ಕರ್ನಾಟಕ ಸರ್ಕಾರ 6000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ನಿರ್ಧಾರವನ್ನು ವಿರೋಧಿಸಿ ಎಐಡಿಎಸ್ಒ ವಿಜಯಪುರದ ಕೆಸಿ ಮಾರುಕಟ್ಟೆ ಬಳಿ ಸಹಿ ಸಂಗ್ರಹಿಸುವ ಅಭಿಯಾನ ಶುರು ಮಾಡಿದೆ.
ಈ ವೇಳೆ ಮಾತನಾಡಿದ ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ, “ರಾಜ್ಯದಲ್ಲಿ ಕಳೆದ ಬಿಜೆಪಿ ಸರ್ಕಾರ ಎನ್ಇಪಿ-2020ರ ಹೆಸರಲ್ಲಿ 13,800 ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಲ್ಲಿ ಮುಚ್ಚಲು ಆದೇಶಿಸಿತ್ತು. ಎಐಡಿಎಸ್ಒ ನಾಯಕತ್ವದಡಿ ರಾಜ್ಯದ ವಿದ್ಯಾರ್ಥಿಗಳೆಲ್ಲರೂ ಸೇರಿ 36 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹಿಸಿ, ಬೃಹತ್ ಆಂದೋಲನ ರೂಪಿಸಲಾಗಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಎನ್ಇಪಿ-2020 ರದ್ದುಪಡಿಸಿ, ಹಬ್ ಆಂಡ್ ಸ್ಟೋಕ್ (Hub and spoke) ಹೆಸರಿನಲ್ಲಿ ಕಡಿಮೆ ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆ ಮುಚ್ಚಲು ಮುಂದಾಗಿದೆ. ಇದರಿಂದ ಸರ್ಕಾರದ ಮೂಲ ಉದ್ದೇಶ ಶಿಕ್ಷಣದ ಖಾಸಗೀಕರಣ ಎಂಬುದು ಸ್ಪಷ್ಟವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ರಾಜ್ಯದಲ್ಲಿ 23,436 ಕಿರಿಯ ಪ್ರಾಥಮಿಕ ಶಾಲೆ, 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ 6 ಸಾವಿರ ಶಾಲೆ, 7821 ಏಕೋಪಾಧ್ಯಾಯ ಶಾಲೆ, 3500ಕ್ಕೂ ಹೆಚ್ಚು ಶಾಲೆಗಳಲ್ಲಿ ಬಳಕೆಗೆ ಯೋಗ್ಯವಾದ ಶೌಚಾಲಯ ವ್ಯವಸ್ಥೆ ಇಲ್ಲ. ಹಲವು ಶಾಲೆಗಳ ಕಟ್ಟಡಗಳು ದುರಸ್ತಿ ಇಲ್ಲದೇ ಸೋರುತ್ತಿವೆ. ರಾಜ್ಯ ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಯಾವ ಸಮಸ್ಯೆಗಳನ್ನು ಪರಿಹರಿಸದೇ, ಕಡಿಮೆ ದಾಖಲಾತಿ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುತ್ತಿರುವುದು ಬಡವರ ಮಕ್ಕಳಿಂದ ಶಾಶ್ವತವಾಗಿ ಶಿಕ್ಷಣ ಕಿತ್ತುಕೊಳ್ಳುವ ಹುನ್ನಾರವಾಗಿದೆ” ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ವಿಜಯಪುರ | ರೈಲ್ವೆ ನಿಲ್ದಾಣಕ್ಕೆ ಅಂಬೇಡ್ಕರ್ ಹೆಸರಿಡಲು ಆಗ್ರಹ
ಸರ್ಕಾರಿ ಶಾಲೆಗಳನ್ನು ಉಳಿಸಲು ಎಐಡಿಎಸ್ಒ ಸಂಘಟನೆ ರಾಜ್ಯಾದ್ಯಂತ ಹಮ್ಮಿಕೊಂಡಿರುವ 50 ಲಕ್ಷ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ ಇಂದು ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಸಹಿ ಸಂಗ್ರಹದಲ್ಲಿ ವಿಜಯಪುರ ಜನತೆ ತಮ್ಮ ಸಹಿ ನೀಡುವ ಮೂಲಕ ಈ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ಸೂಚಿಸಿದರು.
ಸಹಿ ಸಂಗ್ರಹ ಕಾರ್ಯದಲ್ಲಿ ಎಐಡಿಎಸ್ಒನ ಗೋವಿಂದ ಯಳವರ ವರದಾ ಧರ್ಮಶೆಟ್ಟಿ, ಅಜಿತ ಸೇರಿದಂತೆ ಅನೇಕರು ಇದ್ದರು.