ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ತರಗತಿಗಳನ್ನು ಪ್ರಾರಂಭಿಸುವ ಸರ್ಕಾರದ ನಿಲುವನ್ನು ವಿರೋಧಿಸಿ, ಆದೇಶವನ್ನು ಹಿಂಪಡೆಯುಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಸಿಐಟಿಯು, ಎಐಟಿಯುಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, “ಮಕ್ಕಳಿಗೆ ಪೌಷ್ಟಿಕ ಆಹಾರ, ಆರೋಗ್ಯದ ಸವಲತ್ತುಗಳು ಮತ್ತು ಆರಂಭಿಕ ಶಿಕ್ಷಣ ನೀಡುವುದಕ್ಕಾಗಿಯೇ ಅಂಗನವಾಡಿ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ. ಈಗ 4 ವರ್ಷದ ಮೇಲ್ಪಟ್ಟ ಮಕ್ಕಳು ಸರ್ಕಾರಿ ಶಾಲೆಗೆ ಹೋದರೆ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಲ್ಲದೆ ಕೇಂದ್ರಗಳನ್ನು ಮುಚ್ಚಬೇಕಾಗುತ್ತದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
“ಶಿಕ್ಷಣ ಇಲಾಖೆ ಈಗ ಪ್ರಾರಂಭಿಸುವ ಎಲ್ಕೆಜಿ, ಯುಕೆಜಿಗೆ ದಾಖಲಾಗುವ ಮಕ್ಕಳು ಐಸಿಡಿಎಸ್ನಲ್ಲಿ ಈಗಾಗಲೇ ದಾಖಲಾಗಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಹೇಳಿಕೊಡುವ ಅನೌಪಚಾರಿಕ ಶಿಕ್ಷಣವನ್ನು ಮತ್ತು ಇಂಗ್ಲಿಷ್ ವರ್ಣಮಾಲೆ ಹಾಗೂ ಪದಗುಂಚಗಳನ್ನು ಮಾತ್ರವೇ ಭೋದಿಸುವುದು ಇದೆ. ಮಕ್ಕಳ ಅಪೌಷ್ಟಿಕತೆಯಡೆಗೆ ಅವರ ಗಮನವಿರುವುದಿಲ್ಲ. ಅಂಗನವಾಡಿ ಕೇಂದ್ರ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಪೌಷ್ಠಿಕತೆ ಎರಡರ ಬಗ್ಗೆಯೂ ಕಾಳಜಿ ವಹಿಸಲಾಗುತ್ತದೆ” ಎಂದು ಪ್ರತಿಭಟನಾಕಾರರು ವಿವರಿಸಿದ್ದಾರೆ.
“ಶಿಕ್ಷಣ ಇಲಾಖೆಯಲ್ಲಿ ಪಿಯುಸಿ, ಡಿಎಡ್ ಮಾಡಿರುವ ಯುವಕ-ಯುವತಿಯರನ್ನು ಅತಿಥಿ ಶಿಕ್ಷಕರು ಎಂದು ನೇಮಿಸಲು ಸೂಚಿಸಲಾಗಿದೆ. ಈಗಿನ ಯುವಕ-ಯುವತಿಯರು 30 ಮಕ್ಕಳನ್ನು ನೋಡಿಕೊಳ್ಳಲು ಪ್ರಾಯೋಗಿಕವಾಗಿ ಸಾಧ್ಯವಿದೆಯೇ? ಮಾತ್ರವಲ್ಲ, ಅವರಿಗೆ ಇಂಗ್ಲಿಷ್ ನೈಪುಣ್ಯತೆ ಇರಲು ಸಾಧ್ಯವೇ” ಎಂದು ಪ್ರಶ್ನಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು 40% ಪಿಯುಸಿ, ಬಿಎ ಮತ್ತು ಎಂಎ ಪದವಿಗಳನ್ನೊಂದಿದ್ದಾರೆ. ತಾಯಿ ಮನಸ್ಸಿನ ಅನುಭವವಿದೆ. ಅವರು ಮಕ್ಕಳೊಂದಿಗೆ ಒಡನಾಟ ಮಾಡುವುದನ್ನು ಹೊಸದಾಗಿ ಬರುವವರಿಗೂ ಬದ್ದತೆಯಲ್ಲಿ ವ್ಯತ್ಯಾಸವಿದೆಯಲ್ಲವೇ” ಎಂದಿದ್ದಾರೆ
“ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ 26 ಸಾವಿರ ಶಿಕ್ಷಕರಿಲ್ಲ, ಶಾಲಾ ಕಟ್ಟಡಗಳಿಲ್ಲದ ಪರಿಸ್ಥಿತಿಗಳಿವೆ. ಸರ್ಕಾರ ಈಗಾಗಲೇ ಆರ್ಥಿಕ ಮುಗ್ಗಟ್ಟಿನಲ್ಲಿರುವಾಗ ನಕಲು ಯೋಜನೆಗಳಿಂದ ಇರುವ ಮೂಲ ಯೋಜನೆಗೆ ಧಕ್ಕೆಯಾಗುತ್ತಿದೆ. ಇತ್ತೀಚೆಗೆ, ಕೆಕೆಆರ್ಡಿಬಿಯಲ್ಲಿ ಇರುವ ಹಣವನ್ನು ಉಪಯೋಗಿಸಬಹುದು ಎಂದು ಆದೇಶಿಸಲಾಗಿದೆ. ಆದರೆ, ಈ ಹಣ ನಿರಂತರವಾಗಿ ಇರುವ ಖಾತ್ರಿಯಿಲ್ಲ. ಹಣವಿಲ್ಲದೆ ಇದ್ದಾಗ ನಿರ್ವಹಣೆ ಹೇಗೆ ಸಾಧ್ಯ” ಎಮದು ಆಕ್ರೋಶ ವ್ಯಕ್ತಪಡಿಸಿದರು.
“ಅಂಗನವಾಡಿ ಕೇಂದ್ರಗಳಿಗೆ ಬರುವ 3 ರಿಂದ 6 ವರ್ಷದ ಮಕ್ಕಳಲ್ಲಿ 4 ರಿಂದ 6 ವರ್ಷದ ಮಕ್ಕಳು ಶಾಲೆಗಳಿಗೆ ಬಂದರೆ, ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳು ಯಾರು? ಆಗ ಅಂಗನವಾಡಿ ಕೇಂದ್ರಗಳು ಮುಚ್ಚಿ ಹೋಗುತ್ತವೆ. ಕೆಕೆಆರ್ಡಿಬಿಯಡಿ ಎಲ್ಕೆಜಿ ಪ್ರಾರಂಭಿಸುವ ಆದೇಶವನ್ನು ರದ್ದುಗೊಳಿಸಬೇಕು. 1008 ಅಂಗನವಾಡಿ ಕೇಂದ್ರಗಳನ್ನು ಗುರ್ತಿಸಿ, ಅಲ್ಲಿಯೇ ಈ ತರಗತಿಗಳನ್ನು ಪ್ರಾರಂಭಿಸಲು ಕ್ರಮಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷೆ ಹೆಚ್.ಪದ್ಮಾ. ಸುಲೋಚನಾ, ರಂಗಮ್ಮ ಅನ್ವರ್, ಲಲಿತಾ ವರಲಕ್ಷ್ಮೀ, ಸರಸ್ವತಿ, ರಮಾದೇವಿ, ಲಕ್ಷ್ಮಿ ನಗನೂರು, ಇಂದಿರಾ, ಗೋಕಾರಮ್ಮ, ಕೆ.ಜಿ.ವಿರೇಶ, ಎಐಟಿಯುಸಿ ಮುಖಂಡÀ ಡಿ.ಹೆಚ್.ಕಂಬಳಿ, ಸೂಗಯ್ಯಸ್ವಾಮಿ, ಡಿ.ಎಸ್.ಶರಣಬಸವ, ಗಿರಿಯಪ್ಪ, ಜಿಲಾನಿಪಾಷ ಸೇರಿದಂತೆ ನೂರಾರು ಮಹಿಳೆಯರು ಇದ್ದರು .
ವರದಿ : ಹಫೀಜುಲ್ಲ