ಹಬ್ಬ ಇವತ್ತೇ ಮುಗಿಯಲಿಲ್ಲ. ಮುಂದೆಯೂ ಕೂಡ ಮಾಡಬೇಕು. ಆದ್ದರಿಂದ ನಾಗಮಂಗಲದಲ್ಲಿ ಶಾಂತಿ ಹಾಗೂ ಸೌಹಾರ್ದತೆಯ ಕಡೆಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಶನಿವಾರ ನಾಗಮಂಗಲ ಪಟ್ಟಣದ ಜಯಮ್ಮ ಕೃಷ್ಣಪ್ಪ ಸಮುದಾಯ ಭವನದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ವಿವಿಧ ಸಮುದಾಯದ ಯುವಜನರು ಸಮಿತಿ ರಚಿಸಿಕೊಂಡು ಧಾರ್ಮಿಕ ಕಾರ್ಯಕ್ರಮಗಳು, ಮೆರವಣಿಗೆ ನಡೆದ ಸಂದರ್ಭದಲ್ಲಿ ಯಾವುದೇ ಬೀದಿಯಲ್ಲಿ ಸಾಗಿದರೂ ಯಾವುದೇ ಗಲಭೆಯಾಗದಂತೆ ಸೌಹಾರ್ದತೆ ಮೆರೆಯಬೇಕು. ತಾಲೂಕು ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು.
ನನಗೆ ಐವತ್ತು ವರ್ಷ. ಇಷ್ಟು ವರ್ಷ ಇತಿಹಾಸದಲ್ಲಿ ಹಿಂದು ಮುಸ್ಲಿಮ್ ಗಲಾಟೆ ನಾನಂತು ನೋಡಿಲ್ಲ. ನಮ್ಮಲ್ಲಿ ಎಲ್ಲರೂ ಇವತ್ತು ದುಡಿದು ಬದುಕು ಮಾಡುವವರು. ಇಂತಹ ಘಟನೆಗಳು ಮುಂದೆ ಆಗಬಾರದು. ಜನರು ಸೌಹಾರ್ದತೆಯಿಂದ ಬದುಕು ಸಾಗಿಸಲು ಅವಕಾಶ ಮಾಡಿಕೊಡಿ ಎಂದು ಮಹಮ್ಮದ್ ಹೇಳಿದರು.
ಮಂಡ್ಯ ಕೃಷಿ ಪ್ರಧಾನ ಜಿಲ್ಲೆ ನಡೆದಿರುವ ಘಟನೆ ದುರದೃಷ್ಟಕರ. ನಾವು ಪ್ರಜೋದನೆಗೆ ಒಳಗಾಗುವುದು ಬೇಡ. ಕುವೆಂಪು ಹೇಳಿದಂತೆ ಎಲ್ಲರು ಒಟ್ಟಾಗಿ ಬಾಳೋಣ. ಯಾರು ನಿಜವಾದ ಕಾರಣಕರ್ತರು ಅವರಿಗೆ ದಂಡನೆ ಕೊಡಿಸಿ. ಆ ದಾರಿಯಲ್ಲಿ ಇರುವ ಸಿಸಿ ಪರಿಶೀಲಿಸಿ ಅಮಾಯಕರನ್ನು ಬಿಟ್ಟುಬಿಡಿ ಎಂದು ನಾಗರಾಜು ಭೀಮನಹಳ್ಳಿ ಹೇಳಿದರು.
ತಲವಾರು ಮೂಲಕ ಅಟ್ಯಾಕ್ ಮಾಡಿದರು ಎಂಬಿತ್ಯಾದಿ ಪದ ಬಳಕೆ ಮಾಡಿ ಅತಿರೇಕವಾಗಿ ತೋರಿಸುವುದು ಬೇಡ. ಮಾಧ್ಯಮದವರು ಏನು ನಡೆದಿದೆ ಅದನ್ನು ಮಾತ್ರ ತೋರಿಸಿ. ಟಿಆರ್ಪಿ ಹೆಚ್ಚಿಸಿಕೊಳ್ಳಲು ಇಲ್ಲದನ್ನು ಬಿಂಬಿಸಬೇಡಿ ಎಂದು ಸುಹೇಲ್ ಮನವಿ ಮಾಡಿದರು.
ಇಲ್ಲಿಗೆ ಸಾಕು ಬಿಟ್ಟುಬಿಡೋಣ. ನಾವು ಹಬ್ಬ ಮಾಡಲು ಪೊಲೀಸರು ಬೇಕ. ನಾಳೆ ನೀವು ಮೀಲಾದ್ ಮಾಡಬೇಕು. ನೀವು ಹಬ್ಬ ಮಾಡುವಾಗ ನಾವು ಜೈಕಾರ ಹಾಕಬೇಕು. ನಾವು ಹಬ್ಬದ ಮಾಡುವಾಗ ನೀವು ಜೈಕಾರ ಹಾಕಿಕೊಂಡು ಹಬ್ಬ ಮಾಡಿದರೆ ನಮ್ಮ ನಡುವೆ ಬೇಳೆ ಬೇಯಿಸಿಕೊಳ್ಳುವವರಿಗೆ ಬರಲು ಆಗುವುದಿಲ್ಲ. ಈಗ ಸುಟ್ಟಿರುವ ಅಂಗಡಿಗಳಲ್ಲಿ ನಿಮ್ಮದಾದರೆ ಒಳಗಿರುವ ಬೈಕು, ಬಟ್ಟೆ ನಮ್ದು. ನೀವು, ನಾವು ಮಾನಸು ಮಾಡಿದರೆ ಮಾತ್ರ ಶಾಂತಿ ಸಾಧ್ಯ ಎಂದು ಸುಭಾಷ್ ಹೇಳಿದರು.
ಹಿಂದು- ಮುಸ್ಲಿಮರು ತಮ್ಮ ನಡುವೆ ಇರುವ ಕಿಡಿಗೇಡಿಗಳನ್ನು ಹತ್ತಿಕ್ಕಬೇಕು. ಪ್ರಚೋದನೆಗೆ ಒಳಗಾಗಬಾರದು. ಸಾಮರಸ್ಯದಿಂದ ಬಾಳೋಣ. ಗಣೇಶ ಹಬ್ಬವನ್ನು ಎಲ್ಲಾ ಜನಾಂಗದವರು ಸೇರಿ ಆಚರಿಸೋಣ ಎಂದು ಡಿಎಸ್ಎಸ್ನ ಶ್ರೀನಿವಾಸ್ ಆಗ್ರಹಿಸಿದರು.
ಶಾಂತಿ ಸಭೆಗೆ ಮಾಧ್ಯಮದವರ ಪ್ರವೇಶ ನಿರಾಕರಿಸಲಾಗಿತ್ತು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್, ಎಸ್ಪಿ ಬಾಲದಂಡಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ ಸೇರಿದಂತೆ ಅಧಿಕಾರಿಗಳು ಹಾಗೂ ಹಿಂದೂ-ಮುಸ್ಲಿಂ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
