ಸಮಸ್ತ ಗಲ್ಫ್ ಬ್ರದರ್ಸ್ ಸಂಸ್ಥೆಯ ವತಿಯಿಂದ ಪ್ರತಿಯೊಂದು ಮನೆಯಲ್ಲೂ ವೃತ್ತಿಪರರು ಎಂಬ ಧ್ಯೇಯದಡಿ ಅಕ್ಟೋಬರ್ 1ರಂದು ‘ಫ್ಯೂಚರ್ ಫಸ್ಟ್ 2025’ ಕಾರ್ಯಕ್ರಮವು ಪುತ್ತೂರು ತಾಲೂಕಿನ ಕಟ್ಟತ್ತಾರ್ನಲ್ಲಿ ಜರುಗಲಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶೈಕ್ಷಣಿಕ ತರಬೇತುದಾರರಾದ ರಫೀಕ್ ಮಾಸ್ಟರ್ ಹಾಗೂ ಶಿಕ್ಷಕರಾದ ಅಬ್ದುಲ್ ರಝಾಕ್ ಮಾಸ್ಟರ್ ಅನಂತಾಡಿ ಭಾಗವಹಿಸಲಿದ್ದಾರೆ.
ಕಳೆದ ಆರು ವರ್ಷಗಳಿಂದ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡು ಹಲವಾರು ಜನರ ಜೀವನಕ್ಕೆ ಬೆಳಕಾಗಿ ಸೇವೆ ಸಲ್ಲಿಸುತ್ತಿರುವ ಸಮಸ್ತ ಗಲ್ಫ್ ಬ್ರದರ್ಸ್ ಸಂಸ್ಥೆಯು, ಹೊಸ ಶೈಕ್ಷಣಿಕ ಯಾತ್ರೆಯ ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ‘ಫ್ಯೂಚರ್ ಫಸ್ಟ್ 2025’ ಕಾರ್ಯಕ್ರಮವು ಒಂದು ದೀರ್ಘಕಾಲಿಕ ಯೋಜನೆಯಾಗಿದ್ದು, ಪ್ರತಿಯೊಂದು ಮನೆಯಲ್ಲೂ ವೃತ್ತಿಪರರನ್ನು ರೂಪಿಸುವ ಮಹತ್ವಾಕಾಂಕ್ಷೆಯನ್ನು ಸಮಸ್ತ ಗಲ್ಫ್ ಬ್ರದರ್ಸ್ ಸಂಸ್ಥೆಯು ಹೊಂದಿದೆ.
ಇಂದಿನ ಪರಿಸ್ಥಿತಿಯಲ್ಲಿ ಹಲವರು 8ನೇ, 9ನೇ, 10ನೇ ತರಗತಿಯಲ್ಲಿ ಶಿಕ್ಷಣವನ್ನು ನಿಲ್ಲಿಸುತ್ತಿದ್ದಾರೆ. ಮುಂದುವರಿದ ವಿದ್ಯಾರ್ಥಿಗಳಲ್ಲಿ 75% ಜನರಿಗೆ ತಮ್ಮ ಮುಂದಿನ ಶಿಕ್ಷಣದ ದಿಕ್ಕು ಸ್ಪಷ್ಟವಿಲ್ಲ. ಶಿಕ್ಷಣ ಪಡೆದವರಲ್ಲಿ ಬಹುಪಾಲು ಜನರು ತಮ್ಮ ಗುರಿಯನ್ನು ತಲುಪಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಅಂಕಿ-ಅಂಶಗಳು ನಮ್ಮ ಸಮಾಜದಲ್ಲಿ ಮಾರ್ಗದರ್ಶನದ ಕೊರತೆಯ ತೀವ್ರತೆಯನ್ನು ತೋರಿಸುತ್ತವೆ. ಇದನ್ನು ಹೋಗಲಾಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
