ಡಾ.ಚನ್ನಬಸವ ಪಟ್ಟದ್ದೇವರು ತೋರಿದ ಮಾರ್ಗದಲ್ಲಿ ಕೈಲಾದಷ್ಟು ಸಮಾಜ ಸೇವೆ ಮಾಡುತ್ತಿದ್ದೇನೆ. ಎಂದಿಗೂ ಪ್ರಶಸ್ತಿ, ಪುರಸ್ಕಾರ ಆಸೆಗಾಗಿ ಕೆಲಸ ಮಾಡಿಲ್ಲ. ಸದ್ದು ಗದ್ದಲ ಇಲ್ಲದೇ ಸಮಾಜಕ್ಕೆ ಒಳಿತಾಗುವ ರೀತಿಯಲ್ಲಿ
ಸೇವೆ ಸಲ್ಲಿಸುತ್ತಿದ್ದೇನೆ ಎಂದು ನಾಡೋಜ ಪುರಸ್ಕೃತ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಭಾಲ್ಕಿ ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಗುರುವಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, “ನನ್ನ ಅಳಿಲು ಸೇವೆಗೆ ಸರ್ಕಾರ, ಸಂಘ ಸಂಸ್ಥೆಗಳು ಅನೇಕ ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸಿವೆ. ಇದೀಗ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡೋಜ ಪದವಿ ನೀಡಿ ಗೌರವಿಸಿದೆ. ವೈಯಕ್ತಿಕವಾಗಿ ನನಗೆ ಏನೇ ಪ್ರಶಸ್ತಿ, ಪುರಸ್ಕಾರ ಬಂದರೂ ಅದು ಭಕ್ತರಿಗೆ ಸಮರ್ಪಣೆ ಆಗುತ್ತದೆ” ಎಂದರು.
“ನಾನು ಮಠಕ್ಕೆ ಸ್ವಾಮೀಜಿ ಆಗಬೇಕೆಂದು ಬಂದವನಲ್ಲ. ವಿದ್ಯಾಭ್ಯಾಸಕ್ಕೆ ಮಠಕ್ಕೆ ಬಂದ ನನ್ನಲ್ಲಿನ ಅಧ್ಯಾತ್ಮ ಹಸಿವು ಗುರುತಿಸಿ ಡಾ.ಚನ್ನಬಸವ ಪಟ್ಟದ್ದೇವರು ಮಠಕ್ಕೆ ಪೀಠಾಧಿಪತಿ ಮಾಡಿದರು. ಶ್ರೀಮಠಕ್ಕೆ ಆಸ್ತಿಪಾಸ್ತಿ
ಏನು ಇರಲಿಲ್ಲ. ಸಂಕಷ್ಟದಲ್ಲೇ ಮಠವನ್ನು ಮುನ್ನಡೆಸಿಕೊಂಡು 1992ರಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಅಡಿ ಮಠದಲ್ಲೇ ಸಣ್ಣದೊಂದು ಶಾಲೆ ತೆರೆದಿದೆ. 40 ಮಕ್ಕಳು, ಇಬ್ಬರು ಶಿಕ್ಷರಿಂದ ಆರಂಭಗೊಂಡ ಶಿಕ್ಷಣ ಸಂಸ್ಥೆ ಇಂದು ಪಟ್ಟದ್ದೇವರ ಆಶೀರ್ವಾದ, ಸಿಬ್ಬಂದಿಗಳ ಪ್ರಾಮಾಣಿಕ ಪ್ರಯತ್ನ, ಭಕ್ತರ ಸಹಕಾರದಿಂದ 20 ಸಾವಿರ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. 2 ಸಾವಿರಕ್ಕೂ ಅಧಿಕ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ” ಎಂದು ಹೆಮ್ಮೆಪಟ್ಟರು.
ಶಿಕ್ಷಕರು ಗಡಿಯಾರ ನೋಡಿ ಪಾಠ ಮಾಡಬೇಡಿ:
“ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣ ಪೂರಕವಾಗಿದೆ. ಹಾಗಾಗಿ ಶಿಕ್ಷಕರಾದವರು ಗಡಿಯಾರ ನೋಡಿ ಪಾಠ ಮಾಡದೇ ಮಕ್ಕಳ ಬೆಳವಣಿಗೆ ದೃಷ್ಟಿಯಿಂದ ಬೋಧನೆ ಮಾಡಬೇಕು. ಕೇವಲ ಅಂಕ ಗಳಿಕೆಗೆ ಒತ್ತು ನೀಡದೇ ಮಕ್ಕಳಲ್ಲಿ ಶಿಸ್ತು ಕಲಿಸಿ ಕೊಡುವುದರ ಜತೆಗೆ ಶಿಕ್ಷಣ, ಸಂಸ್ಕಾರ ನೀಡಿ ಮಾನವೀಯ ಮೌಲ್ಯಗಳನ್ನು ಬೆಳೆಸಿ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ವೈದ್ಯರು, ಎಂಜನಿಯರ, ಸಂಶೋಧಕರು, ಉನ್ನತ ಅಧಿಕಾರಿಗಳಾಗಿ ದೇಶದ ವಿವಿಧೆಡೆ ಸೇವೆ ಸಲ್ಲಿಸುತ್ತಿರುವುದು ಖುಷಿ ತಂದು ಕೊಟ್ಟಿದೆ. ಮುಂದೆಯು ಎಸ್ಸೆಸ್ಸೆಲ್ಸಿ, ಪಿಯು, ಸಿಇಟಿ, ನೀಟ್ ಸೇರಿ ಮುಂತಾದ ಕೋರ್ಸ್ಗಳಲ್ಲಿ ರಾಜ್ಯ ಮತ್ತು ರಾಷ್ಟ್ರಕ್ಕೆ ಪ್ರಥಮ ರ್ಯಾಂಕ್ ತರುವ ನಿಟ್ಟಿನಲ್ಲಿ ಶಿಕ್ಷಕರು ಪ್ರಯತ್ನಿಸಬೇಕು” ಎಂದು ಡಾ.ಬಸವಲಿಂಗ ಪಟ್ಟದ್ದೇವರು ಕಿವಿಮಾತು ಹೇಳಿದರು.
25 ಲಕ್ಷ ರೂ. ಚೆಕ್ ಹಿಂತಿರುಗಿಸಿದ ಪಟ್ಟದ್ದೇವರು :
ಭಾಲ್ಕಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದ ಮುಖ್ಯಸ್ಥರು ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಪತ್ರ ಮತ್ತು 25 ಲಕ್ಷ ರೂ ಚೆಕ್ ನೀಡಿ ಪೂಜ್ಯರನ್ನು ಸನ್ಮಾನಿಸಿದರು. ಡಾ.ಬಸವಲಿಂಗ ಪಟ್ಟದ್ದೇವರು ಭಾವುಕರಾಗಿ ಮಾತನಾಡಿ,”ನನಗೆ ಹಣ ಮುಖ್ಯವಲ್ಲ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಮುಖ್ಯವಾಗಿದೆ. ನಮ್ಮ ಸಂಸ್ಥೆಯಲ್ಲಿ ಕಲಿಯುವ ಮಕ್ಕಳಿಗೆ ಉತ್ತಮ ಸಂಸ್ಕಾರ, ನೈತಿಕತೆ, ಮಾನವೀಯತೆ ಕಲಿಸಿ ಕೊಟ್ಟರೆ ಅದೇ ನನಗೆ ಕೊಡುವ ಬಹುದೊಡ್ಡ ಉಡುಗೊರೆ, ಕಾಣಿಕೆ ಆಗಲಿದೆ ಎಂದು ಹೇಳಿ ಕಾಣಿಕೆ ರೂಪದಲ್ಲಿ ನೀಡಿದ 25 ಲಕ್ಷ ರೂ. ಚೆಕ್ ನಯವಾಗಿ ನಿರಾಕರಿಸಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ಹಿಂತಿರುಗಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಪೊಲೀಸ್ ಠಾಣೆ ಮೊರೆಹೋಗಿದ್ದ ಮಹಿಳೆಗೆ ಪೇದೆಯಿಂದಲೇ ಲೈಂಗಿಕ ಕಿರುಕುಳ; ದೂರು ದಾಖಲು
ಕಾರ್ಯಕ್ರಮದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದರು. ಮಹಾಲಿಂಗ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದರು.ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದ ಮುಖ್ಯಸ್ಥರು ಹಾಜರಿದ್ದರು. ಆಡಳಿತಾಧಿಕಾರಿ ಮೋಹನ ರೆಡ್ಡಿ ಸ್ವಾಗತಿಸಿದರು. ಮಧುಕರ ಗಾಂವಕರ ನಿರೂಪಿಸಿದರು. ಲಕ್ಷ್ಮಣ ಮೇತ್ರೆ ವಂದಿಸಿದರು.