“ಗದಗ ನೆಲದ ಕವಿಗಳು ಅದ್ಭುತ ಸಾಹಿತ್ಯವನ್ನು ಈ ಜಗತ್ತಿಗೆ ಕೊಟ್ಟಿದ್ದಾರೆ’ ಎನ್ನುವುದು 10ನೇ ಸಾಹಿತ್ಯ ಸಮ್ಮೇಳನದ ಗರಿಮೆಯಾಗಿದೆ. ಇಬ್ಬರು ಕವಿಗಳು ಜನಕಲ್ಯಾಣ ಎನ್ನುವ ಒಂದೇ ಉದ್ದೇಶವನ್ನು ಹೊಂದಿದ್ದರು” ಎಂದು ಉಪನ್ಯಾಸಕ ಎಫ್. ಏನ್ ಹುಡೇದ್ ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಮೊದಲ ದಿನದ ಗದಗ ಜಿಲ್ಲಾ 10ನೇ ಸಾಹಿತ್ಯ ಸಮ್ಮೇಳನದ ‘ಹಳೇ ಹೊನ್ನು’ ಎಂಬ ಮೊದಲನೇ ಗೋಷ್ಠಿಯಲ್ಲಿ ಕುಮಾರವ್ಯಾಸ- ಚಾಮರಸರ ಕುರಿತು ಉಪನ್ಯಾಸ ನೀಡಿದರು.
“ಇಬ್ಬರು ಕವಿಗಳು ಜನಕಲ್ಯಾಣ ಎನ್ನುವ ಒಂದೇ ಉದ್ದೇಶವನ್ನು ಹೊಂದಿದ್ದರು. ಕುಮಾರವ್ಯಾಸ ಭಾರತ ಬರೆಯಬೇಕಾದರೆ ‘ವೀರನಾರಾಯಣನೇ ಕವಿ; ನಾನು ಲಿಪಿಕಾರ’ ಎಂದು ತನ್ನ ಕೃತಿ ‘ಗದುಗಿನ ಕುಮಾರವ್ಯಾಸ ಭಾರತ’daಹೇಳಿದ್ದಾನೆ. ಕವಿ ಚಾಮರಸ ‘ಆಸೆಗೆ ಸತ್ತದ್ದು ಕೋಟಿ, ಆಮಿಷಕ್ಕೆ ಸತ್ತದ್ದು ಕೋಟಿ; ನಿಮಗಾಗಿ ಸತ್ತವರು ಒಬ್ಬರನ್ನು ಕಾಣೇ ಗುಹೇಶ್ವರ’ ಎಂದು ಹೇಳಿದ್ದಾರೆ. ಆದ್ದರಿಂದ ಹೇಳುವ ವಿಧಾನ ವಿಭಿನ್ನವಾದರೂ ಉದ್ದೇಶ ಒಂದೇ ಆಗಿದೆ. ಕುಮಾರವ್ಯಾಸ ಭಾರತದಲ್ಲಿ ಧರ್ಮಾಧರ್ಮಗಳ ಸಂಘರ್ಷವನ್ನೇ ಕಾಣುತ್ತೇವೆ. ಕುಮಾರವ್ಯಾಸರು ಕೃಷ್ಣನನ್ನು ಮುಂದಿಟ್ಟುಕೊಂಡು ಧರ್ಮ ಕಾರಣಕ್ಕಾಗಿ ಲೋಕಕಲ್ಯಾಣವನ್ನು ಬಯಸುತ್ತಾರೆ’ ಎಂದರು.
ನಯಸೇನ-ದುರ್ಗಸಿಂಹರ ಕುರಿತು ಉಪನ್ಯಾಸ ನೀಡಿದ ಪ್ರಾಚಾರ್ಯ ಎಂ.ಸಿ.ಕಟ್ಟಿಮನಿ, “ರೋಣದ ದುರ್ಗಸಿಂಹ, ಮುಧೋಳದ ರನ್ನ, ಅಣ್ಣಿಗೇರಿಯ ಪಂಪ, ಲಕ್ಕುಂಡಿಯ ಅತ್ತಿಮಬ್ಬೆ, ಕುಮಾರವ್ಯಾಸ, ನಾರಾಯಣಪುರದ ಚಾಮರಸ, ಮುಳಗುಂದದ ನಯಸೇನ, ಹೀಗೆ 10ನೇ ಶತಮಾನದಿಂದ ಈಗಿನವರೆಗೂ ಕಾಣಬಹುದು” ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಗಜೇಂದ್ರಗಡದ ಎಫ್.ಎಸ್.ಕರಿದುರನವರ, ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ಸುಧಾ ಹುಚ್ಚಣ್ಣವರ, ಕೋಟುಮಚಗಿಯ ವಿದ್ಯಾಧರ ದೊಡ್ಡಮನಿ, ಆರ್.ಕೆ.ಬಾಗವಾನ, ರಮಾಕಾಂತ ಕಮತಗಿ, ವಿ.ವಿ.ಅಣ್ಣಿಗೇರಿ ಇದ್ದರು.