ಶರಣ ಸಾಹಿತ್ಯ ಲೋಕಕ್ಕೆ ಡಾ.ಎಂ.ಎಂ.ಕಲಬುರ್ಗಿ ಅವರ ಕೊಡುಗೆ ಅನನ್ಯವಾಗಿದೆ. ಅವರು ಬಸವಾದಿ ಶರಣರ ಚಿಂತನೆಗಳನ್ನು ಸಂಶೋಧನೆಯ ಮೂಲಕ ಬೆಳಕಿಗೆ ತಂದಿದ್ದರು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಸ್ಮರಿಸಿದರು.
ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಹಿರೇಮಠ ಸಂಸ್ಥಾನದಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ ಎಂ.ಎಂ.ಕಲಬುರಗಿ ಅವರ 9ನೆಯ ಸ್ಮರಣೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಕಲಬುರಗಿ ಅವರ ಮಾರ್ಗ ಸಂಪುಟಗಳಲ್ಲಿ ಹೆಚ್ಚಿನ ಲೇಖನಗಳು ಶರಣ ಸಾಹಿತ್ಯ ಕುರಿತಾಗಿವೆ. ವಿಶೇಷವಾಗಿ ಸುಮಾರು 35 ಭಾಷೆಗಳಲ್ಲಿ ಪ್ರಕಟವಾಗಿರುವ ವಚನ ಗ್ರಂಥದ ಸಂಪಾದಕರಾಗಿ ಸಲ್ಲಿಸಿರುವ ಅವರ ಸೇವೆ ಅನುಪಮವಾಗಿದೆʼ ಎಂದರು.
ʼಕಲಬುರ್ಗಿ ಅವರ ಪ್ರಧಾನ ಸಂಪಾಕದತ್ವದಲ್ಲಿ ಕರ್ನಾಟಕ ಸರ್ಕಾರದಿಂದ ಜನಪ್ರಿಯ ವಚನ ಸಾಹಿತ್ಯ ಪ್ರಕಟಣೆ ಯೋಜನೆ ಕ್ರಿಯಾರೂಪಕ್ಕೆ ಬಂತು. ಅನೇಕ ಮಠಮಾನ್ಯಗಳಿಗೆ ಡಾ.ಕಲಬುರಗಿ ಅವರು ಹೊಸ ಹೊಸ ಯೋಜನೆಗಳನ್ನು ನೀಡಿ ಶರಣ ಸಾಹಿತ್ಯದ ಕುರಿತು ಶೈಕ್ಷಣಿಕ ಶಿಸ್ತಿನ ಕಾರ್ಯವನ್ನು ಮಾಡಿಸಿಕೊಂಡಿದ್ದಾರೆʼ ಎಂದು ನುಡಿದರು.
ʼಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಅವರು ಮಾಡಿರುವ ಅಧ್ಯಯನ, ಸಂಶೋಧನಾ ಮುಂದಿನ ಜನಾಂಗಕ್ಕೆ ದಾರಿದೀಪವಾಗಿವೆ. ಅವರ ಚಿಂತನೆಗಳನ್ನು ಸಹಿಸಲಾಗದ ಸಾಂಪ್ರದಾಯವಾದಿಗಳು ಅವರ ಹತ್ಯೆಗೈದರು. ಕಲಬುರಗಿ ಅವರು ದೇಹರೂಪದಿಂದ ನಮ್ಮಿಂದ ಅಗಲಿದರೂ ಅವರ ಸಾಹಿತ್ಯ ಸಂಶೋಧನೆಯ ಮೂಲಕ ನಮ್ಮೊಂದಿಗೆ ಶಾಶ್ವತವಾಗಿ ಉಳಿದಿದ್ದಾರೆ. ಅವರ ಬಲಿದಾನ ಇಂದಿಗೂ ಹುಸಿ ಹೋಗಲಿಲ್ಲʼ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ‘ಈ ದಿನ’ ಫಲಶೃತಿ : ವರ್ಷದ ಬಳಿಕ ನಿಟ್ಟೂರ್ ಬಸ್ ನಿಲ್ದಾಣ ಕಾರ್ಯಾರಂಭ
ಕಾರ್ಯಕ್ರಮದಲ್ಲಿ ಶ್ರಾವಣ ಮಾಸ ಪ್ರವಚನ ಸೇವಾ ಸಮಿತಿ ಅಧ್ಯಕ್ಷೆ ನಿರ್ಮಲಾ ಚಂದ್ರಕಾಂತ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಚಂದ್ರಕಾಂತ ಪಾಟೀಲ, ಬಾಬುರಾವ ಹುಣಜೆ, ಡಾ.ವಿಶ್ವನಾಥಪ್ಪ ಬಿರಾದಾರ ಮುಂತಾದ ಗಣ್ಯರಿದ್ದರು. ಭಂಡಾರಿ ಶರಣರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ವೀರಣ್ಣ ಕುಂಬಾರ ನಿರೂಪಿಸಿದರು.