ಮೈಸೂರು ಜಿಲ್ಲೆ, ಹೆಗ್ಗಡದೇವನ ಕೋಟೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬಳ್ಳೆ ವನ್ಯಜೀವಿ ವಲಯದಲ್ಲಿ ಆನೆ ದಾಳಿಗೆ ತುತ್ತಾಗಿ ಮೃತಪಟ್ಟಿದ್ದ ಐಎಫ್ಎಸ್ ಅಧಿಕಾರಿ ಮಣಿಕಂಠನ್ ರವರ ಪ್ರತಿಮೆಯನ್ನು ‘ವಿಶ್ವ ವನ್ಯಜೀವಿ ದಿನ ‘ದ ಅಂಗವಾಗಿ ಡಿಸಿಎಫ್ ಪಿ ಎ ಸೀಮಾ ಅನಾವರಣಗೊಳಿಸಿದರು.
ಏಳು ವರ್ಷಗಳ ಹಿಂದೆ ಬಳ್ಳೆ ವನ್ಯಜೀವಿ ವಲಯದ,ಡಿಬಿ ಕುಪ್ಪೆ ಕಾಡಿನಲ್ಲಿ ಫೈರ್ ಲೈನ್ ಕಾಮಗಾರಿ ವೀಕ್ಷಣೆ ಮಾಡುವಾಗ ಕಾಡಾನೆ ಏಕಾಏಕಿ ಅಧಿಕಾರಿ ಮಣಿಕಂಠನ್ ಅವರ ಮೇಲೆ ದಾಳಿ ಮಾಡಿತ್ತು. ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಕೆಳಗೆ ಬಿದ್ದಾಗ ಕಾಡನೆ ತುಳಿದಿತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟು, ಜೊತೆಯಲ್ಲಿದ್ದ ಆರ್ ಎಫ್ ಓ ಸುಬ್ರಮಣ್ಯ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.
ವಿಶ್ವ ವನ್ಯ ಜೀವಿ ದಿನದಂದೆ ಮೃತರಾಗಿದ್ದ ಮಣಿಕಂಠನ್ ಅವರ ಪ್ರತಿಮೆಯನ್ನು ವೀರನಹೊಸಹಳ್ಳಿ ಮಾರ್ಗದಿಂದ ಕೇರಳದ ಕಡೆಗೆ ತೆರಳುವ ಮಾರ್ಗ ಮಧ್ಯವಾದ ಬಳ್ಳೆ ಸಮೀಪದಲ್ಲಿ ನಿರ್ಮಾಣವಾಗಿದೆ.

ಪ್ರತಿಮೆ ಅನಾವರಣ ಮಾಡಿ ಮಾತಾಡಿದ ಡಿಸಿಎಫ್ ಪಿ ಎ ಸೀಮಾ ” ದಕ್ಷ ಅಧಿಕಾರಿ ಮಣಿಕಂಠನ್ ಅವರು ನಿಷ್ಠಾವಂತರಾಗಿ, ದಕ್ಷತೆಯಿಂದ ಕೆಲಸ ಮಾಡಿದವರು. ಅರಣ್ಯ ಸೇವೆಗೆ ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಕಾಡಿನ ಬಗ್ಗೆ ಒಲವು, ಕಾಳಜಿ ಹೊಂದಿದ್ದ ಅಧಿಕಾರಿಯನ್ನು ಕಳೆದುಕೊಂಡು ಏಳು ವರ್ಷಗಳೇ ಸಂದಿವೆ ಆದರೆ ಇಂದು ಅವರ ಪ್ರತಿಮೆ ಅನಾವರಣ ಮಾಡಿದ್ದು ನಮ್ಮೆಲ್ಲರಿಗೂ ಸ್ಫೂರ್ತಿ ತರುವಂತದ್ದು ” ಎಂದರು.
” ಕಾಡಿನಲ್ಲಿ ಕೆಲಸ ಮಾಡುವಾಗ ಜಾಗರೂಕತೆ ವಹಿಸಬೇಕು, ತಮ್ಮ ರಕ್ಷಣೆಯ ಕಡೆಗೆ ಗಮನ ಹರಿಸಬೇಕು. ಇಂತಹ ಘಟನೆಗಳು ಎಂದಿಗೂ ಮರುಕಳಿಸಬಾರದು, ಕಾಡಿನಲ್ಲಿ ಓಡಾಡುವಾಗ ಎಚ್ಚರಿಕೆಯಿಂದ ಇರಬೇಕು.ಕಾಡು ಪ್ರಾಣಿಗಳ ಸಂಚಾರ ಇರುವುದನ್ನ ಖಾತ್ರಿ ಮಾಡಿಕೊಂಡು ಓಡಾಡುವುದು ಸೂಕ್ತ. ಕಾಡಿನಲ್ಲಿ ಪ್ರಾಣಿಗಳ ಇರುವಿಕೆ ಗಮನಿಸುವುದು, ಸೂಕ್ಷ್ಮವಾಗಿ ಆಲಿಸುವುದು ಸಿಬ್ಬಂದಿಗಳಿಗೆ ಅತ್ಯಗತ್ಯ. ಬಹಳ ಎಚ್ಚರಿಕೆ ವಹಿಸಿ ಕರ್ತವ್ಯ ನಿರ್ವಹಣೆ ಮಾಡಿ ” ಎಂದರು.

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ವೀರಪ್ಪನ್ ಅಡಗುದಾಣಗಳಲ್ಲಿ ಒಂದಾದ ಪಾಲಾರ್ ಹಾಡಿಗೆ ಬೆಳಕು; ಬುಡಕಟ್ಟುಗಳ ಮೊಗದಲ್ಲಿ ಮಂದಹಾಸ
ಕಾರ್ಯಕ್ರಮದಲ್ಲಿ ಎಸಿಎಫ್ ಗಳಾದ ಮಧು, ಎನ್ ಲಕ್ಷ್ಮಿಕಾಂತ್, ಅಂತರಸಂತೆ ವಲಯ ಅರಣ್ಯಧಿಕಾರಿ ಸಿದ್ದರಾಜು ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಇದ್ದರು.
