ಕೊಪ್ಪಳದ ಬಲ್ಡೋಟಾ ಹಾಗೂ ಬಿಎಸ್ಪಿಎಲ್ ಕಾರ್ಖಾನೆ ವಿಸ್ತರಣೆ ವಿರುದ್ಧ ಗೋಡೆ ಬರಹ ಅಭಿಯಾನ ಹೋರಾಟ ತೀವ್ರಗೊಂಡಂತೆ, ಕೊಪ್ಪಳ ಬಚಾವೋ ಆಂದೋಲನದ ಗೋಡೆ ಬರಹಕ್ಕೆ ಪೋಲೀಸ್ರು ಆಕ್ಷಪಣೆ ವ್ಯಕ್ತಪಡಿಸಿದ್ದಾರೆ. ಇದು ಪೊಲೀಸರ ವ್ಯಾಪ್ತಿಗೆ ಬರುವುದಿಲ್ಲ ಎಂದು ಜಿಲ್ಲಾ ಬಚಾವೋ ಆಂದೋಲನದ ಸಂಚಾಲಕ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಕೂಡ ಮರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದ ನಗರಸಭೆಗೆ ವ್ಯಾಪ್ತಿಯ ಗೋಡೆಗಳ ಮೇಲೆ ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಗರ ಹಾಗೂ ಬಾಧಿತ ಗ್ರಾಮಗಳಲ್ಲಿ ಗೋಡೆ ಬರಹ ಅಭಿಯಾನ ಆರಂಭಿಸಿದ್ದು, ಈ ಅಭಿಯಾನ ವಿರೋಧಿಸಿ ಸ್ಥಳೀಯ ಸಂಘಟನೆಯ ವ್ಯಕ್ತಿಯೋರ್ವರ ದೂರನ್ನು ಆಧರಿಸಿದ ಪೊಲೀಸರ ಹಸ್ತಕ್ಷೇಪಕ್ಕೆ ಪರಿಸರ ಹಿತರಕ್ಷಣಾ ವೇದಿಕೆ ಹಾಗೂ ಜಿಲ್ಲಾ ಬಚಾವೋ ಆಂದೋಲನ ಆಕ್ಷೇಪಣೆ ವ್ಯಕ್ತಪಡಿಸಿತು.
ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ಗೋಡೆಯ ಬರಹಕ್ಕೆ ಆಕ್ಷೇಪಣೆ ವ್ಯಕ್ತಪಡಿಸುವುದು ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದಲ್ಲ, ಇದು ನಗರಸಭೆಗೆ ಬರುವುವಂತದ್ದು. ಯಾರೋ ಒಬ್ಬ ವ್ಯಕ್ತಿಯ ಮಾತಿಗೆ ಇಲಾಖೆ ತಮ್ಮ ವ್ಯಾಪ್ತಿಯನ್ನು ಮೀರಿ ಅಧಿಕಾರ ಚಲಾಯಿಸುತ್ತಿದೆ. ಪುರಸಭೆಯವರು ಪಿರ್ಯಾದಿ ಕೊಟ್ಟಿದ್ದರೆ ಅವರು ನಮಗೆ ಸೂಚನೆ ಪತ್ರ ಕೊಡಬೇಕು. ಪೊಲೀಸ್ ತಮ್ಮ ಕರ್ತವ್ಯ ವ್ಯಾಪ್ತಿಯನ್ನು ಮೀರಿ ಚಳವಳಿಗಾರರಿಗೆ ಪರೋಕ್ಷವಾಗಿ ಬೆದರಿಕೆ ಹಾಕುವುದರ ಮೂಲಕ ಕುಗ್ಗಿಸುವ ಕೆಲಸ ಮಾಡುತ್ತಿದ್ದರೆ” ಎಂದು ಆರೋಪಿಸಿದರು.
ಶರಣು ಗಡ್ಡಿ ಮಾತನಾಡಿ, “ಪೊಲೀಸರು ನಗರದ ಪರಿಸರದ ಪರವಾಗಿದ್ದಾರೋ ಅಥವಾ ಕಾರ್ಖಾನೆಯ ಪರವಾಗಿ ಕೆಲಸ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ. ತಮ್ಮ ಕರ್ತವ್ಯ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸದೆ ನಗರಸಭೆ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕಾಣದ ಕೈಗಳ ಕುತಂತ್ರಕ್ಕೆ ಮಣಿದು ಚಳವಳಿಗಾರರಿಗೆ ಬೆದರಕೆ ಹಾಕುತ್ತಿರುವಂತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೊಪ್ಪಳ | ಕತ್ತು ಹಿಸುಕಿ ಪತ್ನಿಯನ್ನು ಕೊಂದ ಪತಿ
ಬಸವರಾಜ್ ಶೀಲವಂತರ ಮಾತನಾಡಿ, “ನಗರದ ಪರಿಸರ ಮಾಲಿನ್ಯದ ಕುರಿತು ಜನಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಪರಿಸರಕ್ಕೆ ಮಾರಕವಾಗುವಂತೆ ಗೋಡೆ ಬರಹ ಬರೆಯುತ್ತಿಲ್ಲ. ಗೋಡೆಯ ಮೇಲೆ ಯಾವುದೇ ಫ್ಲೆಕ್ಸ್ ಹಾಗೂ ಹಾಳೆ ಬರಹ ಅಂಟಿಸಲು ನಿಷೇಧವಿದೆ; ಇದು ಪರಿಸರಕ್ಕೆ ಮಾರಕ ಎಂದು ಸರ್ವೋಚ್ಚ ನ್ಯಾಯಾಲಯದ ಆದೇಶಿಸಿದೆ. ಆದರೂ ಸಾರ್ವಜನಿಕ ಗೋಡಗಳ ಮೇಲೆ ಕೆಲವರು ಅಂಟಿಸಿದ್ದಾರೆ. ಅಂತವರ ವಿರುದ್ಧ ಪೊಲೀಸರು ಇಂದಿಗೂ ಯಾವ ಕ್ರಮ ಜರುಗಿಸಿಲ್ಲ” ಎಂದು ಇಲಾಖೆಯನ್ನು ಪ್ರಶ್ನಿಸಿದರು.
ಈ ವೇಳೆ ಜಗನ್ನಾಥ, ಮುದಕಪ್ಪ ಹೊಸಮನಿ, ಕೆ ಬಿ ಗೋನಾಳ, ಡಿ ಎಮ್ ಬಡಿಗೇರ, ಗಾಳೆಪ್ಪ, ಟಿ ರತ್ನಾಕರ, ಎಸ್ ಎ ಗಫಾರ್, ಮಂಜುನಾಥ ಕೊತಬಾಳ, ಮಂಜುನಾಥ ಗೊಂಡಬಾಳ ಹಾಗೂ ಇತರರು ಇದ್ದರು.