ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಮತ್ತು ಸ್ವಾಮಿ ವಿವೇಕಾನಂದರು ಜಗತ್ತಿನ ಶ್ರೇಷ್ಠ ಚಿಂತಕರು. ಅವರು ಭಾರತೀಯ ಸಾಂಸ್ಕೃತಿಕ ಜಗತ್ತಿನ ವೈಚಾರಿಕ ದೀಪಸ್ತಂಭವಾಗಿದ್ದರು ಎಂದು ಹಿರಿಯ ಸಾಹಿತಿ ಡಾ. ಗವಿಸಿದ್ದಪ್ಪ ಪಾಟೀಲ ಅಭಿಪ್ರಾಯಪಟ್ಟರು.
ಬಸವಕಲ್ಯಾಣ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರಿನ ಸ್ವಾಮಿ ವಿವೇಕಾನಂದ ಪ್ರಸಾರ ಕೇಂದ್ರದಿಂದ ಹಮ್ಮಿಕೊಂಡಿದ್ದ ಕಾಲೇಜಿನಿಂದ ಕಾಲೇಜಿಗೆ ವಿವೇಕಾನಂದರು ಹಾಗೂ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, “ಸ್ವಾಮಿ ವಿವೇಕಾನಂದರ ಹಾಗೂ ಅವರ ತತ್ವಗಳು ಯುವ ಸಮುದಾಯಕ್ಕೆ ಮಾದರಿಯಾಗಿವೆ” ಎಂದರು.
“ಸ್ವಾಮಿ ವಿವೇಕಾನಂದರ ಚಿಂತನೆ ಯುವ ಸಮುದಾಯಕ್ಕೆ ಮುನ್ನಡೆಸುತ್ತವೆ. ಹಾಗೆಯೇ ಸಾವಿತ್ರಿಬಾಯಿ ಫುಲೆ ಅವರ ತತ್ವಗಳು ಎಲ್ಲ ಭಾರತೀಯರನ್ನು ಅಕ್ಷರ ಲೋಕಕ್ಕೆ ಕೊಂಡೊಯ್ಯುವ ದಾರಿದೀಪವಾಗಿವೆ. ಅವರ ಪ್ರಭಾವದಿಂದ ಭಾರತದ ಸಮಾಜಕ್ಕೆ ಪ್ರಗತಿಪರ ಮಾರ್ಗದೊರೆತಿದೆ. ವಿವೇಕಾನಂದರ ಚಿಕಾಗೊ ಭಾಷಣ ಸರ್ವಧರ್ಮದ ಸಾರವನ್ನು ಮನುಷ್ಯನ ಒಳಿತು ಸೂಚಿಸಿದ್ದು ತಿಳಿಸುತ್ತದೆ” ಎಂದರು.
ಶ್ರೀ ಬಸವೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, “ಸ್ವಾಮಿ ವಿವೇಕಾನಂದರು ಭಾರತೀಯ ಸಾಂಸ್ಕೃತಿಕ ರಾಯಭಾರಿಯಾಗಿ ಭಾರತೀಯತೆಯನ್ನು ಇಡೀ ಜಗತ್ತಿಗೆ ಅರುಹಿದ್ದಾರೆ. ಸುಧಾರಣಾವಾದಿ ನೆಲೆಯಲ್ಲಿರುವ ಅವರ ಚಿಂತನೆ ಯುವ ಸಮುದಾಯದ ಶಕ್ತಿ, ಸಾಮರ್ಥ್ಯ, ಪ್ರತಿಭೆಗಳು ಸದುಪಯೋಗವಾಗಲು ಹಂಬಲಿಸಿದ್ದವು. ಮೌಢ್ಯ, ಅಜ್ಞಾನ, ಬಡತನ, ಜಾತಿಯತೆಯನ್ನು ವಿವೇಕಾನಂದರು ಕಟುವಾಗಿ ವಿರೋಧಿಸಿದ್ದರು” ಎಂದರು.
“ವಿವೇಕಾನಂದರು ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಆರ್ಥಿಕತೆ ಗಟ್ಟಿಗೊಳಿಸುವ ಉತ್ತಮ ಉದ್ಯೋಗಕ್ಕೆ , ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು. ಮಹಿಳಾ ಶಿಕ್ಷಣವನ್ನು ಹೆಚ್ಚು ಪ್ರೋತ್ಸಾಹ ನೀಡಿದ್ದರು. ತತ್ವಜ್ಞಾನ, ದರ್ಶನ ಮತ್ತು ಭಾರತೀಯ ಸಂಸ್ಕೃತಿ ಲೋಕಕ್ಕೆ ಪರಿಚಯಿಸಿದ ಶ್ರೇಷ್ಠ ಚೇತನ. ಭಾರತದ ಅಕ್ಷರ ಜಗತ್ತು ಹೊಳೆಯುವಂತೆ ಮಾಡಿದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆಯವರು ಹೊಸ ಶಿಕ್ಷಣ ಕ್ರಾಂತಿಗೈದ ಧೀಮಂತ ಚೇತನ. ಅವರ ನೋಟ ಮತ್ತು ನಿಲುವುಗಳಿಂದ ಸಾರ್ವತ್ರಿಕ ಶಿಕ್ಷಣ ಪದ್ಧತಿ ಸಂವಿಧಾನದಲ್ಲಿ ಅನುಷ್ಠಾನಕ್ಕೆ ಬರಲು ಸಾಧ್ಯವಾಯಿತು” ಎಂದು ಹೇಳಿದರು.
ಸಮಾರಂಭ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ ಬಲರಾಮ ಹುಡೆ ಮಾತನಾಡಿ, “ಸ್ವಾಮಿ ವಿವೇಕಾನಂದರು ಮತ್ತು ಸಾವಿತ್ರಿಬಾಯಿ ಫುಲೆ ಅವರು ಪ್ರಾತಃಸ್ಮರಣೀಯರು. ಅವರ ತತ್ವಾದರ್ಶಗಳನ್ನು ಎಲ್ಲರೂ ಅನುಸರಿಸುವ ಅಗತ್ಯವಿದೆ. ಅವರು ತೋರಿದ ಮಾರ್ಗದಲ್ಲಿ ನಡೆದರೆ ಬದುಕು ಹಸನಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜೈಲುಗಳಲ್ಲಿ ಜಾತಿಭೂತ- ಸುಪ್ರೀಮ್ ಕೋರ್ಟ್ ಕಳವಳ
ಕಾರ್ಯಕ್ರಮದಲ್ಲಿ ಡಾ. ಸಂಜುಕುಮಾರ ನಡುಕರ, ಡಾ. ವೀರಶೆಟ್ಟಿ ಚಿಟಗುಪ್ಪ, ದೀಪಕ ಗೌಡ, ಬಸವರಾಜ ಬಿರಾದಾರ, ಕಲಾವತಿ ಪಾಲಾಪೂರೆ, ಶರಣಬಸಪ್ಪ ಜನ್ನಾ, ಮಂಗಲಬಾಯಿ ಹಲವರಿದ್ದರು. ಡಾ. ಚಂದ್ರಕಾಂತ ಗಾಯಕವಾಡ ಸ್ವಾಗತಿಸಿದರು. ಪ್ರೊ. ಮೀನಾಕ್ಷಿ ಬಿರಾದಾರ ನಿರೂಪಿಸಿದರು. ಡಾ. ಪುಷ್ಪಾಬಾಯಿ ಕೋರೆ ವಂದಿಸಿದರು