ಮೈಸೂರಿನ ಗಾನ ವೈದ್ಯ ಲೋಕ ಸಂಸ್ಥೆ ರಾಮಕೃಷ್ಣ ನಗರದ ರಮಾ ಗೋವಿಂದ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ‘ ಎಂದು ಮರೆಯದ ಹಾಡು-12 ‘ ವೈದ್ಯರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ ‘ ಸಂಗೀತಕ್ಕೆ ಮನೋ ಚಿಕಿತ್ಸೆ ಗುಣವಿದೆ ‘ ಎಂದು ಹೇಳಿದರು.
” ಸಂಗೀತ ವಿಶ್ವಮಾನ್ಯವಾದದ್ದು. ಮನುಷ್ಯನಿಗೆ ತನ್ಮಯತೆ ಮತ್ತು ಮನೋವಿಕಾಸ ಉಂಟು ಮಾಡುವ ಕಾರಣದಿಂದ ಇತರೆ ಕಲೆಗಳಿಗಿಂತ ಸಂಗೀತ ಕಲೆಗೆ ಹೆಚ್ಚು ಮಹತ್ವವಿದೆ. ಗಾನ ವೈದ್ಯ ಲೋಕದ ವೈದ್ಯರು ಇಂಥ ಸಂಗೀತದ ಅಭ್ಯಾಸ ಮಾಡುತ್ತಿರುವುದು ಎಲ್ಲರೂ ಮೆಚ್ಚುವ ಸಂಗತಿ. ವೈದ್ಯ ವೃತ್ತಿ ಮಾಡುವವರಿಗೆ ತಾಳ್ಮೆ, ಸಂಯಮ, ಏಕಾಗ್ರತೆ ಮುಖ್ಯ. ಈ ಹಿನ್ನೆಲೆಯಲ್ಲಿ ವೃತ್ತಿಯ ನಡುವೆಯೂ ಸಾಹಿತ್ಯ, ಸಂಗೀತ ಮನೋಲ್ಲಾಸದ ಜೊತೆಗೆ ಸಂಸ್ಕಾರವನ್ನು ನೀಡುತ್ತದೆ ” ಎಂದು ಅಭಿಪ್ರಾಯಪಟ್ಟರು.
ಮೈಸೂರಿನ ಗಾನ ವೈದ್ಯಲೋಕ ತಂಡದ ಗಾಯಕರು, ವೈದ್ಯರ ದಿನಾಚರಣೆ ಅಂಗವಾಗಿ ಡಾ. ಬಿ. ಸಿ. ರಾಯ್ ನೆನಪಿನಲ್ಲಿ ಸಂಗೀತ ಸಂಜೆ ಆಯೋಜನೆ ಮಾಡಿರುವುದು ಔಚಿತ್ಯಪೂರ್ಣವಾಗಿದೆ ಎಂದರು.
ವಿಶೇಷ ಆಹ್ವಾನಿತರಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಮಾತನಾಡಿ, ” ವೈದ್ಯರ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆಯೂ ಜುಲೈ 1 ರಂದೆ ನಡೆಯುತ್ತಾ ಬಂದಿರುವುದು ಅರ್ಥಪೂರ್ಣವಾಗಿದೆ. ವೈದ್ಯರು ಮತ್ತು ಪತ್ರಕರ್ತರು ಸಮಯದ ಅರಿವಿಲ್ಲದೆ ಕಾರ್ಯನಿರ್ವಹಿಸಬೇಕಾದ ವೃತ್ತಿಗಳಾಗಿವೆ. ನಮ್ಮ ನಮ್ಮ ಕ್ಷೇತ್ರಗಳಲ್ಲಿ ಸಮಾಜದ ಬಗ್ಗೆ ಕಾಳಜಿ ಮತ್ತು ಕಳಕಳಿಯಿಂದ ಕಾರ್ಯ ನಿರ್ವಹಿಸೋಣ ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಾನ ವೈದ್ಯ ಲೋಕ ಸಂಸ್ಥೆಯ ಗೌರವಾಧ್ಯಕ್ಷ ಡಾ. ವೈ. ಡಿ. ರಾಜಣ್ಣ ಮಾತನಾಡಿ ಗಾನ ವೈದ್ಯ ಲೋಕ ಸಂಸ್ಥೆ ಕಳೆದ ಮೂರುವರೆ ವರ್ಷಗಳಲ್ಲಿ ಆಚರಿಸಿಕೊಂಡು ಬಂದಿರುವ ವಿವಿಧ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಗಾನ ವೈದ್ಯ ಲೋಕ ಸಂಸ್ಥೆಯ ಅಧ್ಯಕ್ಷ ಡಾ. ಟಿ. ರವಿಕುಮಾರ್ ಪ್ರಾಸ್ತಾವಿಕವಾಗಿ ಸಂಸ್ಥೆಯ ಮುಂದಿನ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಉತ್ತಮ ಆರೋಗ್ಯಕ್ಕೆ ಉಳಿದಿರುವ ದಾರಿ ಒಂದೇ; ಅದುವೇ ರಾಸಾಯನಿಕ ಮುಕ್ತ ಕೃಷಿ
ಸಂಗೀತ ಸಂಜೆಯಲ್ಲಿ ಡಾ, ಪೂರ್ಣಿಮಾ, ಡಾ. ಸುರೇಂದ್ರನ್, ಡಾ. ಶ್ಯಾಮ್, ಡಾ. ಪ್ರಸಾದ್, ಡಾ. ಶಿವಕುಮಾರ್, ಡಾ. ಶ್ರೀಲತಾ ಮನೋಹರ್, ಡಾ. ಸಿ. ಎಸ್. ವಾಣಿ, ಡಾ. ಚಿನ್ನ ನಾಗಪ್ಪ, ಡಾ. ಮನು, ಡಾ. ಎಲ್. ಸುಮಾ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಲೇಖಕ ಹಾಗೂ ಉಪನ್ಯಾಸಕ ಎಡೆಯೂರು ಸಮಿಉಲ್ಲ ಕಾರ್ಯಕ್ರಮ ನಿರೂಪಿಸಿದರು.