ಮಹಿಳಾ ಸಿಬ್ಬಂದಿಗಳಿಗೆ ಮಹಿಳಾ ಸುರಕ್ಷತೆಯ ಅರಿವು ಮೂಡಿಸುವ ಮೂಲಕ ಕಾನೂನಿನಲ್ಲಿ ಮಹಿಳೆ ಹಾಗೂ ಮಕ್ಕಳಿಗಿರುವ ವಿಶೇಷ ಹಕ್ಕುಗಳ ಬಗ್ಗೆ ಮತ್ತು ಪೋಕ್ಸೊ ಕಾಯ್ದೆ, ಬಾಲ್ಯ ವಿವಾಹ ನೀಷೇಧ ಕಾಯ್ದೆಗಳ ಬಗ್ಗೆ ಪಿಎಸ್ಐ ಸ್ವಪ್ನ ಮಾಹಿತಿ ನೀಡಿದರು.
ಶಿವಮೊಗ್ಗ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿರುವ ರಿಲಯನ್ಸ್ ಮಾರ್ಟ್ನಲ್ಲಿ ರಾಣಿ ಚೆನ್ನಮ್ಮ ಪಡೆ ಉಸ್ತುವಾರಿಗಳು ಮಹಿಳಾ ಸಿಬ್ಬಂದಿಗಳಿಗಾಗಿ ಹಮ್ಮಿಕೊಂಡಿದ್ದ ಮಹಿಳಾ ಸುರಕ್ಷತೆಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
“ಸಾರ್ವಜನಿಕ ಸ್ಥಳದಲ್ಲಿ ನಿಮಗೆ ಯಾವುದೇ ಸಮಸ್ಯೆ, ಉಪಟಳ, ಕಿರಿಕಿರಿ ನೀಡುವವರಿದ್ದರೆ ಕೂಡಲೇ 112 ಸಹಾಯವಾಣಿ ಅಥವಾ ಚೆನ್ನಮ್ಮ ಪಡೆಗೆ ಮಾಹಿತಿ ನೀಡಿದರೆ ತೊಂದರೆ ನೀಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದರು.
“ಸಾಮಾಜಿಕ ಜಾಲತಾಣ, ಆನ್ಲೈನ್ ಚಾಟಿಂಗ್, ಫೇಸ್ ಬುಕ್, ಇನ್ಸ್ಟಾಗ್ರಾಂ ಬಳಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ನಿಮ್ಮ ಖಾಸಗಿ ಮಾಹಿತಿ, ಫೋಟೋಗಳನ್ನು ಹಂಚಿಕೊಳ್ಳಬೇಡಿ. ಅವುಗಳನ್ನು ನಿಮ್ಮ ವಿರುದ್ಧವೇ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ” ಎಂದು ಎಚ್ಚರಿಕೆ ನೀಡಿದರು.
“ಯಾರೇ ಆಗಲಿ, ತಮ್ಮನ್ನು ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಂಡು ನಿಮಗೆ ಕರೆ ಮಾಡಿ, ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್, ಎಟಿಎಂ ನಂಬರ್, ಎಟಿಎಂ ಪಿನ್ ನಂಬರ್ ಕೊಡಿ ಎಂದು ಕೇಳಿದಾಗ ಯಾವುದೇ ಕಾರಣಕ್ಕೂ ಕೊಡಬೇಡಿ. ಒಂದು ವೇಳೆ ಮಾಹಿತಿ ನೀಡಿದ್ದೇ ಆದಲ್ಲಿ, ನಿಮ್ಮ ಖಾತೆಯಲ್ಲಿರುವ ಹಣವನ್ನು ವರ್ಗಾವಣೆ ಮಾಡಿಕೊಂಡು ನಿಮಗೆ ಮೋಸ ಮಾಡುತ್ತಾರೆ. ಯಾವುದೇ ಬ್ಯಾಂಕ್ ಅಧಿಕಾರಿಗಳು ನಿಮ್ಮ ಖಾಸಗಿ ಅಥವಾ ವೈಯಕ್ತಿಕ ಮಾಹಿತಿಗಳನ್ನು ಕೇಳುವುದಿಲ್ಲ” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ನಂಜನಗೂಡು | ಆಕಳು ಕರುವಿನ ಬಾಲ ಕತ್ತರಿಸಿ ದುಷ್ಕರ್ಮಿಗಳು ಪರಾರಿ
“ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡುವಾಗ ಹಾಗೂ ಸಂತೆ, ಜಾತ್ರೆ, ಮಾರುಕಟ್ಟೆ, ಬಸ್ ಹಾಗೂ ರೈಲ್ವೆ ನಿಲ್ದಾಣದಂತಹ ಜನನಿಬಿಡ ಸ್ಥಳಗಳಲ್ಲಿ, ನಿಮ್ಮ ಬೆಲೆ ಬಾಳುವ ಆಭರಣ ಹಾಗೂ ನಿಮ್ಮ ವಸ್ತುಗಳ ಮೇಲೆ ಗಮನವಿರಲಿ. ಕಳ್ಳರು ನಿಮ್ಮ ಮೌಲ್ಯಯುತ ವಸ್ತುಗಳನ್ನು ಕಳ್ಳತನ ಮಾಡುವ ಸಾಧ್ಯತೆ ಇರುತ್ತದೆ. ನಿಮ್ಮ ವಸ್ತುಗಳ ಮೇಲೆ ಗಮನ ಇರಬೇಕು” ಎಂದರು.
“ಎಲ್ಲರೂ ಕಾನೂನನ್ನು ಪಾಲಿಸಿ, ಕಾನೂನನ್ನು ಗೌರವಿಸಿದಾಗ ಕಾನೂನು ಕೂಡ ನಿಮ್ಮನ್ನು ರಕ್ಷಿಸುತ್ತದೆ. ನಿಮ್ಮ ಸುರಕ್ಷತೆಯೇ ನಮ್ಮ ಹೊಣೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚೆನ್ನಮ್ಮ ಪಡೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಹಾಗೂ ರಿಲಯನ್ಸ್ ಮಾರ್ಟ್ನ ಅಧಿಕಾರಿ, ಸಿಬ್ಬಂದಿಗಳು ಇದ್ದರು.
