ತೋಟಗಾರಿಕೆ ಬೆಳೆಯಲ್ಲಿ ಅಡಿಕೆ ಬೆಳೆಯೂ ಒಂದು. ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿಯ ಭಾಗಗಳಲ್ಲಿ ರೈತರಿಗೆ ಅಡಿಕೆಯೇ ಮುಖ್ಯ ತೋಟಗಾರಿಕೆ ಬೆಳೆ. ಅಡಿಕೆ ಬೆಳೆಯನ್ನೇ ಅವಲಂಬಿಸಿ ಹಲವಾರು ಕುಟುಂಬಗಳು ಜೀವನ ಸಾಗಿಸುತ್ತಿವೆ.
ಸಮತಟ್ಟಾದ, ಉಬ್ಬು-ತಗ್ಗುಗಳಿರುವ ಭೂಮಿಯಲ್ಲಿಯೂ ಬೆಳೆಯಬಹುದಾದ ಬೆಳೆ ಅಡಿಕೆ. ಆದರೂ, ಅಡಿಕೆ ಬೆಳೆಯಲು ಹಲವಾರು ಕ್ರಮಗಳನ್ನು ಅನುಸರಿಸಬೇಕು. ಸಸಿ ನಡೆವ ಜಾಗದಲ್ಲಿ ಕಸಕಡ್ಡಿ, ಮರ, ಪೊದರುಗಳು ಇರದಂತೆ ಭೂಮಿಯನ್ನು ಸಿದ್ದಗೊಳಿಸಬೇಕು. ನೀರು ಹರಿದುಹೋಗಲು ಬಸಿಗಾಲುವೆ ಮಾಡಬೇಕು. ಇದರಿಂದ, ಸಸಿಗಳಿಗೆ ರೋಗ ಕಾಡುವುದನ್ನು ನಿಯಂತ್ರಿಸಬಹುದು.
ಅಡಿಕೆ ಸಸಿಯನ್ನು ನೆಡುವ ಕ್ರಮ
ಎರಡು ಅಡಿಯಲ್ಲಿ ಹೊಂಡ ತೆಗೆದು ಸಸಿ ನೆಡಬೇಕು. ಬಳಿಕ, ಮೇಲ್ಮಣ್ಣು ಅಥವಾ ಸಡ್ಡು ಮಣ್ಣಿಗೆ 5-6 ಕಿಲೋ ಗ್ರಾಂ ಕೊಟ್ಟಿಗೆ ಗೊಬ್ಬರ ಹಾಕಬೇಕು. ಅತೀ ಆಳದ ಗುಂಡಿಗಳಲ್ಲಿ ಸಸಿಗಳನ್ನು ನೆಡಬಾರದು. ಹಾಗೆ ಮಾಡಿದರೆ, ಸಸಿಗಳಿಗೆ ಫಲವತ್ತಾದ ಮಣ್ಣು ಸಿಗದೆ ಪ್ರಾಯದಲ್ಲಿ ಸೊರಗುತ್ತದೆ. ವೈಜ್ಞಾನಿಕ ಪದ್ಧತಿಯಲ್ಲಿ ಹನಿ ನೀರಾವರಿ ಮೂಲಕ ನೀರುಣಿಸಬೇಕು. ಅಡಿಕೆ ಗಿಡಗಳ ನಡುವಿನ ಅಂತರ 2-3 ಅಡಿ ದೂರ ಇರಬೇಕು.
ಅಡಿಕೆ ಗಿಡ ಬೆಳವಣಿಗೆಯ ಶೈಲಿ
ಅಡಿಕೆ ಗಿಡಗಳನ್ನು ಸಣ್ಣ ಪ್ರಾಯದಲ್ಲಿ ತೋಟಗಳಿಗೆ ನೆಡಬೇಕು. ಒಂದು ವರ್ಷದವರೆಗೆ ಪೋಷಣೆ ಮಾಡಬೇಕು. ಅಡಿಕೆಯಲ್ಲಿ 3-4ನೇ ವರ್ಷಕ್ಕೆ ಹೂ, ಮೊಗ್ಗು ಮೂಡುತ್ತದೆ. 4-5 ವರ್ಷಕ್ಕೆ ಫಲ ನೀಡುತ್ತದೆ. ಒಂದು ಅಡಿಕೆ ಗಿಡದಲ್ಲಿ 5-6 ಗೊನೆ ಅಡಿಕೆ ಬಿಡುತ್ತದೆ.
ಹೆಚ್ಚಾಗಿ ನೀರುಣಿಸಬಾರದು
ಅಡಿಕೆ ತೋಟದಲ್ಲಿ ಹೆಚ್ಚಾಗಿ ನೀರು ನಿಂತರೆ, ಅಡಿಕೆಯಲ್ಲಿ ಸುಳಿ ಕೊಳೆ ರೋಗ, ರಸವಡೆ ರೋಗಗಳು ಕಂಡು ಬರುತ್ತವೆ. ಹೀಗಾಗಿ, ಹೆಚ್ಚಾಗಿ ನೀರುಣಿಸಬಾರದು. ಹನಿ ನೀರಾವರಿ ಅಳವಡಿಕೆ, ಮಳೆನೀರು ಹೋಗಲು ಬಸಿಗಾಲುವೆ ನಿರ್ಮಿಸಬೇಕು. ಪ್ರೋಟೋವೇಟರ್ಅನ್ನು ಮಣ್ಣಿಗೆ ಅಳವಡಿಸಬೇಕು.
“ನೀರು ಜಾಸ್ತಿಯಾದರೆ ಪೋಶಕಾಂಶಗಳು ಕೊರತೆಯುಂಟಾಗಿ, ನುಸಿ ಕೀಟಗಳ ಹಾವಳಿ ಹೆಚ್ಚಾಗುತ್ತದೆ” ಎಂದು ತೆಂಗು ಮತ್ತು ಅಡಿಕೆ ಸಂಶೋಧನೆ ವಿಜ್ಞಾನಿಯಾದ ನಾಗಪ್ಪ ದೇಸಾಯಿ ತಿಳಿಸಿದ್ದಾರೆ.
ಸಮಗ್ರ ಪೋಷಕಾಂಶಗಳನ್ನು ನಿರ್ವಹಣೆಗಾಗಿ ಸಾವಯವ ಗೊಬ್ಬರ, ಕೋಳಿ, ಎರೆಹುಳ, ಸೆಣಬು ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸಬೇಕು. ಜೈವಿಕ ಗೊಬ್ಬರಗಳು ಒಂದು ಗಿಡಕ್ಕೆ 50 ಗ್ರಾಂ ಕೊಡಬೇಕು.
ಅಡಿಕೆ ಗಿಡಗಳಲ್ಲಿ ಎಲೆಚಿಕ್ಕಿ, ಕೊಳೆ, ಹಳದಿ ರೋಗಗಳು
ಅಡಿಕೆ ಗಿಡಗಳಲ್ಲಿ ಎಲೆಚಿಕ್ಕಿ, ಕೊಳೆ, ಹಳದಿ ರೋಗಗಳು ಹೆಚ್ಚಾಗಿ ಬಾಧಿಸುತ್ತವೆ. ಅವುಗಳ ನಿಯಂತ್ರಣಕ್ಕೆ ರಾಸಾಯನಿಕ ಔಷಧಿಗಳನ್ನು ಹೆಚ್ಚಾಗಿ ಬಳಸಬಾರದು. ನೈಸರ್ಗಿಕವಾಗಿ ಔಷಧಿಗಳನ್ನು ತಯಾರಿಸಿ, ಸಿಂಪಡಿಸಬೇಕು. ಟ್ರೈಕೊಡರ್ಮ, ಸೋಡೋಮ ನಸೂ, ಅಮೃತ ಸಂಜೀವಿನಿ ಹಾಗೂ ಗೋಕೃಪಮ್ಮೃತ ಇವುಗಳನ್ನು ಉಪಯೋಗಿಸುವುದರಿಂದ ಶಿಲಿಂದ್ರಗಳು ನಾಶವಾಗುತ್ತದೆ. ಮಣ್ಣಿಗೆ ಸುಣ್ಣವನ್ನು ಸಿಂಪಡಿಸಬೇಕು.
ಬೇರಿನ ಮಣ್ಣನ್ನು ಅಗೆಯಬಾರದು. ಅಡಿಕೆಗೆ ಹಿಟ್ಟು ತಿಗಣೆ, ಕಂದುಜಿಗಿ ಹುಳುಗಳಿಗೆ ಕೀಟನಾಶಕಗಳನ್ನು ಹೆಚ್ಚಾಗಿ ಸಿಂಪಡಿಸಬಾರದು. ಸಾವಯವ ಗೊಬ್ಬರಗಳು ಬಳಸಬೇಕು. ತೆಂಗಿನ ಮಧ್ಯೆ ಅಡಿಕೆ ಹಾಕಿದರೆ ಅಣಬೆ ರೋಗ ಜಾಸ್ತಿ ಕಂಡುಬರುತ್ತದೆ. ಹಾಗಾಗಿ, ತೆಂಗಿನ ನಡುವೆ ಅಡಿಕೆ ಬೆಳೆಯುವುದನ್ನು ನಿಯಂತ್ರಿಸಬೇಕು.
ಎರಡು ವರ್ಷಕೊಮ್ಮೆ 1-2 ಇಂಚು ಮಣ್ಣು ಮಾತ್ರ ಬುಡಕ್ಕೆ ಹಾಕಬೇಕು. ಗೊಬ್ಬರಗಳನ್ನು ಬುಡಕ್ಕೆ ಹಾಕಿದರೆ ನಿಷ್ಕ್ರಿಯ (ಅರೆ ಜೀವ) ಆಗುತ್ತದೆ.
ಎಲೆಚುಕ್ಕೆ ರೋಗಕ್ಕಿಲ್ಲ ಮದ್ದು
ಮಲೆನಾಡಿನಲ್ಲಿ ಎಲೆಚಿಕ್ಕಿ ರೋಗ, ಹಳದಿ ರೋಗ ಜಾಸ್ತಿ ಕಂಡು ಬರುತ್ತವೆ. 4 ವರ್ಷದಿಂದ ಎಲೆಚುಕ್ಕೆ ರೋಗ ಹೆಚ್ಚಾಗಿದೆ. ಈ ರೋಗಕ್ಕೆ ಇಲ್ಲಿಯವರೆಗೂ ಯಾವುದೆ ವಿಜ್ಞಾನಿಗಳು ಮದ್ದು ಕಂಡುಹಿಡಿದಿಲ್ಲ. ಆದರೆ, ಕೆಲವು ಕಂಪನಿಗಳು ತಮ್ಮಲ್ಲಿ ಔಷಧವಿದೆ ಎಂದು ಹೇಳಿಕೊಳ್ಳುತ್ತಿವೆ. ಕಂಪನಿಗಳ ಪ್ರಚಾರಕ್ಕೆ ರೈತರು ಮರುಳಾಗಿ, ಸಿಕ್ಕ-ಸಿಕ್ಕ ಔಷಧಿಗಳನ್ನು ಕೊಂಡು, ಅಡಿಗೆ ಸಿಂಪಡಿಸಬಾರದು ಎಂದು ನಾಗಪ್ಪ ದೇಸಾಯಿ ತಿಳಿಸಿದ್ದಾರೆ.
ರೈತ ಸಂಘದ ಮುಖಂಡ ನವೀನ್ ಕುರ್ವೆನ್ ಅವರು ಈದಿನ.ಕಾಮ್ ಜೊತೆ ಮಾತನಾಡಿದ್ದು, “ಮಲೆನಾಡಿನ ಭಾಗದಲ್ಲಿ ಸಾಂಪ್ರದಾಯಕವಾಗಿ ಅಡಿಕೆ ಬೆಳೆಯುತ್ತೇವೆ 70 ವರ್ಷದಿಂದ ಹಳದಿ ರೋಗ ಬಂದು ನೂರಾರು ಕುಟುಂಬಗಳು ಬದುಕು ಕಳೆದುಕೊಂಡಿದ್ದಾರೆ. ಎಲ್ಲೆಡೆ ಎಲೆಚುಕ್ಕಿ ರೋಗ ಜಾಸ್ತಿಯಾಗಿದೆ. ಅಡಿಕೆಯನ್ನೇ ಅವಲಂಬಿಸಿರುವ ರೈತರು ಕಂಗಾಲಾಗಿದ್ದಾರೆ. ಸಾಲ ಮಾಡಿ ಅಡಿಕೆ ಬೆಳೆಯುತ್ತಿರುವ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಲೆನಾಡನ್ನು ಸ್ಪೆಷಲ್ ಅಗ್ರಿಕಲ್ಚರಲ್ ಜೋನ್ ಎಂದು ಘೋಷಿಸಿ ಸರ್ಕಾರ ವಿಶೇಷ ಪ್ಯಾಕೇಜ್ ಕೊಡಬೇಕು” ಎಂದು ಒತ್ತಾಯಿಸಿದ್ದಾರೆ.