ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಹಾಗೂ ದೇಶದಲ್ಲಿ ಮೊದಲ ಭಾರಿಗೆ ಭೂ ಸುಧಾರಣೆ ಕಾಯ್ದೆ ಜಾರಿ ಮೂಲಕ ಉಳುವವನೆ ಭೂ ಒಡೆಯ ಕಾನೂನು ಜಾರಿಗೆ ತಂದವರು ಮಾಜಿ ಮುಖ್ಯಮಂತ್ರಿ ಡಿ ದೇವರಾಜು ಅರಸು ಅವರು ಎಂದು ಶಾಸಕ ಶಿವರಾಜ ಪಾಟೀಲ್ ಹೇಳಿದರು.
ನಗರದ ಕನ್ನಡ ಭವನದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ನಗರಸಭೆ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ 108ನೇ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಡಿ ದೇವರಾಜು ಅರಸು ಅವರು ಪಾಳೇಗಾರಿಕೆ ಇದ್ದ ಸಂದರ್ಭದಲ್ಲಿ ಬಡಜನರ, ದೀನ ದಲಿತ ಶ್ರೇಯೋಭಿವೃದ್ದಿಗಾಗಿ ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿ ಭೂಮಿಯಲ್ಲಿ ʼಉಳುವವನೆ ಒಡೆಯʼ ಎನ್ನುವ ಕಾಯ್ದೆ ಜಾರಿಯಿಂದ ಜಿಲ್ಲೆಯಲ್ಲಿ ಸಾಕಷ್ಟು ಜನರು ಅರಸು ಅವರ ನಿರ್ಣಯಕ್ಕೆ ಸ್ವಾಗತಿಸಿ ಭೂಮಿಯನ್ನು ಬಿಟ್ಟು ಕೊಟ್ಟರು. ಮಲ ಹೊರುವ ಪದ್ದತಿ ನಿರ್ಮೂಲನೆ ಮಾಡಿ ಪೌರ ಕಾರ್ಮಿಕರೆಂದು ಕರೆಯಲು ಹೇಳಿದರು” ಎಂದರು.
“ವಸತಿ ಯೋಜನೆಯನ್ನು ಜಾರಿಗೆ ತಂದು ಸಾಕಷ್ಟು ಬಡ ಜನರಿಗೆ ಅನುಕೂಲ ಮಾಡಿಕೊಟ್ಟರು, ಇದೀಗ ಸಾಕಷ್ಟು ಜನರು ನಾನು ವಸತಿಯನ್ನು ತಂದಿದ್ದೇನೆಂದು ಹೇಳುತ್ತಿದ್ದಾರೆ. ವಸತಿ ಯೋಜನೆ ಅರಸು ಅವರ ಯೋಜನೆಯಾಗಿದೆ” ಎಂದು ತಿಳಿಸಿದರು.
“ಯಾವುದೇ ಜಾತಿ ಧರ್ಮಕ್ಕೆ ಮನ್ನಣೆ ನೀಡದೇ ಹಿಂದುಳಿದ ವರ್ಗಗಳ ಜೊತೆಗೆ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಮುಂದಾದರು. ನಗರದಲ್ಲಿ ಹಿಂದುಳಿದ ವರ್ಗಗಳ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ 25 ಲಕ್ಷ ರೂ. ನೀಡುವುದಾಗಿ ಹೇಳಿ ಇತರೆ ಶಾಸಕರಿಂದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಬೇಕು” ಎಂದರು.
“ನಗರದಲ್ಲಿ ಪ್ರಮುಖ ಸರ್ಕಲ್ಗೆ ಡಿ ದೇವರಾಜ ಅರಸು ಹೆಸರು ನಾಮಕರಣ ಮಾಡಲು ಅಪರ ಜಿಲ್ಲಾಧಿಕಾರಿಗೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗೆ ಸೂಚಿಸಿ ಯಾವುದಾದರು ಪ್ರಮುಖ ರಸ್ತೆ ಸೂಚಿಸಲು ಹೇಳಿದ ಅವರು, ಡಿ ದೇವರಾಜು ಅರಸು ಅವರ ಪುತ್ಥಳಿ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ನೀಡಬೇಕು” ಎಂದು ಮನವಿ ಮಾಡಿದರು.
ಉಪನ್ಯಾಸ ನಿಡಿದ ಡಿ ಕೆ ವೆಂಕಟೇಶ ಅವರು, “ಡಿ ದೇವರಾಜ ಅರಸು ಅವರು ರಾಜ್ಯದ ಚರಿತ್ರೆ ಸೃಷ್ಟಿಗೆ ಮೊದಲಿಗರಾಗಿದ್ದರು. ರಾಜಕಾರಣ ಮಾಡದೇ ರಾಜ್ಯದ ಅಭಿವೃದ್ಧಿ ಮತ್ತು ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಪಣತೊಟ್ಟು ಕೆಲಸ ಮಾಡಿದರು” ಎಂದರು.
“8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಜನ ಮಾನಸದಲ್ಲಿ ಉಳಿಯುವಂತಹ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದರು. ಭೂ ಸುಧಾರಣೆ ಕಾನೂನು ಜಾರಿಗೆ ತಂದು 70.80 ಲಕ್ಷ ರೈತರಿಗೆ ಉಳುವವನೆ ಭೂ ಒಡೆಯ ಪಟ್ಟವನ್ನು ಒದಗಿಸಿಕೊಟ್ಟರು. ಹಾವನೂರು ಆಯೋಗ ಜಾರಿ ಮೂಲಕ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲಾತಿ ಜಾರಿಗೆ ತಂದರು. ಬಿಸಿಎಂ ಹಾಸ್ಟೆಲ್ಗಳ ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ರಾಜ್ಯದ ʼಮೈಸೂರುʼ ಹೆಸರನ್ನು ಕರ್ನಾಟಕ ಎಂದು ಬದಲಿಸಿ ಇತಿಹಾಸ ನಿರ್ಮಿಸಿದರು” ಎಂದರು.
ಈ ಸುದ್ದಿ ಓದಿದ್ದೀರಾ? ದೇವರಾಜ ಅರಸು ನನ್ನ ಹೃದಯವನ್ನು ಗಾಢವಾಗಿ ತಟ್ಟಿದ ನಾಯಕ – ಪ್ರೊ. ಜೇಮ್ಸ್ ಮ್ಯಾನರ್, ಲಂಡನ್
“ಅರಸು ಅವರು ಅನೇಕ ಜನಪರ ಯೋಜನೆಗಳು ನೆನಪಿಸಿ ಮೆಲುಕು ಹಾಕಬೇಕು. ಅವರ ಆದರ್ಶಗಳನ್ನು ಸಾಕಷ್ಟು ಮುಖ್ಯಮಂತ್ರಿಗಳು ಅಳವಡಿಸಿಕೊಂಡು ರಾಜ್ಯದ ಅಭಿವೃದ್ಧಿ ಪಡಿಸಿದ್ದಾರೆ” ಎಂದು ಹೇಳಿದರು.
ಈ ವೇಳೆ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ದುರುಗೇಶ, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಕೆ ಶಾಂತಪ್ಪ, ಮಹಿಳಾ ಅಧ್ಯಕ್ಷೆ ಸುರೇಖಾ, ಶ್ರೀಕಾಂತರಾವ್ ವಕೀಲ, ವಿ ಲಕ್ಷ್ಮಿರೆಡ್ಡಿ, ಕಡಗೋಲ್ ಆಂಜನೇಯ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಡಾ.ವಾಲ್ಮಿಕಿ ಸೇರಿದಂತೆ ಹಲವು ಸಮುದಾಯಗಳ ಮುಖಂಡರು, ವಿದ್ಯಾರ್ಥಿಗಳು ಇದ್ದರು.