಬಳಿ ಅಪಘಾತದಲ್ಲಿ ಚಿಗಟೇನಹಳ್ಳಿ ಗ್ರಾಮದವರು ಮೃತಪಟ್ಟಿದ್ದರು. ಅವರ ಮನೆಗೆ ಭೇಟಿ ನೀಡಿದ್ದ ಪ್ರದೀಪ್ ಈಶ್ವರ್ ಮಕ್ಕಳ ಶಿಕ್ಷಣಕ್ಕೆ ನೆರವಾಗುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆ ಇಂದು ಅವರ ಮನೆಗೆ ಭೇಟಿ ನೀಡಿದ ಶಾಸಕರು ಇಬ್ಬರು ಮಕ್ಕಳಿಗೆ ಎರಡು ಲಕ್ಷ ಧನ ಸಹಾಯ ನೀಡಿದರು. ಈ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಈ ಹಿಂದೆ ಮಕ್ಕಳಿಗೆ ನೆರವಾಗುವುದಾಗಿ ಹೇಳಿದ್ದೆ. ಇಂದು ಧನಸಹಾಯ ಮಾಡಿದ್ದೇನೆ. ಇದು ಅವರ ಶಿಕ್ಷಣಕ್ಕೆ ಅನುಕೂಲವಾಗಲಿದೆ. ನನಗೆ ಆಸ್ತಿ ಅಂತಸ್ತು ಮಾಡುವ ಆಸೆ ಇಲ್ಲ. ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಅರಿಶಿನ ಕುಂಕುಮದ ರೂಪದಲ್ಲಿ ಸೀರೆ ನೀಡುತ್ತಿದ್ದೇನೆ. ಸರ್ಕಾರಿ ಶಾಲೆಯ 25 ಸಾವಿರ ಮಕ್ಕಳಿಗೆ ಬಟ್ಟೆ ನೀಡಿದ್ದೇವೆ. ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದೇನೆ. ಆರೋಗ್ಯ ಸೇವೆಗೆ ಅಮ್ಮ ಆಂಬುಲೆನ್ಸ್ ಓಡಿಸಲಾಗುತ್ತಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೆಣ್ಣನ್ನು ದೇವಿಯೆಂದು ಪೂಜಿಸುವ ದೇಶದಲ್ಲಿ ದುಡಿಯವ ಹೆಣ್ಣಿನ ಡಬಲ್ ಶಿಫ್ಟ್!
ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ಬೆಳಕಾಗಿದೆ. ಗೃಹಲಕ್ಷ್ಮಿ ಯೋಜನೆಯು ಮಹಿಳೆಯರಿಗೆ ಅನುಕೂಲವಾಗಿದೆ. ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಕ್ಕೆ ಅವಕಾಶವಿದೆ. ನಮ್ಮ ಸರ್ಕಾರ ಬಡವರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಸರಕಾರದ ಯೋಜನೆಗಳನ್ನು ಬಣ್ಣಿಸಿದರು.
ಈ ವೇಳೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದರು.