ದೀಪಾವಳಿ ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವದ ಹಿನ್ನೆಲೆ ರಜೆಗಳಿರುವ ಕಾರಣಕ್ಕೆ ರಾಯಚೂರು ನಗರದಿಂದ ಬೆಂಗಳೂರು, ಮಂಗಳೂರು, ಪುಣೆಗಳಂತಹ ಮಹಾನಗರಗಳಿಂದ ಊರುಗಳಿಗೆ ಬಂದಿದ್ದ ಪ್ರಯಾಣಿಕರಿಂದ ಖಾಸಗಿ ಬಸ್ಗಳ ಮಾಲೀಕರು, ಮೂರು ನಾಲ್ಕು ಪಟ್ಟು ಹೆಚ್ಚು ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪ್ರಯಾಣಿಕರು ದುಬಾರಿ ಹಣ ನೀಡಿ ಮಹಾನಗರಗಳಿಗೆ ತೆರಳಲು ಹರಸಾಹಸ ಪಡುತ್ತಿದ್ದಾರೆ.
ರಜೆ, ಹಬ್ಬ ಹರಿದಿನ ಇದ್ದಾಗ ಸಾವಿರಾರು ಸಂಖ್ಯೆಯಲ್ಲಿ ಜನರು ಊರಿಗೆ ಬಂದು ಹೋಗಲು ಮುಂದಾದರೆ ಖಾಸಗಿ ಬಸ್ ನವರು ಮೂರು ಪಟ್ಟು ಹೆಚ್ಚು ಹಣವನ್ನು ಹೆಚ್ಚಳ ಮಾಡುತ್ತಿರುವುದರಿಂದ ಹಲವು ಮಂದಿ ಬೇಸರ ಹೊರಹಾಕಿದ್ದಾರೆ.
ಊರಿಗೆ ಬಂದು ಹಬ್ಬ ಆಚರಣೆ ಮಾಡಿ, ಮತ್ತೆ ತಮ್ಮ ಕರ್ತವ್ಯ, ಕೆಲಸಗಳಿಗೆ ದೂರದ ಊರಿಗೆ ತೆರಳುವವರು ಖಾಸಗಿ ಬಸ್ ಮಾಲೀಕರ ಈ ನಡೆಯನ್ನು ಖಂಡಿಸಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದರ ಬಗ್ಗೆ ರಮೇಶ್ ವೀರಾಪುರ ಸಿಪಿಐಎಂ ಮುಖಂಡ ಮಾತನಾಡಿ, “ದಿನದಿಂದ ದಿನಕ್ಕೆ ಹಳ್ಳಿಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಗುಳೇ ಹೋಗುತ್ತಿದ್ದಾರೆ. ಸಾರಿಗೆ ಬಸ್ ಗಳು ಜನ ದಟ್ಟಣೆಯಿಂದ, ಕೆಲವೊಮ್ಮೆ ಸಿಗದ ಕಾರಣಕ್ಕೆ ಖಾಸಗಿ ಬಸ್ಗಳ ಮೊರೆ ಹೋಗುತ್ತಾರೆ. ಆದರೆ ಖಾಸಗಿ ಬಸ್ಗಳ ದರ ಮೂರು ಪಟ್ಟು ಹೆಚ್ಚಾಗಿರುತ್ತದೆ” ಎಂದು ತಿಳಿಸಿದರು.
ಖಾಸಗಿ ಬಸ್ ಗಳು ದರ ಏರಿಸಿದರೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದೆ. ಆದರೂ ಆನ್ ಲೈನ್ ನಲ್ಲಿ ಬುಕ್ ಮಾಡಲು ಹೋದರೆ ನಾಲ್ಕೈದು ಪಟ್ಟು ದರ ಏರಿಸಲಾಗಿದೆ. ಇದು ಸಾರಿಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ? ಪ್ರಯಾಣಿಕರ ಅನಿವಾರ್ಯತೆಯನ್ನೇ ಬಂಡವಾಳವನ್ನಾಗಿಸಿಕೊಂಡು ದರ ಏರಿಸುತ್ತಿದ್ದರೂ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಆರ್ ಟಿ ಓ ಹಾಗೂ ಸಾರಿಗೆ ಇಲಾಖೆಯೂ ಇದರಲ್ಲಿ ಶಾಮೀಲು ಇರಬಹುದು ಅಂದು ಅನುಮಾನ ಹುಟ್ಟಿಸುತ್ತಿದೆ. ಕೂಡಲೇ ಸಾರಿಗೆ ಇಲಾಖೆ ಮಾತ್ತು ಆರ್ ಟಿ ಓ ಅಧಿಕಾರಿಗಳು ಹೆಚ್ಚವರಿ ಹಣ ಪಡೆಯುತ್ತಿರುವ ಖಾಸಗಿ ಬಸ್ಗಳ ಪರವಾನಗಿ ಮತ್ತು ನೋಂದಣಿ ಪತ್ರ ಅಮಾನತು ಮಾಡಬೇಕು. ಟಿಕೆಟ್ ವಿತರಕರ ಮತ್ತು ಆ್ಯಪ್ ಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಸಂಡೂರು | ಸರ್ಕಾರದ ‘ದಿಶಾಂಕ್ ಆ್ಯಪ್’ನಲ್ಲಿ ಇಡೀ ಗ್ರಾಮವೇ ನಾಪತ್ತೆ: ಆತಂಕದಲ್ಲಿ ಗ್ರಾಮಸ್ಥರು!
ಸರ್ಕಾರಿ ಬಸ್ ಸೇವೆ ಸಮರ್ಪಕವಾಗಿದ್ದರೆ ಜನರು ಖಾಸಗಿ ಬಸ್ಗಳ ಮೇಲೆ ಅವಲಂಬಿಸುವುದು ಕಡಿಮೆ ಆಗುತ್ತದೆ. ಹಬ್ಬದ ಸಂದರ್ಭಗಳಲ್ಲಿ ರಾಜ್ಯ ಸಾರಿಗೆ ಇಲಾಖೆ ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ಬಸ್ ಬಿಡುವ ವ್ಯವಸ್ಥೆ ಮಾಡಬೇಕು. ಖಾಸಗಿ ಬಸ್ ಮಾಲೀಕರ ಲಾಬಿಗೆ ಸಂಬಂಧಿಸಿದ ಇಲಾಖೆಗಳು ಒಳಗಾಗಬಾರದು. ಖಾಸಗಿ ವಾಹನಗಳ ದರ್ಬಾರ್ಗೆ ಅಧಿಕಾರಿಗಳು ಕೂಡಲೇ ಬ್ರೇಕ್ ಹಾಕದಿದ್ದರೆ ಸಿಪಿಐ(ಎಂ) ಪಕ್ಷದಿಂದ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ರಮೇಶ್ ವೀರಾಪುರ ಎಚ್ಚರಿಸಿದ್ದಾರೆ.
