ನಿವೇಶನ ಹಂಚಿಕೆಯಾಗಿ ವರ್ಷಗಳೇ ಗತಿಸಿದರೂ ಮಂಜೂರಾದ ಭೂಮಿಯನ್ನು ಅಭಿವೃದ್ಧಿ ಮಾಡಿ ಹಂಚಿಕೆ ಮಾಡುವುದಕ್ಕೆ ಮೀನಾಮೇಷ ಎಣಿಸಲಾಗುತ್ತಿದೆ ಎಂದು ಆರೋಪಿಸಿ ರಾಯಚೂರು ನಗರ ಶಾಸಕ ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ಸಮಿತಿಯು ಜಿಲ್ಲಾಧಿಕಾರಿ ನಿತೀಶ್ ಕೆ ಅವರಿಗೆ ಮನವಿ ಸಲ್ಲಿಸಿತು.
“ಬಾಡಿಗೆದಾರರು, ಬೀದಿಬದಿ ವಾಸಿಸುವವರು, ಅಲೆಮಾರಿ ಜನಾಂಗದವರು ಹಾಗೂ ನಿವೇಶನ ರಹಿತರಿಗೆ ವಾಜಪೇಯಿ ನಗರ ನಿವೇಶನ ಯೋಜನೆಯಡಿಯಲ್ಲಿ 2016-17 ರಲ್ಲಿ ಸರ್ವೆ ನಂ: 581, 726/727 ಮತ್ತು 929/2 ರಲ್ಲಿ ನಿವೇಶನಕ್ಕಾಗಿ ಭೂಮಿ ಮಂಜೂರಾಗಿ ಹಕ್ಕು ಪತ್ರಗಳನ್ನು ಹಂಚಿಕೆ ಮಾಡಲಾಗಿತ್ತು. ಸುಮಾರು 9 ವರ್ಷಗಳು ಕಳೆದರೂ ಇದುವರೆಗೆ ಜಿಲ್ಲಾಡಳಿತ ಮತ್ತು ಮಹನಗರ ಪಾಲಿಕೆ ಮಂಜೂರಾದ ಭೂಮಿ ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಮಾಡದೇ ನಿರ್ಲಕ್ಷ್ಯವಹಿಸಿವೆ” ಎಂದು ಆರೋಪಿಸಿದರು.
“ಈ ಹಿಂದೆ ಸ್ಲಂ ನಿವಾಸಿಗಳು ತಿಂಗಳವರೆಗೆ ಪ್ರತಿಭಟನೆ ನಡೆಸಿದ್ದರು. ಧರಣಿ ಸ್ಥಳಕ್ಕೆ ಅಂದಿನ ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ ಅವರು ಆಗಮಿಸಿ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆಯನ್ನು ಕರೆದು ಬಗೆಹರಿಸಲಾಗುವುದೆಂದು ಭರವಸೆ ನೀಡಿದ್ದರು. ಅಂದಿನಿಂದ ಇಂದಿನವರೆಗೂ ಆಶ್ವಾಸನೆ ಮಾತ್ರವೇ ಉಳಿದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ವಾಜಪೇಯಿ ನಿವೇಶನ ಯೋಜನೆಯಡಿಯಲ್ಲಿ ಹಕ್ಕು ಪಡೆದ ನಿವೇಶನ ರಹಿತರಿಗೆ ಹಕ್ಕುಪತ್ರಗಳನ್ನು ಶೀಘ್ರದಲ್ಲಿ ಒದಗಿಸಬೇಕು. ಕೆಲವು ಫಲಾನುಭವಿಗಳಿಗೆ ಇದುವರೆಗೂ ಹಕ್ಕುಪತ್ರ ಕೂಡ ನೀಡಿರುವುದಿಲ್ಲ. ಅವರಿಗೆ ಶೀಘ್ರದಲ್ಲೇ ಹಕ್ಕುಪತ್ರ ನೀಡಬೇಕು. ಜಿಲ್ಲಾಡಳಿತದಿಂದ ಸರ್ವೆ ನಂ:1403 ರಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಗೆ 6 ಎಕರೆ ಭೂಮಿ ಮಂಜೂರಾಗಿ 10 ವರ್ಷಗಳು ಗತಿಸಿದರೂ ಇದುವರೆಗೂ ಭೂಮಿ ಅಭಿವೃದ್ಧಿಪಡಿಸದೇ ಮತ್ತು ಚೆಕ್ ಬಂದಿ ಹಾಕದೆ ನಿರ್ಲಕ್ಷ್ಯವಹಿಸಲಾಗಿದೆ. ಕಾರಣ ಶೀಘ್ರದಲ್ಲಿ ಭೂಮಿ ಅಭಿವೃದ್ಧಿಪಡಿಸದೇ ಬಡವರಿಗಾಗಿ ನಿರ್ಗತಿಕರಿಗೆ ಮನೆಗಳ ಕ್ರಿಯಾ ಯೋಜನೆ ರೂಪಿಸಿ (DPR) ಅನುದಾನ ಮಂಜೂರು ಮಾಡಬೇಕು” ಎಂದು ಒತ್ತಾಯಸಿದರು.
“ನಗರದ ಸ್ಲಂ ಜನರು ಶೌಚಾಲಯಗಳ ವ್ಯವಸ್ಥೆ ಇಲ್ಲದೆ ಬಹಿರ್ದೆಸೆಗೆ ಹೋಗುತ್ತಿದ್ದಾರೆ. ಕಾರಣ ರಾಯಚೂರು ಮಹಾನಗರ ಪಾಲಿಕೆಗೆ ಮಂಜೂರಾದ ಅನುದಾನದಲ್ಲಿ 35 ವಾರ್ಡ್ಗಳ ವ್ಯಾಪ್ತಿಯಲ್ಲಿ ಬರುವ ಸ್ಲಂಗಳಲ್ಲಿ ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಬೇಕು ಮತ್ತು ಬೇಸಿಗೆಯಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲು ಪ್ರತಿ ಸ್ಲಂನಲ್ಲಿ ಬೋರ್ವೆಲ್ಗಳನ್ನು ಹಾಕಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಕ್ರೀಡೆಗಳಿಂದ ಮಾನಸಿಕ ನೆಮ್ಮದಿ ಸಿಗಲಿದೆ: ಡಿಸಿ ನಿತೀಶ್
ಈ ವೇಳೆ ನೂರ್ಜಾನ್, ಬಸವರಾಜ್, ರಾಜಶೇಖರ್, ಅನಿಲ್ ಕುಮಾರ್, ಮಾಧವರೆಡ್ಡಿ, ಮಹೇಶ, ಪವನ್,ಜೆ ರಾಜು, ಜನಾರ್ಧನ್ ಹಳ್ಳಿ ಬೆಂಚಿ ಇನ್ನಿತರರು ಇದ್ದರು.
