ಶಿಕ್ಷಣ ಎಂಬುದು ಜಾತಿ ಮತ ಧರ್ಮಗಳಿಗೆ ಸೀಮಿತವಾಗದೆ ಎಲ್ಲರಿಗೂ ಕಡ್ಡಾಯ ಶಿಕ್ಷಣದ ಅಗತ್ಯವಿದೆ. ಅದನ್ನು ಉಚಿತವಾಗಿ ನೀಡಬೇಕು. ಏಕೆಂದರೆ ಶಿಕ್ಷಣದಿಂದ ಮಾತ್ರ ಎಲ್ಲ ಸಮಸ್ಯೆಗಳಿಗೂ ಪರಿಹಾರವೆಂಬುದು ಅಂಬೇಡ್ಕರ್ ಅವರ ಉದ್ದೇಶವಾಗಿತ್ತು ಎಂದು ಚಾಮರಾಜನಗರ ವಿವಿ ಕುಲಪತಿ ಎಂ ಆರ್ ಗಂಗಾಧರ್ ಅವರು ಹೇಳಿದರು.
ಮೈಸೂರು ವಿಶ್ವ ವಿದ್ಯಾಲಯ ಸಂಜೆ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಗಳ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಭಿತ್ತಿಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮಹಾನ್ ವ್ಯಕ್ತಿ ಜ್ಞಾನದ ಚಿಲುಮೆ ಡಾ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಮಾಡುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಜಗತ್ತಿನ ಶ್ರೇಷ್ಠ ಸಂವಿಧಾನವೆಂದರೆ ನಮ್ಮ ಭಾರತ ಸಂವಿಧಾನ. ಇಡೀ ದೇಶದ ಕಟ್ಟಕಡೆಯ ವ್ಯಕ್ತಿಗಳಿಗೂ ತಮ್ಮ ಹಕ್ಕುಗಳು ಸಿಗಬೇಕೆಂದು ಉದ್ದೇಶಿಸಿ ಸಂವಿಧಾನದಲ್ಲಿ ಸಾಧಕ ಭಾಧಕಗಳನ್ನು ಉಲ್ಲೇಖಿಸಿದ್ದಾರೆ” ಎಂದರು.
“ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರು. ಜೊತೆಗೆ ಹೊರ ದೇಶದಲ್ಲಿ ಶಿಕ್ಷಣಕ್ಕೆ ಎಷ್ಟು ಮಹತ್ವವಿತ್ತು ಎಂಬುದನ್ನು ಅರಿತಿದ್ದ ಅವರು ಅಂತೆಯೇ ಎಲ್ಲರಿಗೂ ಉಚಿತ ಶಿಕ್ಷಣ ಸಿಗಬೇಕೆಂದು ನಮ್ಮ ಸಂವಿದಾನದಲ್ಲಿ ಉಲ್ಲೇಖಿಸಿದ್ದಾರೆ. ಮಾನವಶಾಸ್ತ್ರ ವಿಷಯದಲ್ಲಿ ಅವರಿಗೆ ಹೆಚ್ಚು ಆಸಕ್ತಿ ಇದ್ದಿದ್ದರಿಂದ ಅದರಲ್ಲಿ ತೊಡಗಿಸಿಕೊಂಡಿದ್ದು, ಇನ್ನಷ್ಟು ಜನರ ಬಗ್ಗೆ ಅಧ್ಯಯನ ಮಾಡಲು ಸಹಾಯವಾಗಿತ್ತು. ಹೀಗೆ ಒಂದು ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಜನರ ಬಗ್ಗೆ ಒಂದಷ್ಟು ಬೆಳಕು ಚೆಲ್ಲುವ ಸಂದರ್ಭದಲ್ಲಿ ಅವರು 12 ಗಂಟೆ ಕೆಲಸಮಾಡುತ್ತಿದ್ದ ಕಾರ್ಮಿಕರನ್ನು ಕಂಡು ಇದನ್ನು ಬದಲಾಯಿಸಬೇಕೆಂದು ಒಂದು ದಿನಕ್ಕೆ 8 ಗಂಟೆಗಳ ಕಾಲ ಮಾತ್ರ ಕೆಲಸ ಮಾಡಬೇಕೆಂದು ಕಾನೂನು ಜಾರಿ ಮಾಡುವ ಮೂಲಕ ಶ್ರಮ ಜೀವಿಗಳ ಬಗ್ಗೆ ಕಾಳಜಿ ವಹಿಸಿದರು” ಎಂದು ಹೇಳಿದರು.

“ಗಂಡು ಹೆಣ್ಣು ಇಬ್ಬರೂ ಸಮಾನವಾಗಿ ಓದಬೇಕೆಂಬ ಉದ್ದೇಶದಿಂದ ಕೋ-ಎಜುಕೇಶನ್ಗೆ ಬಹಳ ಮಹತ್ವ ನೀಡಿ ಅದನ್ನು ಸ್ವತಃ ಅವರೇ ಪ್ರಾರಂಬಿಸುತ್ತಾರೆ. ಇನ್ನು ಬುಡುಕಟ್ಟು ಸಮುದಾಯದ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಬಾಬಾ ಸಾಹೇಬರು, ಶಿಕ್ಷಣ ಪಡೆಯುತ್ತಿದ್ದ ಎಲ್ಲ ಮಕ್ಕಳಿಗೂ ಶಿಕ್ಷಣದ ಜೊತೆಗೆ ವಸತಿ ನಿಲಯಗಳನ್ನೂ ಸ್ಥಾಪಿಸಲು ಮುಂದಾಗುತ್ತಾರೆ. ಅದನ್ನು ಭಾರತದ ಪ್ರತಿ ರಾಜ್ಯಗಳಲ್ಲಿ ಈಗಲೂ ಸಮಾಜ ಕಲ್ಯಾಣ ಇಲಾಖೆ ಹೆಸರಿನಲ್ಲಿ ಕೆಲಸ ಮಾಡುತ್ತಿದೆ” ಎಂದು ತಿಳಿಸಿದರು.
“ಡಾ ಅಂಬೇಡ್ಕರ್ ಅವರು ಒಮ್ಮೆ ತಮ್ಮ ಒಡನಾಡಿಗಳ ಜೊತೆ ಮಾತನಾಡುವಾಗ ನಮ್ಮ ಜನರು ಕೆಳ ಹಂತದ ಹುದ್ದೆಗಳನ್ನು ತೊರೆದು ಶಿಕ್ಷಣ ಪಡೆದು ಒಳ್ಳೆಯ ಅಧಿಕಾರಿಯಾಗಿ ಹೊರಹೊಮ್ಮಬೇಕು ಎಂಬುದು ನನ್ನ ಗುರಿ ಎಂದು ಒತ್ತಿ ಹೇಳುತ್ತಿದ್ದರು. “Education is the tool the over all development” ಎಂದು ಬಾಬಾ ಸಾಬೇಬರು ಹೇಳಿತ್ತಿದ್ದರು. ಶಿಕ್ಷಣ ಒಂದೇ ಎಲ್ಲದಕ್ಕೂ ಪರಿಹಾರ ಎಂಬುದನ್ನು ಎಲ್ಲರೂ ಅರಿಯಬೇಕೆಂದು ಎಲ್ಲೆಡೆ ಹೇಳುತ್ತಿದ್ದರು” ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬಸ್ ಸೌಲಭ್ಯ ಕಲ್ಪಿಸುವಂತೆ ಕರವೇ ಆಗ್ರಹ
“ಅಂಬೇಡ್ಕರ್ ಅವರು ಕೇವಲ ಒಂದು ರಂಗಕ್ಕೇ ಸೀಮಿತವಾಗದೆ, ಎಲ್ಲ ಕ್ಷೇತ್ರದಲ್ಲಿಯೂ ಅವರ ಕೊಡುಗೆ ಅಪಾರ. ಅಂಬೇಡ್ಕರ್ ಅವರು ಕೇವಲ ದಲಿತರ ಆಸ್ತಿಯಲ್ಲ, ಇಡೀ ದೇಶದ ಆಸ್ತಿ. ಅವರು ಇಡೀ ದೇಶದ ಅಭಿವೃದ್ಧಿಗೆ ದುಡಿದಂತಹ ಮಹಾನಾಯಕ. ಆದರೆ ಅವರನ್ನು ಕೇವಲ ಒಂದು ಸಮುದಾಯಕ್ಕೆ, ಒಂದು ವರ್ಗಕ್ಕೆ ಸೀಮಿತವಾಗಿಸುವುದು ಖೇದಕರ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭಿತ್ತಿಪತ್ರ ಪ್ರದರ್ಶನದಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೂ ಬಹುಮಾನ ನೀಡಿದರು. ಕಾರ್ಯಕ್ರಮದಲ್ಲಿ ಮೈಸೂರು ವಿವಿ ಸಂಜೆ ಕಾಲೇಜು ಪ್ರಾಂಶುಪಾಲರು ಎಚ್ ಸೋಮಶೇಕರಪ್ಪ, ಸಂಚಾಲಕ ಡಾ ನಿಂಗರಾಜು, ಅಧ್ಯಾಪಕಿ ಸೌಭಾಗ್ಯವತಿ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.