ರಾಯಚೂರು ತಾಲೂಕಿನ ವಿವಿಧೆಡೆ ಹಠಾತ್ ದಾಳಿ ನಡೆಸಿ 20 ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
ತಾಲೂಕಿನ ಸಗಮಕುಂಟ, ಶಾಖವಾದಿ, ಇಬ್ರಾಹಿಂ ದೊಡ್ಡಿ, ವಡ್ಡೆಪಲ್ಲಿ, ಯಾಪಲದಿನ್ನಿ, ಆತ್ಕೂರು, ಹೆಗ್ಗಸನಹಳ್ಳಿ ಹಾಗೂ ಮಾಮಡ ದೊಡ್ಡಿ ವ್ಯಾಪ್ತಿಯಲ್ಲಿ ದಾಳಿ ನಡೆಸಿದ ವೇಳೆ 20 ಮಕ್ಕಳು ಪತ್ತೆಯಾಗಿದ್ದಾರೆ. ಇವರನ್ನು ಶಾಲೆ ಬಿಡಿಸಿ ಕೃಷಿ ಕೆಲಸಕ್ಕಾಗಿ ಸರಕು ಸಾಗಣೆ ವಾಹನಗಳಲ್ಲಿ ಕರೆದೊಯ್ಯಲಾಗುತ್ತಿತ್ತು. ಈ ಬಾಲ ಕಾರ್ಮಿಕರನ್ನು ಕರೆದೊಯ್ಯಲು ಬಳಿಸಿದ 6 ಸರಕು ಸಾಗಣೆ ವಾಹನಗಳನ್ನೂ ಜಪ್ತಿ ಮಾಡಿ ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮಂಜುನಾಥ ರೆಡ್ಡಿ ಮಾತನಾಡಿ, “ಮಕ್ಕಳನ್ನು ಶಾಲೆ ಬಿಡಿಸಿ ಕೃಷಿ ಮತ್ತು ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗಿಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಯಾವುದೇ ಕಾರಣಕ್ಕೂ ಮಕ್ಕಳನ್ನು ಕೆಲಸದಲ್ಲಿ ತೊಡಗಿಸಬಾರದು ಹಾಗೂ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು” ಎಂದರು.
ಈ ವೇಳೆ ವಾಹನ ಚಾಲಕರು, ಮಾಲೀಕರು ಹಾಗೂ ಪೋಷಕರಿಗೆ ಸ್ಟಿಕ್ಕರ್ ಮತ್ತು ಕರಪತ್ರಗಳನ್ನು ನೀಡಿ ತಿಳಿವಳಿಕೆ ಮೂಡಿಸಲಾಯಿತು.
ಇದನ್ನೂ ಓದಿ: ರಾಯಚೂರು | ದೇವದಾಸಿ ಮಹಿಳೆಯರ ಪಿಂಚಣಿ ಹೆಚ್ಚಳಕ್ಕೆ ಆಗ್ರಹ
ಈ ವೇಳೆ ರಾಯಚೂರು 1ನೇ ವೃತ್ತದ ಕಾರ್ಮಿಕ ನಿರೀಕ್ಷಕ ಮಹ್ಮದ್ ಉಮರ್ ಅಬ್ದುಲ್ ಘನಿ, ಬಿ.ಇ.ಓ ಕಾರ್ಯಾಲಯದ ಇ.ಸಿ.ಓ ಮಂಜುನಾಥ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ದಿನೇಶ್ ರಮೇಶ್ ಯಾದವ್, ಮಕ್ಕಳ ಸಹಾಯವಾಣಿ ಘಟಕದ ಸಿಬ್ಬಂದಿ ತಾಯ್ರಾಜ್ ಸೇರಿದಂತೆ ಇತರರು ಇದ್ದರು.
