ಕಳೆದ ಕೆಲ ದಿನಗಳ ಹಿಂದೆ ಲೋಕಾಯುಕ್ತ ಅಧಿಕಾರಿಗಳು ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ನಂಜನಗೂಡಿನ ಸರ್ಕಾರಿ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿ ಮನೆ ಮೇಲೆ ದಾಳಿ ಮಾಡಿದ್ದರು. ಇದೀಗ ಉಪನ್ಯಾಸಕ ಮಹದೇವಸ್ವಾಮಿ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದ್ದು, ನಿವೇಶನ ಕೊಡಿಸುವುದಾಗಿ ₹70 ಕೋಟಿ ಹಣ ಪಡೆದು ವಂಚಿಸಿರುವುದಾಗಿ ಆರೋಪ ವ್ಯಕ್ತವಾಗಿದೆ.
ಕರ್ನಾಟಕ ರಾಜ್ಯ ಕಾಲೇಜು ಅಧ್ಯಾಪಕರು ಹಾಗೂ ಶಾಲಾ ಶಿಕ್ಷಕರ ಗೃಹನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಮೈಸೂರಿನ ಗುರುಕುಲ ಬಡಾವಣೆಯಲ್ಲಿ ₹40 ಲಕ್ಷ ಮೌಲ್ಯದ 70 ನಿವೇಶನ ಕೊಡಿಸುವುದಾಗಿ ಶಿಕ್ಷಕರಿಂದ ₹28 ಕೋಟಿ ಹಣ ಪಡೆದಿದ್ದು, ಶಿಕ್ಷಕರಿಗೆ ನಿವೇಶನ ನೀಡದೆ, ಹೆಂಡತಿ ಮಕ್ಕಳು ಸಂಬಂಧಿಕರ ಹೆಸರಿಗೆ ಮಾಡಿಕೊಂಡಿರುವುದಾಗಿ ಆರೋಪ ಕೇಳಿಬಂದಿದೆ.
ಮತ್ತೊಂದು ಬಡಾವಣೆ ನಿರ್ಮಾಣಕ್ಕೆ ಶಿಕ್ಷಕರಿಂದ 2014 ರಿಂದ ₹40 ಕೋಟಿ ಹಣ ವಸೂಲಿ ಮಾಡಿದ್ದು, ಬಡಾವಣೆ ನಿರ್ಮಾಣಕ್ಕೆ ಮಹದೇವಸ್ವಾಮಿ ಭೂಮಿಯನ್ನೇ ಖರೀದಿ ಮಾಡಿಲ್ಲ. ಈ ಬಗ್ಗೆ ಪೊಲೀಸರು, ಸಹಕಾರ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಹದೇವಸ್ವಾಮಿ ಸಂಬಂಧಿಕರಿಗೆ ಸೈಟ್ ಮಾರಿ ತನ್ನ ಹೆಸರಿಗೆ ದಾನವಾಗಿ ಮಾಡಿಕೊಂಡಿರುವ ಬಗ್ಗೆ ಆರೋಪಿದೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ಗೆ ʼನ್ಯಾಷನಲ್ ಇನ್ನೋವೇಟಿವ್ ಅವಾರ್ಡ್ʼ
ಲೋಕಾಯುಕ್ತ ಅಧಿಕಾರಿಗಳು ಒಂದು ವಾರದ ಹಿಂದೆ ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿ ಮೇಲೆ ದಾಳಿ ಮಾಡಿ, ಮೈಸೂರಿನ ಗುರುಕುಲ ಬಡಾವಣೆ ನಿವಾಸ ಸೇರಿ 12 ಕಡೆ ಪರಿಶೀಲನೆ ನಡೆಸಿದ್ದರು. ಕುಟುಂಬದ ಹೆಸರಿನಲ್ಲಿ ಎಂ ಎಸ್ ಗ್ರೂಪ್ ಕಂಪನಿ, ಆದಾಯಕ್ಕೂ ಮೀರಿ ಅಸ್ತಿ ಗಳಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಹಾಗೂ ಐಜಿಪಿ, ಸುಬ್ರಮಣ್ಣೀಶ್ವರ ರಾವ್ ಎಸ್. ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಡಿಎಸ್ಪಿ, ಕೃಷ್ಣಯ್ಯ ನೇತೃತ್ವದಲ್ಲಿ 12 ತಂಡಗಳು ವಿವಿಧ ಕಡೆಗಳಲ್ಲಿ ಪರಿಶೀಲನೆ ನಡೆಸಿದ್ದರು. ದಾಳಿ ಬಳಿಕ 8 ಕೋಟಿ ಅಕ್ರಮ ಆಸ್ತಿ ಇದೆ ಎಂದು ಲೋಕಾ ಪೊಲೀಸರು ತಿಳಿಸಿದ್ದರು.