ಸಾರಿಗೆ ಬಸ್-ಟ್ರಾಕ್ಟರ್ ಮುಖಾಮುಖಿ ಉಂಟಾಗಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದು, 18 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಬನ್ನಿಗೋಳದ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಶ್ರೀದೇವಿ(19) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ 18 ಮಂದಿ ಗಾಯಾಳುಗಳನ್ನು ಲಿಂಗಸೂಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬನ್ನಿಗೋಳ ಗ್ರಾಮದ ಕೂಲಿಕಾರ್ಮಿಕರು ಕೆಲಸಕ್ಕಾಗಿ ಟ್ರ್ಯಾಕ್ಟರ್ನಲ್ಲಿ ತೆರಳುತ್ತಿದ್ದರು. ಅಂಕಲಿಮಠದಿಂದ ಮುದಗಲ್ ಪಟ್ಟಣದ ಕಡೆಗೆ ಬಸ್ ಬರುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಘಟನೆ ಜರುಗಿದೆ ಎಂದು ತಿಳಿದುಬಂದಿದೆ. ಮೃತಪಟ್ಟಿರುವ ಮಹಿಳೆಗೆ ಇತ್ತೀಚಿಗೆ ಮದುವೆಯಾಗಿತ್ತು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಕಾವಾಡಿಗರಹಟ್ಟಿಗೆ ಉಪಲೋಕಾಯುಕ್ತ ನ್ಯಾ. ಫಣೀಂದ್ರ ಭೇಟಿ
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನು ಬಾಗಲಕೋಟೆಯ ಆಸ್ಪತ್ರೆಗೆ ಸಾಗಿಸಲಾಗಿದೆ. ಸಾರಿಗೆ ಬಸ್ ಚಾಲಕನಿಗೂ ಗಾಯಗೊಂಡಿದ್ದು, ಪ್ರಯಾಣಿಕರಿಗೆ ಕೆಲವೊಂದು ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಮುದಗಲ್ ಠಾಣೆ ಪಿಎಸ್ಐ ವೆಂಕಟೇಶ ಮಡಿಕೇರಿ, ಪಿಎಸ್ಐ ಛತ್ರಪ್ಪ ರಾಥೋಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಬನ್ನಿಗೋಳ ಗ್ರಾಮಸ್ಥರು ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಿದರು. ಘಟನೆಯಿಂದ ಕೆಲಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
