ಕೊಡಗು ಜಿಲ್ಲೆ, ಮಡಿಕೇರಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳು, ಕಂದಾಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕೊಡಗು ಜಿಲ್ಲಾಡಳಿತ ಸಹಯೋಗದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಬಗ್ಗೆ ಶನಿವಾರ ನಡೆದ ಕಾರ್ಯಾಗಾರದಲ್ಲಿ, ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಮಾತನಾಡಿ ‘ ಸರ್ಕಾರಿ ಭೂಮಿ ಸಂರಕ್ಷಿಸುವತ್ತ ಅಧಿಕಾರಿಗಳು ಆಸಕ್ತಿ ವಹಿಸಿ ‘ ಎಂದರು.
” ಭೂ ಕಬಳಿಕೆ ನಿರಂತರವಾಗಿ ನಡೆದಿದ್ದು, ಭೂ ಕಬಳಿಕೆ ಆಗದಂತೆ ತಡೆಯುವುದು ಅತೀ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡುವುದು ಅಥವಾ ಭೂ ಕಬಳಿಕೆ ಆಗದಂತೆ ಗಮನಹರಿಸುವುದು ವಿವಿಧ ಇಲಾಖೆಗಳ ಜವಾಬ್ದಾರಿಯಾಗಿದೆ.ಭೂ ಕಬಳಿಕೆ ಅಥವಾ ಒತ್ತುವರಿ ಎಲ್ಲಿ ಮಾಡಿದ್ದಾರೆ. ಅಲ್ಲಿ ಜಗಳ ಇರುತ್ತದೆ. ಸಾಕಷ್ಟು ಕಾನೂನುಗಳಿದ್ದರೂ ಸಹ ಭೂ ಕಬಳಿಕೆ ನಿಂತಿಲ್ಲ. ಇತ್ತೀಚಿನ ದಿನಗಳಲ್ಲಿ ಭೂಮಿಯ ಬೆಲೆ ಗಗನಕ್ಕೇರುವುದರಿಂದ ಭೂ ಮಾಫಿಯ ಹೆಚ್ಚಾಗಿದೆ. ಗೋಮಾಳ, ಕೆರೆಕಟ್ಟೆ, ಹಳ್ಳಕೊಳ್ಳ, ರಾಜ ಕಾಲುವೆ ಸೇರಿದಂತೆ ಎಲ್ಲವನ್ನು ಒತ್ತುವರಿ ಮಾಡುತ್ತಿದ್ದಾರೆ. ಇದನ್ನು ತಡೆಯುವುದು ವಿವಿಧ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿದೆ.
ಕರ್ನಾಟಕ ಲ್ಯಾಂಡ್ ರೆವೆನ್ಯೂ ಆಕ್ಟ್ ಸೇರಿದಂತೆ ವಿವಿಧ ಕಾಯ್ದೆಗಳಿದ್ದರೂ ಸಹ ಭೂ ಕಬಳಿಕೆ ನಡೆಯುತ್ತಿದೆ. ಇದಕ್ಕೆ ಪ್ರಮುಖ ಕಾರಣ ಶಿಕ್ಷೆ ಪ್ರಮಾಣ ಕಡಿಮೆ ಎಂದರೆ ತಪ್ಪಾಗಲಾರದು. ಮೂರು ವರ್ಷ ಜೈಲು ಹಾಗೂ 25 ಸಾವಿರ ರೂ ದಂಡ ಇದ್ದರೂ ಭೂ ಕಬಳಿಕೆಗೆ ಮುಂದಾಗುತ್ತಿದ್ದಾರೆ. ಒತ್ತುವರಿ ಮಾಡಿರುವ ಅಥವಾ ಭೂ ಕಬಳಿಕೆ ಮಾಡಿರುವ ಆಸ್ತಿಯನ್ನು ಮಾರುತ್ತಾರೆ. ಆ ನಿಟ್ಟಿನಲ್ಲಿ ಕೊಳ್ಳುವವರು ಯೋಚಿಸಬೇಕು. ಜೊತೆಗೆ ಪರಾಮರ್ಶಿಸಬೇಕು. ಸುಮ್ಮನೆ ಏಕಾಏಕಿ ಭೂಮಿ ಕೊಳ್ಳುವುದು ಸರಿಯಲ್ಲ ” ಎಂದು ಅಭಿಪ್ರಾಯಾಪಟ್ಟರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಮಾತನಾಡಿ ಕುರುಕ್ಷೇತ್ರ ನಡೆದಿರುವುದೇ ಭೂಮಿಗಾಗಿ ಎನ್ನುವುದನ್ನು ಯಾರೂ ಮರೆಯುವಂತಿಲ್ಲ. ಅನಾದಿಕಾಲದಿಂದಲೂ ನೀರು, ಭೂಮಿಗಾಗಿ ಯುದ್ದಗಳೇ ನಡೆದಿವೆ. ಆದ್ದರಿಂದ ಸರ್ಕಾರಿ ಭೂಮಿ ಸಂರಕ್ಷಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಳ ಆಗುತ್ತಿದೆ. ಜೊತೆಗೆ ಜನರಲ್ಲಿ ದುರಾಸೆಯು ಸಹ ಹೆಚ್ಚಾಗಿದೆ. ಆದ್ದರಿಂದ, ಭೂ ಕಬಳಿಕೆಯೂ ಸಹ ಅಧಿಕವಾಗುತ್ತಿದೆ. ಸರ್ಕಾರಿ ಭೂಮಿ ಸಂರಕ್ಷಣೆ ಬಗ್ಗೆ ಅಧಿಕಾರಿಗಳು ವಿಶೇಷ ಗಮನಹರಿಸಬೇಕು. ಮಾನ್ಸೂನ್ ಮಾರುತದಿಂದ ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಕೊಡಗು ಸೇರಿದಂತೆ ಮಲೆನಾಡು ಭಾಗದಲ್ಲಿ ಅರಣ್ಯ ಹಾಗೂ ಸರ್ಕಾರಿ ಭೂಮಿಯನ್ನು ಉಳಿಸುವುದು ಹಿಂದಿಗಿಂತ ಇಂದು ಅವಶ್ಯಕವಾಗಿದೆ.

ಕಾವೇರಿ ನದಿ ಪಾತ್ರ ಹಾಗೂ ಮಲೆನಾಡು ಭಾಗದಲ್ಲಿ ಪ್ರಾಕೃತಿಕ ಸಂಪತ್ತು ಸಂರಕ್ಷಿಸುವುದರಿಂದ ಕೋಟ್ಯಾಂತರ ಜನರಿಗೆ ನೀರು ಮತ್ತು ಅನ್ನ ನೀಡಲು ಸಾಧ್ಯವಾಗಿದೆ. ಆದ್ದರಿಂದ ಎಲ್ಲರೂ ಈ ಬಗ್ಗೆ ಯೋಚಿಸಬೇಕು. ಪ್ರಕೃತಿಯನ್ನು ಉಳಿಸಲು ಶ್ರಮಿಸಬೇಕು. ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗುವುದರಿಂದ ಇಡೀ ದಕ್ಷಿಣ ಭಾರತಕ್ಕೆ ಎಲ್ಲಾ ಜನರಿಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಒಳಿತು ಆಗುತ್ತಿದೆ ” ಎಂದರು.
ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯ ಕೆ.ಎಚ್.ಅಶ್ವತ್ಥ ನಾರಾಯಣಗೌಡ ಮಾತನಾಡಿ ” ಸರ್ಕಾರಿ ಭೂಮಿ ಒತ್ತುವರಿ ಆಗಿದ್ದಲ್ಲಿ ಅದನ್ನು ತೆರವುಗೊಳಿಸುವುದು ಪ್ರಮುಖ ಕಾರ್ಯವಾಗಿದೆ. ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಸಂಬಂಧಿಸಿದಂತೆ ಸರ್ಕಾರಿ ಭೂಮಿ ಸಂರಕ್ಷಿಸುವಲ್ಲಿ ಅಧಿಕಾರಿಗಳು ದೃಢಸಂಕಲ್ಪ ಮಾಡಬೇಕು. ಈ ಬಗ್ಗೆ ಇಚ್ಛಾಶಕ್ತಿ ಇರಬೇಕು. ಸರ್ಕಾರಿ ಭೂಮಿ ತೆರವುಗೊಳಿಸುವ ಸಂದರ್ಭದಲ್ಲಿ ಸ್ಥಳ ಮಹಜರು, ದಿನಾಂಕ ನಮೂದು ಮಾಡಬೇಕು. ಸರ್ವೆ ಜೊತೆಗೆ ಪಂಚನಾಮೆ ಮಾಡಿಸಬೇಕು. ಎಲ್ಲಾ ಹಂತದಲ್ಲಿ ದಿನಾಂಕ ನಮೂದು ಮಾಡಬೇಕು ಎಂದು ಸಲಹೆ ನೀಡಿದರು. ಸರ್ಕಾರಿ ಭೂಮಿ ಉಳಿಸಬೇಕು ಎಂಬ ಮನಸ್ಸು ಅಧಿಕಾರಿಗಳಲ್ಲಿ ಇರಬೇಕು ಈ ಕಾಯ್ದೆಯನ್ನು ಸದುಪಯೋಗ ಪಡಿಸಿಕೊಂಡು ಸರ್ಕಾರಿ ಭೂಮಿ ಸಂರಕ್ಷಿಸುವತ್ತ ಗಮನಹರಿಸಬೇಕು ” ಎಂದು ಸಲಹೆ ನೀಡಿದರು.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಹೊಸಮನಿ ಪುಂಡಲೀಕ ಮಾತನಾಡಿ ‘ ಕಾನೂನಿನಲ್ಲಿ ಎರಡು ರೀತಿ ಇದ್ದು, ಒಂದು ಮನುಷ್ಯ ಮಾಡಿದ ಕಾನೂನು, ಇನ್ನೊಂದು ಪ್ರಕೃತಿದತ್ತವಾದ ನಿಯಮಗಳಿದ್ದು, ಸಂವಿಧಾನದ ನಿಯಮಗಳು ಒಂದು ವ್ಯವಸ್ಥೆಯಲ್ಲಿ ಕಾನೂನು ಆಗಿದ್ದು, ಇದನ್ನು ಪ್ರತಿಯೊಬ್ಬರೂ ಪಾಲಿಸುವುದು ಅತ್ಯಗತ್ಯವಾಗಿದೆ ‘ ಎಂದರು.
ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ಎಲ್.ನಾರಾಯಣ ಸ್ವಾಮಿ ಮಾತನಾಡಿ ” ಗೊತ್ತು ಪಡಿಸುವ ಪ್ರದೇಶ, ಗಡಿ ವಿಸ್ತೀರ್ಣ, ದಾರಿ, ಮತ್ತಿತರ ಬಗ್ಗೆ ಸರ್ವೆ ಮಾಡಲಾಗುತ್ತದೆ.1863 ರಿಂದ 1879 ರವರೆಗೆ ಸರ್ವೆ ಕಾರ್ಯ ನಡೆದಿದ್ದು, 1906 ರಿಂದ 1912 ರವರೆಗೆ ಗಡಿ, ಗ್ರಾಮ ನಿಗಧಿ ಮಾಡುವ ಸರ್ವೆ ನಡೆದಿದೆ. ಸರ್ಕಾರಿ ಭೂಮಿ ನಿಗಧಿಪಡಿಸುವುದು, ಆಕಾರಬಂಧು ನಿಗಧಿ ಮಾಡುವುದು, ಬಿ ಖರಾಬು, ಗ್ರಾಮ ನಕಾಶೆ ಮತ್ತಿತರ ಮೂಲಕ ಸರ್ವೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ತಂತ್ರಾಂಶದ ಮೂಲಕ ಸರ್ವೆ ಕಾರ್ಯ ತಕ್ಷಣವೇ ಗುರುತಿಸಲಾಗುತ್ತದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಅಷ್ಟಾಗಿ ಭೂ ಕಬಳಿಕೆ ಮತ್ತು ಭೂ ಒತ್ತುವರಿ ಇರಲಿಲ್ಲ. ಸ್ವಾತಂತ್ರ್ಯ ನಂತರ ಭೂ ಒತ್ತುವರಿ ಹೆಚ್ಚಾಗಿ ನಡೆಯುತ್ತಿದೆ. ಆ ನಿಟ್ಟಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡುವುದನ್ನು ತಡೆಯಲು ಕಾನೂನು ಜಾರಿಗೊಳಿಸಲಾಯಿತು.ಶಾಲಾ-ಕಾಲೇಜು, ಆಸ್ಪತ್ರೆ, ಅಂಗನವಾಡಿ, ಸರ್ಕಾರಿ ಕಚೇರಿ ಕಟ್ಟಡಗಳು, ಪೊಲೀಸ್ ಠಾಣೆ ಹೀಗೆ ಪ್ರತಿಯೊಂದಕ್ಕೂ ಸಹ ಜಮೀನು ಬೇಕಿದ್ದು, ಇರುವ ಅಲ್ಪಸ್ವಲ್ಪ ಜಮೀನನ್ನಾದರೂ ಉಳಿಸಬೇಕಿದೆ. ಸರ್ವೆ ದಾಖಲೆಗಳು ನಿಖರವಾಗಿದ್ದು, ಇದಕ್ಕೆ ಹೆಚ್ಚಿನ ಮಾನ್ಯತೆ ಇದೆ. ಆದ್ದರಿಂದ ಸರ್ಕಾರಿ ಆಸ್ತಿಯನ್ನು ಉಳಿಸುವಲ್ಲಿ ಎಲ್ಲರೂ ಮುಂದಾಗಬೇಕು ” ಎಂದು ಕಿವಿಮಾತು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಶಾಸಕಾದ್ವಯರ ಪತ್ರಿಕಾಗೋಷ್ಠಿ : ಸಧ್ಯದಲ್ಲಿಯೇ ನಿಜಾಂಶ ಹೊರಬರಲಿದೆ
ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯ ಎಸ್.ಪಾಲಯ್ಯ, ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ, ನಗರಸಭೆ ಕಂದಾಯ ಅಧಿಕಾರಿ ಎಂ.ಎ.ತಾಹಿರ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬಿ.ಭಾಸ್ಕರ್, ಜಗನ್ನಾಥ್, ತಹಶೀಲ್ದಾರ್ ಪ್ರವೀಣ್ ಕುಮಾರ್ ಸೇರಿದಂತೆ ಇನ್ನಿತರರು ಇದ್ದರು.