ಔರಾದ ತಾಲೂಕಿನ ಸಂತಪೂರ ಗ್ರಾಮದ ಸುಭಾಷ ಚಂದ್ರ ಬೋಸ್ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ ಒಕ್ಕೂಟದಿಂದ ಫೆ.24ರಂದು ʼಗುರುವಂದನಾ ಹಾಗೂ ಹಳೆ ವಿಧ್ಯಾರ್ಥಿಗಳ ಸ್ನೇಹ ಸಮ್ಮಿಲನʼ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ನಿವೃತ್ತ ಮುಖ್ಯಗುರು ಮಲ್ಲಿಕಾರ್ಜುನ ಹಿಪ್ಪಳಗಾಂವೆ ಹೇಳಿದರು.
ಸಂತಪೂರ ಗ್ರಾಮದಲ್ಲಿ ಸುಭಾಷ್ ಚಂದ್ರ ಬೋಸ್ ಪ್ರೌಢ ಶಾಲೆಯ ‘ಹಳೆ ವಿಧ್ಯಾರ್ಥಿಗಳ ಸಮನ್ವಯ ಸಮಿತಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
“1984 ರಿಂದ ಇಲ್ಲಿಯವರೆಗೂ ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟ ಶ್ರೇಯಸ್ಸು ಕರ್ನಾಟಕ ಪಬ್ಲಿಕ್ ಶಿಕ್ಷಣ ಸಂಸ್ಥೆಗೆ ಸಲ್ಲುತ್ತದೆ. ಈ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಸುಭಾಷ್ ಚಂದ್ರ ಬೋಸ್ ಪ್ರೌಢ ಶಾಲೆಯ ಸಾವಿರಾರು ವಿದ್ಯಾರ್ಥಿಗಳು ಇಂದು ದೇಶ-ವಿದೇಶದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ” ಎಂದು ಸಂಸ್ಥೆಯ ಕಾರ್ಯದರ್ಶಿ ನಂದಾದೀಪ ಬೋರಾಳೆ ತಿಳಿಸಿದರು.
“ಕಳೆದ ನಾಲ್ಕು ದಶಕದಿಂದ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮ ವಿದ್ಯೆ ಗುರುಗಳು, ಬಾಲ್ಯದ ಗೆಳೆಯ, ಗೆಳೆತಿಯರೊಂದಿಗೆ ಮುಖಾಮುಖಿಯಾಗಿ ಬಾಲ್ಯದ ಸಂತಸದ ಕ್ಷಣಗಳನ್ನು ಮೆಲಕು ಹಾಕುವುದು ಹಾಗೂ ಸದ್ಯದ ಬದುಕಿನ ಕುರಿತು ಕುಶಲೋಪರಿಗೆ ಈ ಸಮಾವೇಶ ವೇದಿಕೆಯಾಗಲಿದೆ” ಎಂದು ನುಡಿದರು.
“ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಂತೋಷ ಪಾಟಿಲ್ ಮಾತನಾಡಿ, “ಹಳೆ ವಿದ್ಯಾರ್ಥಿಗಳ ಸಮನ್ವಯ ಸಮಿತಿಯಿಂದ ಫೆ. 24 ರಂದು ಗುರುವಂದನಾ ಹಾಗೂ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಸಮಾವೇಶವನ್ನು ಅತ್ಯಂತ ಅರ್ಥಪೂರ್ಣವಾಗಿ ನಡೆಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮ ಯಶಸ್ವಿಗೊಳಿಸಲು ಪೂರ್ವ ಸಿದ್ಧತೆ ನಡೆಯುತ್ತಿದ್ದು, ಸಮಿತಿ ಹಾಗೂ ಉಪ ಸಮಿತಿಗಳನ್ನು ರಚಿಸಲಾಗಿದೆ. ಅಂದು ಮುಂಜಾನೆ ಸಂತಪೂರ ಪೋಲಿಸ್ ಠಾಣೆಯಿಂದ ಆರಂಭವಾಗಿ ಬಸವೇಶ್ವರ ವೃತ್ತ, ಅನುಭವ ಮಂಟಪ ಮಾರ್ಗವಾಗಿ ಬೃಹತ್ ಮೆರವಣಿಗೆ ನಡೆಯಲಿದೆ. ನಂತರ ಶಾಲೆಯ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ಶಿಕ್ಷಣ ತಜ್ಣರು, ವಿವಿಧ ಗಣ್ಯರು, ಅತಿಥಿಗಳು ಭಾಗವಹಿಸಲಿದ್ದಾರೆ” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಸ್ಪೃಶ್ಯತೆ, ಮೌಢ್ಯ, ಜಾತೀಯತೆ ತೊಲಗಿಸಿ ಬಸವಣ್ಣನಿಗೆ ನಿಜ ಗೌರವ ಸಲ್ಲಿಸೋಣ
ಪತ್ರಿಕಾಗೋಷ್ಠಿಯಲ್ಲಿ ಶಾಲೆಯ ಮುಖ್ಯ ಗುರು ಮನೋಹರ್ ಬಿರಾದರ, ದೈಹಿಕ ಶಿಕ್ಷಣ ಶಿಕ್ಷಕ ಗುರುನಾಥ ದೇಶಮುಖ, ನಿವೃತ್ತ ಶಿಕ್ಷಕ ಶಿವರಾಜ ಜುಲಾಂಡೆ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ನಾಗೇಶ ಸ್ವಾಮಿ ಸೇರಿದಂತೆ ಇತರರಿದ್ದರು.