ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದ ಹೃದಯ ಭಾಗದಲ್ಲಿ ಲಕ್ಷ್ಮಣತೀರ್ಥ ನದಿ ಹರಿಯುತ್ತದೆ. ಸರಿ ಸುಮಾರು ಒಂದು ಕಿಮೀ ಪಟ್ಟಣದ ವ್ಯಾಪ್ತಿಯಲ್ಲಿ ಹರಿಯುವ ನದಿ.
ಸದಾ ಮಲಿನವಾಗಿ, ಹಸಿರುಗಟ್ಟಿದ ಕೊಳಚೆಯಿಂದ ಹರಿಯುತ್ತಿದೆ. ನೀರು ತಿಳಿಯಾಗಿರದೆ ತನ್ನ ಸ್ವರೂಪ ಕಳೆದುಕೊಂಡಿದೆ. ನದಿಯ ನೀರನ್ನು ಸಮರ್ಪಕವಾಗಿ ಬಳಸಲಾರದ ದುಃಸ್ಥಿತಿ ಆಡಳಿತ ವರ್ಗದ್ದು. ಸರ್ಕಾರಗಳು ಇನ್ನಿಲ್ಲದ ಯೋಜನೆಗಳಿಗೆ, ನದಿ ನಿರ್ವಹಣೆಗೆ ಕೋಟ್ಯಂತರ ರೂಪಾಯಿ ಹಣ ಪೋಲು ಮಾಡುತ್ತವೆ. ಆದರೆ ಸಮರ್ಪಕವಾಗಿ ಬಳಕೆ ಆಗಿದೆಯೇ ಎನ್ನುವ ಪ್ರಶ್ನೆಗೆ ಉತ್ತರ ಸಿಗಲಾರದು. ನದಿ ಮಲಿನವಾಗುತ್ತಿದೆ. ಅದನ್ನು ಸರಿಪಡಿಸಲು ಅಗತ್ಯ ಕ್ರಮ, ಅದಕ್ಕೆ ಪೂರಕವಾಗಿ ವೆಟ್ ವಾಲ್ ಕಾಮಗಾರಿ ಆಗುವ, ಆಗಿರುವ ಮಾಹಿತಿ ಇರುತ್ತೆ. ಎಲ್ಲ ಕ್ರಿಯಾ ಯೋಜನೆಗಳು ಅನುಷ್ಠಾನ ಆಗುವಲ್ಲಿ ವಿಫಲವಾಗಿ ಹಳ್ಳ ಹಿಡಿದಿವೆ.

ಕರವೇ ತಾಲೂಕು ಅಧ್ಯಕ್ಷ ಪುರುಷೋತ್ತಮ್ ಈ ದಿನ.ಕಾಮ್ ಜೊತೆ ಮಾತನಾಡಿ, “ಜೀವಜಲ ಹುಣಸೂರಿನ ಲಕ್ಷಣತೀರ್ಥ ನದಿ ಉಳಿಸಬೇಕೆಂಬ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ. ಎಲ್ಲ ಇಲಾಖೆಗಳ ಜತೆಗೆ ಸಮನ್ವಯ ನಡೆಸಿ ಮಾರ್ಗೋಪಾಯ ಚರ್ಚೆ ನಡೆಸಿದ್ದೇವೆ. ಆದರೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಈವರೆಗೆ ಯಾವುದೇ ಕೆಲಸಗಳು ಆಗಲಿಲ್ಲ” ಎಂದರು.
“ಲಕ್ಷಣತೀರ್ಥ ನದಿಗೆ ಸುಮಾರು 26 ಜಲ ಮೂಲಗಳಿವೆಯೆಂದು ಸಂಶೋಧಕ ರಾಮದಾಸ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಹುಣಸೂರು ಪಟ್ಟಣದ ಸುತ್ತಮುತ್ತ ಈಗಾಗಲೇ ಒತ್ತುವರಿಯಾಗಿವೆ. ಉದಾಹರಣೆಗೆ ಒಳ್ಳಮ್ಮನ ಕಟ್ಟೆ, ಎರಡು ಚೈನ್ ಅಳತೆಯದ್ದು. ಅದರಲ್ಲಿ ಒಂದು ಚೈನ್ ಅಂದ್ರೆ 33 ಅಡಿ ಒತ್ತುವರಿಯಾಗಿದೆ. ಈಗಾಗಲೇ ಆ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಇದರ ಬಗ್ಗೆ ತಾಲೂಕು ಆಡಳಿತ, ನಗರಸಭೆ ಸೊಲ್ಲೆತ್ತುತ್ತಿಲ್ಲ. ಎಲ್ಲಿಯೂ ಉಲ್ಲೇಖಿಸಿಲ್ಲ” ಎಂದು ಆರೋಪಿಸಿದರು.

“ಲಕ್ಷ್ಮಣತೀರ್ಥ ನದಿ ಹಾಳಾಗುವುದಕ್ಕೆ ಮಲಿನ ಅಷ್ಟೇ ಅಲ್ಲ, ನದಿ ಮೂಲಗಳು ಒತ್ತುವರಿಯಾಗಿದ್ದರಿಂದಲೂ ಈ ಸಮಸ್ಯೆ ಉಲ್ಬಣವಾಗಿದೆ. ನದಿಯ ಎರಡು ಬದಿ ಸರ್ವೇಯಾಗಬೇಕು. ನದಿಯ ವಿಸ್ತೀರ್ಣ ಅಳತೆ ಏನಿದೆ ಅದನ್ನು ಅಳತೆ ಮಾಡಿ ತೆರವುಗೊಳಿಸಬೇಕು. ಒತ್ತುವರಿಯಾಗಿರುವ ಭೂಮಿಯನ್ನು ಎರಡೂ ಕಡೆ ತಾಲೂಕು ಆಡಳಿತ, ಸಂಬಂಧಪಟ್ಟ ಅಧಿಕಾರಿಗಳು ಬಿಡಿಸಬೇಕು. ನೀರಿನ ಸೆಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಸಭೆ ನಡೆದಿವೆ. ಅದನ್ನು ಅನುಷ್ಠಾನ ಮಾಡಲು ಸಾಕಷ್ಟು ಪ್ರಯತ್ನ ನಡೆದಿವೆ. ಆದ್ರೆ ನಗರಸಭೆ ಅಧಿಕಾರಿಗಳು ಗಮನ ಹರಿಸದೆ ಇರುವುದು, ನದಿ ಉಳಿಸಿಕೊಳ್ಳಲು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲೇ ಇಲ್ಲ” ಎಂದು ವಿಷಾದಿಸಿದರು.

ರಂಗಭೂಮಿ ಕಲಾವಿದ ಅರ್ಜುನ್ ಮಾತನಾಡಿ, “ಹುಣಸೂರು ಪಟ್ಟಣದ ಎಲ್ಲ ಚರಂಡಿ ಕೊಳಚೆ ನೀರು ಲಕ್ಷ್ಮಣತೀರ್ಥ ನದಿಗೆ ಸೇರುವಂತದ್ದು ನಿಜಕ್ಕೂ ವಿಷಾದಕರ ಸಂಗತಿ. ಈಗಾಗಲೇ ಪರಿಸರ ಮಂಡಳಿ ಲಕ್ಷ್ಮಣತೀರ್ಥ ನದಿಯ ನೀರು ಕುಡಿಯಲು ಯೋಗ್ಯವಲ್ಲವೆಂದು ಹೇಳಿದೆ. ನದಿಗೆ ಪ್ಲಾಸ್ಟಿಕ್, ಹೂವು, ಕಸ ಸುರಿಯುವುದರಿಂದ ಹರಿವು ನಿಂತಾಗ ಅದೆಲ್ಲ ಅಲ್ಲೇ ಕೊಳೆತು, ನದಿ ನೀರು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಕೆಟ್ಟ ವಾಸನೆ, ಸೊಳ್ಳೆಕಾಟ ಹೆಚ್ಚುತ್ತೆ. ಲಕ್ಷ್ಮಣತೀರ್ಥ ಉಳಿಸಿಕೊಳ್ಳುವ ಹೋರಾಟ ಆಗಿಂದಾಗ್ಗೆ ನಡೆಯುತ್ತಲೇ ಇದೆ. ಈಗ ಹೋರಾಟ ಮಾಡಿ ನದಿ ಉಳಿಸಿಕೊಳ್ಳಬೇಕು. ಇಲ್ಲವೆಂದರೆ ಮುಂದಿನ ಪೀಳಿಗೆ ಇಲ್ಲೊಂದು ನದಿಯಿತ್ತು ಎನ್ನುವ ಕಥೆ ಓದುವ ಪರಿಸ್ಥಿತಿ ಎದುರಾಗುತ್ತೆ” ಎಂದರು.

ಸಾಮಾಜಿಕ ಕಾರ್ಯಕರ್ತ ಜೆ ಮಹದೇವ್ ಮಾತನಾಡಿ, “ಲಕ್ಷ್ಮಣತೀರ್ಥ ಹರಿವಿನಲ್ಲಿ ಹುಣಸೂರು ಪಟ್ಟಣದ ನಾಗರಿಕತೆ ಬೆಳೆದು ನಿಂತಿದ್ದು, ಜೀವನದಿಯಾಗಿದ್ದ ಲಕ್ಷ್ಮಣತೀರ್ಥ ನದಿ ಉಳಿಸಿಕೊಳ್ಳಬೇಕೆನ್ನುವ ಕೂಗು ಹೆಚ್ಚಾಗುತ್ತಿದೆ. ಇವತ್ತು ನದಿ ಉಳಿಸಿ ಅನ್ನುವ ಸ್ಥಿತಿ ನಿಜಕ್ಕೂ ಶೋಚನೀಯ, ಬಹಳ ಹಿಂದಿನ ಸಮಯದಲ್ಲಿ ಹುಣಸೂರಿನ ಕುಡಿಯುವ, ಅಗತ್ಯ ಪೂರೈಕೆಗೆ ನದಿ ಪೂರಕವಾಗಿತ್ತು. ಆದರೆ ಪಟ್ಟಣ ದೊಡ್ಡ ಮಟ್ಟದಲ್ಲಿ ಬೆಳೆದ ಕಾರಣ ಕೊಳಚೆ ನೀರು ನದಿ ಸೇರುವುದರ ಮೂಲಕ ಕಲುಷಿತವಾಯ್ತು. ಅದರಲ್ಲೂ ಒಮ್ಮೆ ಕಂಡರಿಯದ ಕಾಲರಾ ಕಾಯಿಲೆ ಈ ಭಾಗದಲ್ಲಿ ಕಾಣಿಸಿಕೊಂಡಿತ್ತು. ಆಗ ಹುಣಸೂರಿಗೆ ಯಾರೂ ಬರಲು ಇಚ್ಛೆ ಪಡುತ್ತಿರಲಿಲ್ಲ” ಎಂದರು.

“ಅಂದಿನ ಪುರಸಭೆ ಕುಡಿಯುವ ನೀರಿಗೆ ಬದಲಿ ವ್ಯವಸ್ಥೆ ಕೈಗೊಂಡ ನಂತರ ಹತೋಟಿಗೆ ಬಂತು. ಆದ್ರೆ ಅಂದಿನಿಂದ ಇಂದಿನವರೆಗೂ ಮಲಿನ ಆಗುತ್ತಲೇ ಇದೆ. ಬೇಸಿಗೆ ಸಮಯದಲ್ಲಂತು ಹೇಳತೀರದು. ಪ್ರಜ್ಞಾವಂತ ನಾಗರಿಕರು ದ್ವನಿ ಎತ್ತಬೇಕು. ಕಲುಷಿತ ನೀರು ನದಿ ಸೇರಿದಂತೆ ನಗರಸಭೆ ತಡೆಯುವ ವ್ಯವಸ್ಥೆ ಕೈಗೊಳ್ಳಬೇಕು, ನದಿ ನೀರಿನ ಪುನರ್ಬಳಕೆಗೆ ಕ್ರಮ ವಹಿಸಿ ಅಗತ್ಯ ಕ್ರಮ ಕೈಗೊಂಡಲ್ಲಿ ಮಾತ್ರ ಲಕ್ಷ್ಮಣತೀರ್ಥ ನದಿ ಉಳಿಸಿಕೊಳ್ಳಲು ಸಾಧ್ಯ” ಎಂದರು.
ಸ್ಥಳೀಯ ನಿವಾಸಿ ಕುಮಾರ್ ಮಾತನಾಡಿ, “ನಾವು ಹುಟ್ಟಿ ಬೆಳೆವಾಗ ಇದೇ ನೀರಿನಲ್ಲಿ ಈಜುತ್ತ, ಆಟವಾಡಿ ಬೆಳೆದವರು. ಈಜು ಕಲಿತಿದ್ದು ಇದೇ ನದಿಯಲ್ಲಿ. ಅಂದು ಕುಡಿಯಲು ಆಸರೆಯಾಗಿದ್ದ ಲಕ್ಷ್ಮಣತೀರ್ಥ, ಇಂದು ಅದರ ಬಳಿ ಸುಳಿಯಲಾರದಷ್ಟು ಕೆಟ್ಟಿದೆ. ಇದಕ್ಕೆ ಕಾರಣ ನಮ್ಮ ರಾಜಕಾರಣಿಗಳ ಅಸಡ್ಡೆತನ, ಅಧಿಕಾರಿಗಳ ಬೇಜವಾಬ್ದಾರಿ ತನವೇ ನೇರ ಕಾರಣ” ಎಂದು ದೂರಿದರು.

“ನದಿ ನೀರು ಕೆಡುವಂತಹ ಯಾವುದೇ ಪದಾರ್ಥವನ್ನು ನದಿಯಲ್ಲಿ ಎಸೆಯಬಾರರು. ಅಂತಹದ್ದು, ಒಂದು ವೇಳೆ ಕಂಡುಬಂದಲ್ಲಿ ದಂಡ ವಿಧಿಸುವ ಬೋರ್ಡ್ ನೆಟ್ಟಿದ್ದಾರೆ. ಆದರೆ ಪಾಲನೆ ಮಾತ್ರವಿಲ್ಲ. ನದಿಗೆ ಚರಂಡಿ ಕೊಳಚೆ ನೀರು ನೇರವಾಗಿ ಸೇರುತ್ತಿದೆ. ಇದು ಇವತ್ತಿಗೂ ನಿಂತಿಲ್ಲ. ಕೊಳಚೆ ನೀರು ಶುದ್ದೀಕರಿಸುವ ಕಾಮಗಾರಿ ಯೋಜನೆ ಇಂದು ನಡೆಯುತ್ತಿದೆ. ಮುಂದೆಯೂ ನಡೆಯುತ್ತೆ, ಅದೆಷ್ಟು ವರ್ಷಗಳಲ್ಲಿ ಮುಗಿದು ವ್ಯವಸ್ಥಿತವಾಗಿ ನದಿ ಮಲಿನವಾಗದಂತೆ ತಡೆಯುತ್ತಾರೋ ಅದನ್ನು ಕಾದು ನೋಡಬೇಕಷ್ಟೇ” ಎಂದರು.

ಸಾಮಾಜಿಕ ಹೋರಾಟಗಾರ ಅಶೋಕ್ ಮಾತನಾಡಿ, “ಲಕ್ಷ್ಮಣತೀರ್ಥ ನದಿ ವಿಚಾರದಲ್ಲಿ ಹುಣಸೂರಿನ ನಾಗರಿಕರು ಪ್ರಜ್ಞಾವಂತರಾಗಬೇಕು. ಪಟ್ಟಣದ 14 ಕಡೆ ಚರಂಡಿ ನೀರು ನದಿಗೆ ನೇರವಾಗಿ ಸೇರುತ್ತೆ. ಇದು ನಗರಸಭೆ ಸಮಸ್ಯೆ ಒಂದು ಕಡೆ ಆದ್ರೆ,
ಇನ್ನೊಂದು ಕಡೆ ಸಾರ್ವಜನಿಕರು ಯಾರಾದ್ರೂ ಸತ್ತರೆ ದಿಂಬು, ಹಾಸಿಗೆ ತಂದು ಎಸಿಯುತ್ತಾರೆ. ಪೂಜಾ ಪದಾರ್ಥ ತಂದು ಎಸೆಯುವುದರಿಂದ ನದಿ ಮಲಿನವಾಗಲು ಕಾರಣವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಹಾಸನ | ಉದ್ದೇಶಪೂರ್ವಕವಾಗಿ ಅಭಿವೃದ್ಧಿ ವಿಚಾರಗಳ ನಿರ್ಲಕ್ಷ್ಯ; ಆಳುವ ಸರ್ಕಾರಗಳ ವಿರುದ್ಧ ಎಸ್ ವರಲಕ್ಷ್ಮಿ ಆರೋಪ
“ನಮಗೆ ಗೊತ್ತಿರುವ ಹಾಗೆ ಲಕ್ಷ್ಮಣತೀರ್ಥ ನದಿ ನೀರಲ್ಲಿ ನೆಲ ಕಾಣುತ್ತಿತ್ತು. ಆದರೆ ಇವತ್ತಿನ ಪರಿಸ್ಥಿತಿ ಲಕ್ಷ್ಮಣತೀರ್ಥ ನದಿ ನೀರು ಮುಟ್ಟಿದರೆ ಮನೆಗೆ ಹೋಗಿ ಬೇರೊಂದು ನೀರಿನಲ್ಲಿ ಸಾಬೂನು ಬಳಸಿ ಕೈ ತೊಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಜನಪ್ರತಿನಿಧಿಗಳು ಭೇಟಿ ಮಾಡಿ ಇದರ ಬಗ್ಗೆ ಕೇಳಿದ್ರೆ ಪಿಐಎಲ್ ಹಾಕಲು ಸಹಕರಿಸುತ್ತೀವಿ ಅಂತಾರೆ. ಸಾಮಾನ್ಯ ಜನ ಪಿಐಎಲ್ ಹಾಕೋದಾದರೆ ಜನಪ್ರತಿನಿಧಿಗಳು ಯಾಕೆ? ಅವರನ್ನ ಗೆಲ್ಲಿಸಿದ್ದಾದರೂ ಯಾಕೆ ಎನ್ನುವ ಪ್ರಶ್ನೆಗಳು ಕಾಡುತ್ತವೆ” ಎಂದು ಬೇಸರ ವ್ಯಕ್ತಪಡಿಸಿದರು.
“ಜನಪ್ರತಿನಿಧಿಗಳು ಇನ್ನಾದರೂ ಪ್ರತಿಷ್ಠೆ ಬಿಟ್ಟು, ಅಧಿಕಾರಿಗಳು ಬೇಜಾಬ್ದಾರಿತನ ಮರೆತು, ನಗರಸಭೆ ಅದರ ಜವಾಬ್ದಾರಿ ಅರಿತು ಕೆಲಸಮಾಡಬೇಕು. ಲಕ್ಷ್ಮಣತೀರ್ಥ ನದಿ ಉಳಿಸಿಕೊಳ್ಳುವ ಕೆಲಸ ಮಾಡಬೇಕು” ಎಂದರು.
