ಮೈಸೂರು ವಿಶ್ವವಿದ್ಯಾನಿಲಯ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ ಅಧ್ಯಯನ ಹಾಗೂ ವಿಸ್ತರಣಾ ಕೇಂದ್ರದಲ್ಲಿ ನಡೆದ ಉಪನ್ಯಾಸ ಹಾಗೂ ಮಹಾಮನೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಚಿಂತಕ ರಂಜಾನ್ ದರ್ಗಾ ‘ ಮನುಸ್ಮೃತಿಯಿಂದಲೇ ಇಂದು ದ್ವೇಷ ಸಂಸ್ಕೃತಿ ಬೆಳೆದಿದೆ ‘ ಎಂದರು.
” ಸಮಾಜದಲ್ಲಿ, ಜನಗಳ ಮನಸ್ಸಿನಲ್ಲಿ ಕ್ರೌರ್ಯ ಬಿತ್ತಿದ ಪುಸ್ತಕ ಅಂತಿದ್ದರೆ ಅದುವೇ ‘ಮನುಸ್ಮೃತಿ ‘. ಇಂತಹ ಪ್ರಾಮಾಣಿಕ ಪುಸ್ತಕ ಮತ್ತೊಂದು ಸಿಗಲು ಸಾಧ್ಯವಿಲ್ಲ. ಬಸವ ಧರ್ಮ ಬಯಲು ತತ್ವದಿಂದ ರೂಪಿತವಾದದ್ದು ಇದಕ್ಕೆ ಗಡಿರೇಖೆಗಳಿಲ್ಲ. ಹೀಗಾಗಿ ಒಂದು ಜಾತಿಗೆ, ಧರ್ಮಕ್ಕೆ ಸೀಮಿತವಾದುದಲ್ಲ, ಇಡೀ ವಿಶ್ವಕ್ಕೆ ಸಂಬಂದಿಸಿದೆ. ಭಾರತದ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಸಂಸ್ಕೃತಿಗಳ ವಿರುದ್ಧ ಸಾಂಸ್ಕೃತಿಕ ಸಂಘರ್ಷ ನಡೆದಿದೆ. ಭಾರತದಲ್ಲಿ ಎಲ್ಲರೂ ಮನುವಾದಿಗಳ ಉತ್ಪನ್ನಗಳೇ, ಎಲ್ಲೆಲ್ಲಿಯೂ ಜಾತಿ ವಾದಿಗಳಿದ್ದಾರೆ, ಯಾರೂ ಶುದ್ಧರಿಲ್ಲ. ಬ್ರಾಹ್ಮಣೀಕರಣಕ್ಕೆ ಒಳಪಟ್ಟಿದ್ದಾರೆ. ಬ್ರಾಹ್ಮಣರಲ್ಲಿ ಎಷ್ಟು ಜನ ಮನುವಾದದ ವಿರುದ್ಧ ನಿಲುವನ್ನು ತಾಳಿದ್ದಾರೆ? ದಲಿತರಲ್ಲಿ ಎಷ್ಟೋ ಜನ ಮನುವಾದಿಗಳಿದ್ದಾರೆ! ಒಳಗೊಂದು, ಹೊರಗೊಂದು ಅನ್ನುವಂತಿದೆ ಎಂದು ಬೇಸರ ವ್ಯಕ್ತಪಡಿಸಿದರು “.
ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಎನ್ ಕೆ ಲೋಕನಾಥ್ ಮಾತನಾಡಿ ” ಮಾನಸ ಗಂಗೋತ್ರಿಯ ಆವರಣದಲ್ಲಿ ಸಮನ್ವಯ ಕಡಿಮೆಯಾಗುತ್ತಿದೆ. ಅನೂನ್ಯತೆ ಇಲ್ಲದಾಗಿದೆ. ಒಂದೊಂದು ಕಾರಣಗಳು ಅಂತರ ಸೃಷ್ಟಿಸುತ್ತಿವೆ.ವಿದ್ಯಾರ್ಥಿಗಳ ಭವಿಷ್ಯ ಕಟ್ಟಬೇಕಿದ್ದ
ವಾತಾವರಣ ಮಸುಕಾಗಿದೆ.ಒಂದೊಂದು ಅಧ್ಯಯನ ವಿಭಾಗದ ನಡುವೆಯೂ ಗೋಡೆಗಳು ನಿರ್ಮಾಣಗೊಂಡಿವೆ. ತಮ್ಮ ತಮ್ಮ ಕೇಂದ್ರಗಳಿಗೆ ಕಾಂಪೌಂಡ್ ನಿರ್ಮಿಸಲು ಪ್ರಾಧ್ಯಾಪಕರು ಗಲಾಟೆ ಮಾಡುತ್ತಿದ್ದಾರೆ. ಪಕ್ಕದ ವಿಭಾಗದವರು ಬಾರದಂತೆ ಬೇಲಿ ಹಾಕಲಾಗುತ್ತಿದೆ. ವಿವಿ ಯಾರ ಆಸ್ತಿ? ಇಂತಹ ಬೆಳವಣಿಗೆಗಳು ದುರದೃಷ್ಟಕರ, ಪ್ರಾಧ್ಯಾಪಕರು ಗಲಾಟೆ ಮಾಡಿದರೆ ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಬೆಳೆಸಲಾಗುತ್ತದೆಯೇ ” ಎಂದು ವಿಷಾದಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಬಳ್ಳೆ ವನ್ಯಜೀವಿ ವಲಯದಲ್ಲಿ ಮೃತ ಐಎಫ್ಎಸ್ ಅಧಿಕಾರಿ ಮಣಿಕಂಠನ್ ಪ್ರತಿಮೆ ಅನಾವರಣ
ಬಸವ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ ಅರವಿಂದ ಮಾಲಗತ್ತಿ,ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ ಎನ್ ಕೆ ಲೋಲಾಕ್ಷಿ, ಡಾ ಮೈಲಹಳ್ಳಿ ರೇವಣ್ಣ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
