ಮಣಿಪುರದಲ್ಲಿ ನಡೆದಿರುವ ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆ ಖಂಡಿಸಿ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.
“ದೇಶದ ಮಹಿಳೆಯರು, ಆದಿವಾಸಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂಥದ್ದನ್ನು ಗಂಭೀರವಾಗಿ ಪರಿಗಣಿಸಬೇಕು. ಆದಿವಾಸಿ ಮಹಿಳೆಯರ ಮೇಲಾಗುತ್ತಿರುವ ಇಂತಹ ಶೋಷಣೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪರಿಗಣಿಸಿ ಮಣಿಪುರವನ್ನು ರಾಷ್ಟ್ರಪತಿ ಆಡಳಿತಕ್ಕೆ ಒಳಪಡಿಸಿ ಶಾಂತಿ ನೆಲೆಸುವಂತೆ ಕ್ರಮವಹಿಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪರಂಜ್ಯೋತಿ, ಸಂಶೋಧಕರ ಸಂಘದ ಮಾಜಿ ಅಧ್ಯಕ್ಷ ನಟರಾಜ್ ಶಿವಣ್ಣ, ಮಹೇಶ್ ಸೋಸಲೆ, ಕಲ್ಲಳ್ಳಿ ಕುಮಾರ್, ಪ್ರದೀಪ್, ಮುಮ್ಮಡಿ ಶಿವಮೂರ್ತಿ, ಮಂಜುನಾಥ್ ಶರ್ಮ, ಸಚಿನ್, ಅರುಣ್ ಸೇರಿದಂತೆ ಬಹುತೇರು ಇದ್ದರು.
ಯಾದಗಿರಿ: ಮಣಿಪುರದಲ್ಲಿ ಇಬ್ಬರು ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರವನ್ನು ಯಾದಗಿರಿ ಜಿಲ್ಲೆಯ ಎಐಡಿಎಸ್ಒ ಕಾರ್ಯಕರ್ತೆ ಶಿಲ್ಪಾ ಬಿ.ಕೆ ಖಂಡಿಸಿದ್ದಾರೆ. “ಈ ಘಟನೆಯು ನಮ್ಮಲ್ಲಿ ಅತೀವ ಸಂಕಟವನ್ನು ಉಂಟುಮಾಡಿದೆ. ಸಮುದಾಯದ ಹೆಸರಿನಲ್ಲಿ ಜನಗಳ ಸಾಮೂಹಿಕ ಹತ್ಯೆ, ದಾಳಿಗಳು, ಅತ್ಯಾಚಾರ, ಗುಂಪು ಅತ್ಯಾಚಾರಗಳು ಮಣಿಪುರದಲ್ಲಿ ಕಳೆದ ಎರಡು ತಿಂಗಳುಗಳಿಂದ ಎಡೆಬಿಡದೆ ನಡೆಯುತ್ತಿವೆ. ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ನೀತಿಗಳು, ಸಮುದಾಯಗಳ ನಡುವೆ ವಿಭಜನೆಯನ್ನು ಉಂಟುಮಾಡಿ ಮಣಿಪುರ ಹೊತ್ತುರಿಯಲು ಕಾರಣವಾಗಿದೆ” ಎಂದರು.
“ಇಬ್ಬರು ಹೆಣ್ಣು ಮಕ್ಕಳನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ದೇಶದ ಜನ ಆಘಾತಕ್ಕೆ ಒಳಗಾಗಿದ್ದಾರೆ. ಇಂತಹ ನೂರಾರು ಘಟನೆಗಳು ಈ ಹಿಂದೆ ಜರುಗಿವೆ ಎಂದು ಮಣಿಪುರದ ಮುಖ್ಯಮಂತ್ರಿ ನಾಚಿಕೆಯಿಲ್ಲದೆ ಹೇಳಿದ್ದಾರೆ. ಈ ಅಮಾನವೀಯ ನಡವಳಿಕೆಗೆ ತುತ್ತಾದ ಹೆಣ್ಣು ಮಗಳು, ಈ ಘಟನೆ ನಡೆಯುವಾಗ ನಮಗೆ ಪೊಲೀಸರಿಂದ ಸಹಾಯ ಸಿಗಲಿಲ್ಲ. ಬದಲಿಗೆ, ಆರೋಪಿಗಳ ಕೈಗೆ ಅವರೇ ನಮ್ಮನ್ನು ಒಪ್ಪಿಸಿದರೆಂದು ಅತ್ಯಂತ ನೋವಿನಿಂದ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ” ಎಂದು ಹೇಳಿದರು.
“ಮಣಿಪುರದಲ್ಲಿ ನಡೆಯುತ್ತಿರುವ ಪ್ರಕ್ಷೋಭೆಯನ್ನು ಬಿಜೆಪಿ ಸರ್ಕಾರ ಹೇಗೆ ನಿಭಾಯಿಸಿದೆ ಎನ್ನುವುದಕ್ಕೆ ಆ ಹೆಣ್ಣುಮಕ್ಕಳ ಸ್ಥಿತಿಯೇ ಸಾಕ್ಷಿಯಾಗಿದೆ. ಸರ್ಕಾರವು ತನ್ನ ಅಜೆಂಡಾವನ್ನು ಮುಂದುವರಿಸಲು, ವೈಷಮ್ಯವನ್ನು ಸೃಷ್ಟಿಸಿ, ಆ ಮೂಲಕ ಸಮುದಾಯಗಳ ನಡುವಿನ ವಿಭಜನೆಯನ್ನು ಪ್ರೋತ್ಸಾಹಿಸಿದ್ದಾರೆ. ಸರ್ಕಾರದಿಂದ ಸಾಂತ್ವಾನದ ಮಾತುಗಳು ಅತ್ಯಂತ ಸಾಮಾನ್ಯ ರೀತಿಯದ್ದಾಗಿದ್ದು, ವಿಳಂಬವಾಗಿದೆ” ಎಂದು ಟೀಕಿಸಿದರು.
ಈ ಸುದ್ದಿ ಓದಿದ್ದೀರಾ? ‘ಸ್ಟೋರಿ ಆಫ್ ಸೌಜನ್ಯ’; ಸಿನಿಮಾ ಆಗಲಿದೆ ಧರ್ಮಸ್ಥಳ ಸೌಜನ್ಯ ಪ್ರಕರಣ
“ಸಮುದಾಯದ ಹೆಸರಿನಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಪ್ರತಿಯೊಂದು ಹಿಂಸಾಚಾರಗಳು, ಅಮಾನವೀಯ ಕೃತ್ಯಗಳು ನಾಚಿಕೆ ಪಡುವಂತಹ ಸಂಗತಿಯಾಗಿದೆ. ಇವು ಸ್ವಯಂಪ್ರೇರಿತವಾಗಿ ನಡೆಯುವ ಘರ್ಷಣೆಗಳಲ್ಲ. ಬದಲಿಗೆ ಆಳುವ ವರ್ಗದ ಕೈವಾಡ. ನೇತಾಜಿಯವರ ಐಎನ್ಎಯನ್ನು ಅಪಾರ ಗೌರವ ಮತ್ತು ದೇಶಭಕ್ತಿಯಿಂದ ಸ್ವಾಗತಿಸಿದ ರಾಜ್ಯ ಇಂತಹ ಸ್ಥಿತಿಗೆ ಬಂದಿರುವುದು ನೋವಿನ ಸಂಗತಿ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಐಎನ್ಎ ಸೈನಿಕರನ್ನು ಬೆಂಬಲಿಸಲು ಆ ನೆಲವು ಮಾನವೀಯತೆಯಿಂದ ಒಗ್ಗೂಡಿತ್ತು. ಇಂದಿಗೂ ದೇಶದ ಜನರು ನೇತಾಜಿಯನ್ನು ತಮ್ಮ ಹೃದಯದಲ್ಲಿ ಗೌರವಯುತವಾಗಿ ಇಟ್ಟುಕೊಂಡಿದ್ದಾರೆ” ಎಂದು ಹೇಳಿದರು.
“ಈ ಸಂದರ್ಭದಲ್ಲಿ ಮಾನವೀಯತೆಯನ್ನು ಉಳಿಸಲು ಜನರೆಲ್ಲ ಮುಂದೆ ಬರಬೇಕು. ಜನರಲ್ಲಿ ಒಡಕುಗಳನ್ನು ಸೃಷ್ಟಿಸುವ ಸರ್ಕಾರಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು” ಎಂದು ಎಐಡಿಎಸ್ಒ ಪರವಾಗಿ ಕರೆ ನೀಡಿದರು.