ಬ್ಯಾಂಕ್ ಮ್ಯಾನೇಜರ್ ಒಬ್ಬ ಗ್ರಾಹಕರಿಗೆ ತಿಳಿಯದಂತೆ ನಕಲಿ ದಾಖಲೆ ಸೃಷ್ಟಿಸಿ ಗೋಲ್ಡ್ ಲೋನ್ ಮಂಜೂರು ಮಾಡಿ ಸುಮಾರು 10 ಕೋಟಿ ವಂಚಿಸಿರುವ ಪ್ರಕರಣ ರಾಯಚೂರಿನಲ್ಲಿ ಬಯಲಾಗಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರದ ಬ್ರ್ಯಾಂಚ್ ಮ್ಯಾನೇಜರ್ ಕೆ.ನರೇಂದ್ರರೆಡ್ಡಿ ಎಂಬಾತ ನಕಲಿ ದಾಖಲೆ ಸೃಷ್ಟಿಸಿ 105 ಖಾತೆಗಳನ್ನು ಸೃಷ್ಟಿಸಿ 10 ಕೋಟಿ 97 ಲಕ್ಷ ವಂಚಿಸಿರುವ ಬ್ಯಾಂಕ್ ಆಡಿಟ್ ವೇಳೆ ಬೆಳಕಿಗೆ ಬಂದಿದೆ.
ನಕಲಿ ಗೋಲ್ಡ್ ಲೋನ್ ಖಾತೆಗಳಿಂದ 8 ಸಂಬಂಧಿಕರ ಅಕೌಂಟ್ಗೆ ಹಣ ವರ್ಗಾವಣೆ ಮಾಡಿದ್ದಾನೆ. ಹಿಂದಿನ ಬ್ಯಾಂಕ್ ಸಹೋದ್ಯೋಗಿ ಹೆಸರಿಗೆ 88 ಲಕ್ಷ ವರ್ಗಾವಣೆ ಮಾಡಿದ್ದ. ವಂಚನೆ ಬಯಲಾಗುತ್ತಿದ್ದಂತೆ ಬ್ಯಾಂಕ್ ನಿಂದ ಮ್ಯಾನೇಜರ್ ಕೆ.ನರೇಂದ್ರ ರೆಡ್ಡಿ ಪರಾರಿಯಾಗಿದ್ದಾನೆ.
ಬ್ಯಾಂಕ್ ಆಫ್ ಮಹಾರಾಷ್ಟ್ರದ ರೀಜಿನಲ್ ಮ್ಯಾನೇಜರ್ ಸುಚೇತ್ ನೀಡಿರುವ ದೂರಿನ ಮೇರೆಗೆ ಸೈಬರ್ ಠಾಣೆಯಲ್ಲಿ ಕೆ.ನರೇಂದ್ರ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ರಾಯಚೂರು | ಟ್ರಾಕ್ಟರ್ ಟ್ರಕಿಗೆ ಬೈಕ್ ಡಿಕ್ಕಿ; ಸವಾರ ಸಾವು