ಬಿಳಿಕೆರೆ ಕಂದಾಯ ನಿರೀಕ್ಷಕ ಮಂಜುನಾಥ್ ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿದರು.
“ಸರ್ಕಾರ ರೈತಪರ, ದಲಿತ ಪರ ಎನ್ನುವ ಘೋಷಗಳಿಗೆ ಕಡಿಮೆಯಿಲ್ಲ. ಆದರೆ ಸರ್ಕಾರ ಹೇಳಿದಂತೆ ಕೆಲಸವಾಗುತ್ತಿದೆಯೇ ಎನ್ನುವ ಪ್ರಶ್ನೆ ಬಂದಾಗ ಇಲ್ಲಿ, ಯಾರು ಯಾರ ಪರ ಎನ್ನುವುದು ತಿಳಿಯುತ್ತಿಲ್ಲ. ಬೇಲಿಯೇ ಎದ್ದು ಹೊಲ ಮೆಯ್ಯಲು ನಿಂತರೆ
ರೈತರು, ದಲಿತರ ಪಾಡೇನು?. ಪಿಟಿಸಿಎಲ್ ಪರಭಾರೆ ನಿಷಿದ್ಧವಿರುವ ಜಮೀನನ್ನು ಏಕಾಏಕಿ ರಿಯಲ್ ಎಸ್ಟೇಟ್ ಉದ್ಯಮಿಗೆ ದಲಿತರ ಭೂಮಿ ಖಾತೆ ಮಾಡಿರುವುದು ಖಂಡನೀಯ” ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
“ಅಧಿಕಾರಿಗೆ ಇದೆಲ್ಲದರ ಅರಿವು ಇರಬೇಕು. ಗೊತ್ತಿಲ್ಲದೆ ಮಾಡಿರುವ ಕೆಲಸವಲ್ಲ. ಇವತ್ತಿನ ಸರ್ಕಾರಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ನೇರವಾಗಿ ಉಳ್ಳವರ ಪರವಾಗಿ ಲಾಭಿ ಮಾಡುತ್ತಿವೆಯೇ ಹೊರತು ಅನ್ನ ಹಾಕುವ ರೈತನ ಬದುಕಿನ ಕಡೆ ಗಮನ ಕೊಟ್ಟಿಲ್ಲ. ಅನ್ಯಾಯದ ಮೇಲೆ ಅನ್ಯಾಯ ಮಾಡುತ್ತಿವೆ. ಸರ್ಕಾರ ಹೇಳುವುದೊಂದು, ಅಧಿಕಾರಿಗಳು ಮಾಡೋದೇ ಇನ್ನೊಂದು ಇಂತಹವರ ಮಧ್ಯೆ ಬಲಿಪಶುಗಳಾಗಿದ್ದು ರೈತರು” ಎಂದು ಈ ದಿನ.ಕಾಮ್ಗೆ ತಿಳಿಸಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಅತ್ತಿಕುಪ್ಪೆ ರಾಮಕೃಷ್ಣ ಮಾತನಾಡಿ, “ಬೆಂಕಿಪುರ ಸರ್ವೇ ನಂ. 60, 61, 47ರಲ್ಲಿ ಸರಿಸುಮಾರು 50 ಎಕರೆ ಭೂಗಳ್ಳರ ಪಾಲಾಗಿದೆ. ಇದು ಸರ್ಕಾರ ಎಸ್ಸಿ/ಎಸ್ಟಿ ಜನಾಂಗಕ್ಕೆ ಮೀಸಲಿಟ್ಟಿದ್ದ ಭೂಮಿ. ಈ ಭೂಮಿಯನ್ನು ಪರಭಾರೆ ಮಾಡಲು, ಕೊಳ್ಳಲು ಸಾಧ್ಯವಿಲ್ಲ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿ ಮೈಸೂರಿನ ರಿಯಲ್ ಎಸ್ಟೇಟ್ ಉದ್ಯಮಿಗೆ ಖಾತೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿ ಎಸಿ, ತಹಶೀಲ್ದಾರ್, ಪೊಲೀಸ್ ಇಲಾಖೆಗಳಿಗೆ ದೂರು ನೀಡಿದರೂ ಕೂಡಾ ಈವರೆಗೆ ಕ್ರಮ ಕೈಗೊಳ್ಳದೆ ಹೋರಾಟಗಾರರನ್ನು ಕಡೆಗಣಿಸಿದ್ದು ಸರಿಯಾದ ಕ್ರಮವಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ” ಎಂದು ಕಿಡಿಕಾರಿದರು.
ಹಿರಿಯ ದಸಂಸ ಮುಖಂಡ ರತ್ನಾಪುರಿ ಪುಟ್ಟಸ್ವಾಮಿ ಮಾತನಾಡಿ, “ಅಧಿಕಾರಿಗಳು ಮಾಡಿರುವ ತಪ್ಪನ್ನು ರೈತ ಮುಖಂಡರೇ ಪ್ರಶ್ನೆ ಮಾಡಲಾಗುತ್ತಿಲ್ಲ. ಎಂತಹ ಸ್ಥಿತಿಯೆಂದರೆ ಹೋರಾಟಗಾರರು ಕೇವಲ ಅನ್ನುವಂತೆ ಅಧಿಕಾರಿಗಳ ದುಂಡಾವರ್ತನೆ. ಅದರಲ್ಲೂ ಅವಾಚ್ಯವಾಗಿ, ಅಸಭ್ಯವಾಗಿ ನಡೆದುಕೊಂಡು, ಪುಡಾರಿಗಳಿಂದ ಕರೆ ಮಾಡಿಸಿ ಪ್ರಾಣ ಬೆದರಿಕೆ ಒಡ್ಡುವಂತಹ ಕೆಟ್ಟ ಅಧಿಕಾರಿ ಮೇಲೆ ಕ್ರಮ ತೆಗೆದುಕೊಳ್ಳಿ ಅಂತ ಫೋನ್ ಕಾಲ್ ರೆಕಾರ್ಡ್ ಸಮೇತ ದೂರು ನೀಡಿದರೆ ಪೊಲೀಸ್ ಇಲಾಖೆ, ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಖೇದನಿಯ ಸಂಗತಿ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗೇಪಲ್ಲಿ | ಡಿ.6 ರಂದು ಬಡವರ ಮದುವೆ ಹಬ್ಬ: ಶಾಸಕ ಸುಬ್ಬಾರೆಡ್ಡಿ
ದಸಂಸ ಮುಖಂಡ ರಾಜು ಚಿಕ್ಕಹುಣಸೂರು ಮಾತನಾಡಿ, “ತಾಲೂಕು ಕಚೇರಿಗೆ ಅಲೆಯುವುದು, ಅಲೆದು ಸಾಯುವುದು ಅಷ್ಟೇ ಕೆಲಸವಾಗುತ್ತಿದೆ. ಇಲ್ಲಿ ಯಾವುದೂ ನೆಟ್ಟಗಿಲ್ಲ. ನನಗೆ ಕಂಡ ಹಾಗೆ ಪಾಣಿ ದುರಸ್ತಿ, ಜಮೀನಿಗೆ ರಸ್ತೆ ಬಿಡಿಸುವ ವಿಚಾರವಾಗಿ ಅಲೆದು ಅಲೆದು ಕಡೆಗೆ ಇಬ್ಬರು ಸತ್ತೇ ಹೋದರು, ಇನ್ನೆಲ್ಲಿ ನ್ಯಾಯ. ಬದುಕಿರುವಾಗಲೇ ತನ್ನ ಜಮೀನು ಕೆಲಸ ಮಾಡಿಸಿಕೊಳ್ಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಹೇಳಿದಂತೆ ಸ್ಥಳೀಯ ಆಡಳಿತವಿಲ್ಲ, ಅಧಿಕಾರಿಗಳು ಆ ರೀತಿ ನಡೆದುಕೊಳ್ಳುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೇತ್ರಾವತಿ, ಅಗ್ರಹಾರ ರಾಮೇಗೌಡ, ಉಂಡುವಾಡಿ ಚೆಲುವೆಗೌಡ್ರು ಸೇರಿದಂತೆ ಹಲವಾರು ಕಾರ್ಯಕರ್ತರು ಇದ್ದರು.