ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅಡವಿ ಸೋಮನಾಳ ಗ್ರಾಮದಲ್ಲಿ ಸರ್ವೆ ನಂಬರ್ 30 ರಲ್ಲಿಯ ಲಾಟರಲ್ ಕಾಲುವೆ ಬಲಬದಿಯ ಸರ್ವಿಸ್ ರಸ್ತೆಯನ್ನು ಜಮೀನು ಮಾಲೀಕ ಹನುಮಂತ ಪೂಜಾರಿ ಬಂದ್ ಮಾಡಿ, ತೊಗರಿ ಬಿತ್ತನೆ ಮಾಡಿರುವುದರಿಂದ ಆ ಜಮೀನಿನ ಕೆಳಗಿರುವ 30ಕ್ಕೂ ಹೆಚ್ಚು ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಪರಿಹಾರ ಧನ ಸಿಗದಿದ್ದಕ್ಕೆ ಜಮೀನು ಮಾಲೀಕ ಈ ರೀತಿಯ ಸವಾಲನ್ನು ಅಧಿಕಾರಿಗಳಿಗೆ ಎಸೆದಿದ್ದಾರೆ ಎಂದು ತಿಳಿದು ಬಂದಿದೆ.
ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡಲು ಆಗದಂತಹ ಪರಿಸ್ಥಿತಿ ಕಳೆದ ಮೂರು ವರ್ಷಗಳಿಂದ ಎದುರಿಸುತ್ತಿದ್ದು, ಅಧಿಕಾರಿಗಳ ಎಚ್ಚರಿಕೆಗೂ ಕೂಡ ಜಮೀನು ಮಾಲೀಕ ಬಗ್ಗದ್ದರಿಂದ, ಸಮಸ್ಯೆ ಅನುಭವಿಸುವಂತಾಗಿದೆ.
ಸರ್ವೆ ನಂಬರ್ 30ರ ಹಣಮಂತ ಪೂಜಾರಿ ತನ್ನ ಹೊಲದಲ್ಲಿ ಹೋಗಿರುವ ಲ್ಯಾಟರಲ್ ಸರ್ವಿಸ್ ರಸ್ತೆ ಬಂದ್ ಮಾಡಿ, ಲ್ಯಾಟರಲ್ ರಸ್ತೆಯನ್ನು ಕೃಷಿಗೆ ಬಳಕೆ ಮಾಡಿಕೊಂಡಿರುವುದರಿಂದ ಇತರೆ ರೈತರಿಗೆ ಸಮಸ್ಯೆಯಾಗುತ್ತಿದೆ.
ಇದರಿಂದ ಸತತವಾಗಿ ಮೂರು ವರ್ಷಗಳಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ಸಮಸ್ಯೆ ಎದುರಿಸುತ್ತಿರುವ ಸಂತ್ರಸ್ತ ರೈತರ ನಿಯೋಗವು ಸಾಕಷ್ಟು ಬಾರಿ ಕೆಬಿಜಿಎನ್ಎಲ್ ಅಧಿಕಾರಿಗಳಿಗೆ ಹೇಳಿದರೂ ಕೂಡ ಸಮಸ್ಯೆ ಬಗೆಹರಿದಿಲ್ಲ. ಇದರಿಂದ ಬೇಸತ್ತ ರೈತರು ಪ್ರತಿಭಟನೆ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.
ಸೋಮನಾಳದ ರೈತರು ಹನುಮಂತಪ್ಪ ಪೂಜಾರಿ ಅವರಿಗೆ ರಸ್ತೆಯ ವಿಷಯವಾಗಿ ಹಲವು ಬಾರಿ ಮನವರಿಕೆ ಮಾಡಿ ಕೊಟ್ಟಿದ್ದಾರೆ. ಅದರ ರೈತ ಬಗ್ಗಲಿಲ್ಲ. ಇದರಿಂದ ಅಸಹಾಯಕರಾಗಿದ್ದ ರೈತರು ಪ್ರಕರಣವನ್ನು ಪೊಲೀಸ್ ಇಲಾಖೆಗೆ ತಿಳಿಸಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಮುದ್ದೇಬಿಹಾಳದ ಕೆಬಿಜಿಎನ್ಎಲ್ ಸಹಾಯಕ ಎಇಇ ಅವರನ್ನು ಮಾತನಾಡಿಸಿದಾಗ, “ಸರ್ವೆ ನಂಬರ್ 30ರ ರೈತ ರಸ್ತೆ ಬಂದ್ ಮಾಡಿದ್ದು ಮೊದಲ ತಪ್ಪು. ರಸ್ತೆ ಮೇಲೆ ಬಿತ್ತನೆ ಮಾಡಿರುವುದು ಇನ್ನೊಂದು ತಪ್ಪು. 2013-14ರಲ್ಲಿ ಕಾಲುವೆ ಕಾಮಗಾರಿ ಮುಗಿದಿದೆ. ಇವರು ಒಂಬತ್ತು ವರ್ಷಗಳ ನಂತರ ಕೋರ್ಟಿಗೆ ಹೋಗಿದ್ದಾರೆ. ರಸ್ತೆ ಬಂದ್ ಆದಾಗಿನಿಂದ ಇತರೆ ರೈತರಿಗೆ ತೊಂದರೆ ಮಾಡುತ್ತಿದ್ದಾರೆ. ನಾವು ಅವರಿಗೆ ಪರಿಹಾರದ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ. ಇದಕ್ಕೂ ಮಣಿಯದ ಹೋದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇವೆ” ಎಂದು ಮಾಹಿತಿ ನೀಡಿದರು.
ಜಮೀನು ಮಾಲೀಕ, ರೈತ ಹಣಮಂತ ಪೂಜಾರಿ ಮಾತನಾಡಿ, ನನ್ನ ಜಮೀನಿನಲ್ಲಿ ಲೆಟರ್ ಕಾಲುವೆ ಹೋಗಿದೆ. ಅದಕ್ಕೆ ಸರ್ಕಾರ ಮತ್ತು ಅಧಿಕಾರಿಗಳು ಪರಿಹಾರ ಕೊಡುವುದನ್ನು ಬಿಟ್ಟು ರೈತರ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷವಾದರೂ ಪರಿಹಾರ ಸಿಕ್ಕಿಲ್ಲ. ನನಗೆ ಪರಿಹಾರ ಕೊಡಬೇಕು” ಎಂದು ಸರ್ಕಾರವನ್ನು ಆಗ್ರಹಿಸಿದರು.
ಈ ಬಗ್ಗೆ ಮುದ್ದೇಬಿಹಾಳ ತಾಲೂಕಿನ ತಹಶೀಲ್ದಾರರಾದ ಬಲರಾಮ ಕಟ್ಟಿಮನಿ ಅವರು ಮಾತನಾಡಿ, ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ರೈತನಿಗೆ ಮನವರಿಕೆ ಮಾಡಿ ರಸ್ತೆಯ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ರಸ್ತೆಯ ಸಮಸ್ಯೆಗೊಳಗಾಗಿರುವ ರೈತರು ಅಧಿಕಾರಿಗಳನ್ನು ಮತ್ತು ಪೊಲೀಸ್ ಇಲಾಖೆಯವರನ್ನು ಕರೆಸಿದ್ದು, ರಸ್ತೆಯ ಸಮಸ್ಯೆ ಇತ್ಯರ್ಥಗೊಳಿಸಿದ್ದಾರೆಂದು ಕೆಲವು ರೈತರು ಈ ದಿನದ ಕಾಂಗೆ ಮಾಹಿತಿ ನೀಡಿದ್ದಾರೆ.
ಮೂರು ವರ್ಷವಾದರೂ ಸರ್ಕಾರ ಜಮೀನು ತೆಗೆದುಕೊಂಡಿರುವುದು ಮತ್ತು ಕಾಮಗಾರಿ ಮುಗಿಸಿರುವುದು ಒಳ್ಳೆಯದು, ಆದರೆ ಪರಿಹಾರ ಇಲ್ಲಿಯವರೆಗೂ ಕೊಡದಿರುವುದು ದುರಂತವೇ ಸರಿ. ಇನ್ನಾದರೂ ಪರಿಹಾರ ಕೊಡುವರೇ ಕಾದು ನೋಡಬೇಕಾಗಿದೆ.
ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು