ಪ್ರಸ್ತುತ ದಿನಗಳಲ್ಲಿ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ತಳಮಟ್ಟದಲ್ಲಿ ಗಟ್ಟಿಯಾಗಿ ಮುನ್ನಡೆಸಬೇಕಾದ ಅಗತ್ಯವಿದೆ. ಯುವಕರಲ್ಲಿ ಜಾಗೃತಿ ಮೂಡಿಸಿ ಮನೆ ಮನೆಗಳಲ್ಲಿ ಕಾರ್ಯಕ್ರಮ ರೂಪಿಸಬೇಕಿದೆ ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪೂರು ಹೇಳಿದರು.
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಟ್ಟಿ ಪಟ್ಟಣದ ಸಿಐಟಿಯು ಕಚೇರಿಯಲ್ಲಿ ಡಾ . ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯ ಭಾಗವಾಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಬುಡದಿಂದ ಕಿತ್ತೆಸೆಯಬೇಕು. ಅಂದಾಗ ಮಾತ್ರ ಸಂವಿಧಾನವನ್ನು ಉಳಿಸುವುದಕ್ಕೆ ಸಾಧ್ಯ. ಬಿಜೆಪಿ ಸೋಲಿಸಿ ಸಂವಿಧಾನ ಮತ್ತು ಅಂಬೇಡ್ಕರ್ ಅವರ ತತ್ವಗಳನ್ನು ರಕ್ಷಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ಪಕ್ಷದ ವಿರುದ್ಧವಾಗಿ ನಾವು ಬಹಿರಂಗ ಸಭೆಯನ್ನು, ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರಿಗೆ ಬಿಜೆಪಿ ಮಾಡಿದ ದೇಶದ್ರೋಹ ಮತ್ತು ಜನದ್ರೋಹಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಚುನಾವಣಾ ಬಾಂಡ್ ಹಗರಣ ಜಗತ್ತಿನಲ್ಲೇ ಅತ್ಯಂತ ದೊಡ್ಡ ಹಗರಣವಾಗಿದ್ದು, ಇದರ ಸಂಪೂರ್ಣ ತನಿಖೆಯಾಗಿ ಸಂಪೂರ್ಣ ಬಿಜೆಪಿ ನಾಯಕರು ಜೈಲು ಸೇರುವಂತಾಗಬೇಕು. ಇದಕ್ಕಾಗಿ ನಾವು ಲೋಕಸಭೆ ಚುನಾವಣೆಯಲ್ಲಿ ಅವಿರತವಾಗಿ ಶ್ರಮಿಸಬೇಕು. ಈ ಮೂಲಕ ಇಂಡಿಯಾ ಕೂಟ ಗೆಲ್ಲಿಸಬೇಕು ಎಂದರು.
ಈ ವೇಳೆ ಸಿಐಟಿಯು ಮುಖಂಡರಾದ ಲಿಂಗಪ್ಪ ಎಂ, ಅಲ್ಲಾಭಕ್ಷ ದೇವಪೂರು, ವೆಂಕಟೇಶ್ ಗೋರಕಲ್, ರಿಯಾಜ್, ದಾವೂದ್, ಖಾಜಾಸಾಬ್, ಸಮೀರ್ , ಮೈಬುಬ್ ಲಾಲ್ಗಡಿ, ಇಸ್ಮಾಯಿಲ್, ರಮೇಶ ಹಟ್ಟಿ ಅನೇಕರು ಮುಖಂಡರು ಉಪಸ್ಥಿತರಿದ್ದರು.
