ಕನ್ನಡ ಪುರಾತನ ಭಾಷೆಯಾಗಿದ್ದು, ದ್ರಾವಿಡ ಭಾಷೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಕ್ರಿ.ಶ.450 ರಲ್ಲಿ ದೊರೆತ ಹಲ್ಮಿಡಿ ಶಾಸನ ಕನ್ನಡದ ಪ್ರಥಮ ಶಾಸನವಾಗಿದ್ದು, ಇದರಿಂದ ಕನ್ನಡ ನಾಡಿನ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿಸಿದೆ ಎಂದು ನಿವೃತ್ತ ಪ್ರಾಚಾರ್ಯಡಾ.ಎಸ್.ಎಸ್.ಮೈನಾಳೆ ಹೇಳಿದರು.
ಕಮಲನಗರ ಪಟ್ಟಣದ ಲತಾ ಮಂಗೇಶ್ಕರ್ ಕನ್ಯಾ ಪ್ರೌಢ ಶಾಲೆಯಲ್ಲಿ ಕರ್ನಾಟಕ 50ರ ಸಂಭ್ರಮ
ಘೋಷವಾಕ್ಯದೊಂದಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ʼಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡʼ ಕಾರ್ಯಕ್ರಮದಲ್ಲಿ ವಿಶೇಷ ಅವರು ಉಪನ್ಯಾಸ ನೀಡಿದರು.
“ಕನ್ನಡವೆಂದರೆ ನಮ್ಮ ಅಸ್ಮಿತೆ ಮತ್ತು ಸ್ವಾಭಿಮಾನ.ಕನ್ನಡ ನಾಡು ಶ್ರೀಗಂಧದ ಬೀಡು. ಅಚ್ಚ ಹಸಿರಿನ ಸುಂದರ ಬೆಟ್ಟ, ಸಾಧು ಸಂತರು, ದಾಸರು, ಶಿವಶರಣರು, ಕವಿಗಳು ಇರುವ ನಾಡು ನಮ್ಮದು. ಕನ್ನಡ ಭಾಷೆ, ನೆಲ, ಜಲ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕ್ಷರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ದೇಶದಲ್ಲಿ ಅತ್ಯಂತ ಶ್ರೀಮಂತ ಸಾಹಿತ್ಯ ಹೊಂದಿರುವ ಮತ್ತು ಶಾಸ್ತ್ರೀಯ ಭಾಷೆಯಾಗಿರುವ ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಸಂದಿರುವುದು ನಮ್ಮ ಭಾಷೆಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ” ಎಂದರು.
ಕಸಾಪ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ಮಾತನಾಡಿ, “ಮೈಸೂರು ರಾಜ್ಯವು 1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣವಾಗಿ ಇಂದಿಗೆ 50 ವರ್ಷ ಪೂರ್ಣಗೊಂಡಿದ್ದು, ಅದನ್ನು ಸ್ಮರಣೀಯವಾಗಿಸಲು ಕರ್ನಾಟಕ 50ರ ಸಂಭ್ರಮದಡಿ ಒಂದು ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ,
ಸಂಸ್ಕೃತಿ ಹಾಗೂ ನಾಡು-ನುಡಿಗೆ ಸಂಬಂಧಿಸಿದಂತೆ ಶಾಲಾ ಕಾಲೇಜಿನ ಮಕ್ಕಳಿಗೆ ಅರಿವು ಮೂಡಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ರೂಪಿಸಿದೆ” ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಗುರು ರಾಜಕುಮಾರ ವಡಗಾವೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ತಾಲೂಕು ಉಪಾಧ್ಯಕ್ಷ ಧನರಾಜ ಭವರಾ, ಸಾಹಿತಿ ಸಂಗಮೇಶ್ವರ ಮುರ್ಕೆ, ಸಂಘಟನಾ ಕಾರ್ಯದರ್ಶಿ ವಿಶಾಲ ಮಹಾಜನ, ಸಂತೋಷ ಸುಲಾಕೆ, ರಮಾಕಾಂತ ಕಣಜೆ, ಅನಿಲ ಬಿರಾದಾರ, ದಿಲೀಪ ಸಂತಪುರೆ, ಸರಸ್ವತಿ ಮಹಾಜನ ಇತರರಿದ್ದರು.
ಈ ಸುದ್ದಿ ಓದಿದ್ದೀರಾ? ನಿಗಮ ಮಂಡಳಿ ನೇಮಕಾತಿಯಲ್ಲಿ ಯಾರ ಅಭಿಪ್ರಾಯವನ್ನೂ ಪಡೆದಿಲ್ಲ: ಸಿದ್ದರಾಮಯ್ಯ
ಲಕ್ಷ್ಮೀ ಸ್ವಾಮಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಕಾವ್ಯಾಂಜಲಿ ಬನವಾಸೆ ಪ್ರಾರ್ಥನೆ ಗೀತೆ ಹಾಡಿದರು. ಕಸಾಪ ತಾಲೂಕು ಯುವ ಘಟಕದ ಅಧ್ಯಕ್ಷ ಬಂಟಿ ರಾಂಪುರೆ ಸ್ವಾಗತಿಸಿದರು. ಕೋಶಾಧ್ಯಕ್ಷ ಯಶವಂತ ಬಿರಾದಾರ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಮಹಾದೇವ ಮಡಿವಾಳ ನಿರೂಪಿಸಿದರು.