ಗ್ರಾಮ ಪಂಚಾಯತಿ ನೌಕರರು, ಕಾರ್ಖಾನೆಗಳ ಕಾರ್ಮಿಕರು ಹಾಗೂ ಔಷಧ ಪ್ರತಿನಿಧಿಗಳ ಬೇಡಿಕೆಗಳ ಈಡೇರಿಜೆಗೆ ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ (ಸಿಐಟಿಯು) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ರಾಯಚೂರಿನ ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, “ಐಸಿಡಿಎಸ್ ಯೋಜನೆಯಡಿ ದೇಶದಲ್ಲಿ ಸುಮಾರು 11 ಕೋಟಿ ಮಕ್ಕಳು ಮತ್ತು 2 ಕೋಟಿ ಗರ್ಭಿಣಿ, ಬಾಣಂತಿಯರು ಫಲಾನುಭವಿಗಳಾಗಿದ್ದಾರೆ. ಯೋಜನೆಯಿಂದ ಅಪೌಷ್ಠಿಕತೆ, ತಾಯಿ ಮಕ್ಕಳ ಮರಣ ತಡೆಯಲು ಸಾಧ್ಯವಾಗಿದೆ. ಆದರೆ, ಅನುದಾನ ಕಡಿತದಿಂದಾಗಿ ಯೋಜನೆಯ ಫಲಾನುಭವಿಗಳಿಗೆ ಆಹಾರ, ಶಿಕ್ಷಣಕ್ಕೆ ತುಂಬಾ ತೊಂದರೆಯಾಗಲಿದೆ. ಇದರಿಂದ ಅಪೌಷ್ಠಿಕತೆಯ ಮಟ್ಟ ಹೆಚ್ಚಾಗಲಿದೆ” ಎಂದು ಹೇಳಿದ್ದಾರೆ.
“ಈಗಾಗಲೇ ಭಾರತ ಹಸಿವಿನ ಸೂಚ್ಯಾಂಕದಲ್ಲಿ 112ನೇ ಸ್ಥಾನದಲ್ಲಿದೆ. 68% ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ದೇಶದಲ್ಲಿ ಪ್ರತೀ ಮೂರು ಮಕ್ಕಳಲ್ಲಿ ಒಂದು ಮಗು ಕಡಿಮೆ ತೂಕ ಹೊಂದಿರುವುದಾಗಿ ಎನ್ಎಫ್ಎಚ್ಎಸ್-5ರ ಅಂಕಿ ಅಂಶಗಳೇ ಹೇಳುತ್ತಿವೆ. ಅಲ್ಲದೆ, ದೇಶದಲ್ಲಿ ಐಸಿಡಿಎಸ್ ಯೋಜನೆಯ 2,000 ಪ್ರಾಜೆಕ್ಟ್ಗಳಲ್ಲಿ ಸುಮಾರು 13.5 ಲಕ್ಷ ಅಂಗನವಾಡಿ ಕೇಂದ್ರಗಳಲ್ಲಿ 26 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸುಮಾರು 49 ವರ್ಷಗಳಿಂದ ದುಡಿಯುತ್ತಿದ್ದಾರೆ. ಅವರಿಗೆ ಕನಿಷ್ಠ ವೇತನ, ಪಿಎಫ್, ಇಎಸ್ಐ, ಪಿಂಚಣಿ ಮುಂತಾದ ಸೌಲಭ್ಯಗಳು ದೊರೆಯುತ್ತಿಲ್ಲ” ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಪೋಷಣ್ ಅಭಿಯಾನ, ಪೋಷಣ್ ಟ್ಯಾಕರ್, ಮಾತೃವಂದನ ಸರ್ವೆಗಳು ಸೇರಿದಂತೆ ನಾನಾ ಕೆಲಸಗಳನ್ನು ಅಂಗನವಾಡಿ ಆರ್ಯಕರ್ತೆರು ಮಾಡುತ್ತಿದ್ದಾರೆ. ಆದರೆ, ಅವರಿಗೆ ಕನಿಷ್ಠ ಸೌಲಭ್ಯಗಳನ್ನು ನೀಡದಿರುವುದು ವಿಷಾದನೀಯ. 45 ಮತ್ತು 46ನೇ ಕಾರ್ಮಿಕ ಸಮ್ಮೇಳನದಲ್ಲಿ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರನ್ನು ಕೆಲಸಗಾರರೆಂದು ಪರಿಗಣಿಸಿ ಅವರಿಗೆ ಕನಿಷ್ಠ ವೇತನ, ಇಎಸ್ಐ, ಪಿಎಫ್ ಸೌಲಭ್ಯ ನೀಡಿ, ಕೆಲಸವನ್ನು ಕಾಯಂಗೊಳಿಸಬೇಕೆಂದು ಶಿಫಾರಸು ಮಾಡಲಾಗಿದೆ. ಇದೇ ರೀತಿಯ ಶಿಫಾರಸನ್ನು ರಾಜ್ಯ ಸಭೆಯ ಸಂಸದೀಯ ಸಮಿತಿಯೊಂದು ಇತ್ತೀಚಿಗೆ ಮಾಡಿದೆ. ಈ ಕುರಿತಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ರೂಪು ರೇಷೆಗಳನ್ನು ರಚಿಸಬೇಕು” ಎಂದು ಹೇಳಿದ್ದಾರೆ.
ಪ್ರತಿಭಟನಾಕಾರರ ಹಕ್ಕೊತ್ತಾಯಗಳು
1. ದೇಶದ ಎಲ್ಲಾ ಅಂಗನವಾಡಿ ಕಾರ್ಯಕರ್ತೆ, ಸಹಾಯಕರಿಗೆ ಕನಿಷ್ಠವೇತನ 31,000 ಜಾರಿಗೊಳಿಸಬೇಕು
2. ಸಾಮಾಜಿಕ ಭದ್ರತೆಗಳಾದ EȘI, PF, ಪೆನ್ಮನ್, NPS ಬದಲಿಗೆ OP ಜಾರಿಗೊಳಿಸಬೇಕು.
3. ICDSನ್ನು ಇಲಾಖೆಯಾಗಿ ಪರಿಗಣಿಸಿ ನೌಕರರನ್ನು ಕಾಯಂಗೊಳಿಸಬೇಕು.
4. ICDSಗೆ ಕಡಿತಮಾಡಿರುವ 8200 ಕೂಡಲೇ ಬಿಡುಗಡೆಗೊಳಿಸಬೇಕು
5. ಆಹಾರ, ಆರೋಗ್ಯ, ಶಿಕ್ಷಣವನ್ನು ದೇಶದ ಎಲ್ಲಾ ಜನರಿಗೆ ಖಾತ್ರಿಗೊಳಿಸಿ ದೇಶವನ್ನು ಅಭಿವೃದ್ಧಿಪಡಿಸಬೇಕು
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷೆ ಹೆಚ್.ಪದ್ಮಾ, ಪ್ರಧಾನ ಕಾರ್ಯದರ್ಶಿ ಡಿ.ಎಸ್ ಶರಣಬಸವ, ಶಬ್ಬೀರ್ ಜಾಲಹಳ್ಳಿ, ಗಿರಿಯಪ್ಪ ಪೂಜಾರಿ, ಶರ್ಫುದ್ದೀನ್ ಪೋತ್ನಾಳ, ಮೊಹಮ್ಮದ್ ಹನೀಫ್, ಅನ್ವರ ಪಾಷಾ, ಎಂ.ಶರಣಗೌಡ, ಚನ್ನಾರೆಡ್ಡಿ, ಪ್ರವೀಣರೆಡ್ಡಿ, ಮಲ್ಲಿಕಾರ್ಜುನ ಮನ್ಸಲಾಪೂರ, ಜಂಬಣ್ಣ, ಸುರೇಶ ದೇವಸೂಗೂರು, ಮೊಹಮ್ಮದ್, ಷಣ್ಮುಖಪ್ಪ, ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವರದಿ : ಹಫೀಜುಲ್ಲ