ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸಾರಿಗೆ ದರ ಏರಿಕೆ ಮಾಡಿರುವುದು ಖಂಡನೀಯ. ಕೂಡಲೇ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಸಿಪಿಐಎಂ ಕಾರ್ಯಕರ್ತರು ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಗ್ರೇಡ್ ಟು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
“ಡೀಸೆಲ್ ದರ ಹೆಚ್ಚಳ ಮತ್ತು ಸಿಬ್ಬಂದಿ ವೆಚ್ಚದ ಹೆಚ್ಚಳದ ನೆಪದಲ್ಲಿ ದರ ಏರಿಕೆ ಮಾಡಿರುವುದು ಆವೈಜ್ಞಾನಿಕವಾಗಿದ್ದು, ದರ ಹೆಚ್ಚಳ ಜನಸಾಮಾನ್ಯ ವಿರೋಧಿಯಾಗಿದೆ” ಎಂದು ಪ್ರತಿಭಟನಾಕಾರರು ದೂರಿದರು.
“ಸಾರಿಗೆ ನಿಗಮಗಳಿಗೆ ಪೂರೈಸುವ ಡೀಸೆಲ್ ದರವು ಮುಕ್ತ ಮಾರುಕಟ್ಟೆ ದರಗಳಿಗಿಂತ ದುಬಾರಿಯಾಗಿದೆ. ಸರ್ಕಾರಕ್ಕೆ ವೆಚ್ಚವನ್ನು ಕಡಿಮೆ ಮಾಡಬೇಕೆಂದಿದ್ದರೆ ಸಾರಿಗೆ ನಿಗಮಗಳಿಗೆ ಪೂರೈಸುವ ಡೀಸೆಲ್ ದರವನ್ನು ಸಬ್ಸಿಡಿ ದರದಲ್ಲಿ ಪೂರೈಸಬೇಕು. ಮುಕ್ತ ಮಾರುಕಟ್ಟೆ ದರಗಳಲ್ಲಾದರೂ ಪೂರೈಸಬೇಕು. ಆದ್ದರಿಂದ ಶೇ.15ರ ದರ ಹೆಚ್ಚಳಕ್ಕೆ ಡೀಸೆಲ್ ದರ ಹೆಚ್ಚಳ ಕಾರಣ ಎನ್ನುವುದು ಕುಂಟುನೆಪವಾಗಿದೆ” ಎಂದು ಆಪಾದಿಸಿದರು.
“ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ವೆಚ್ಚ ಹೆಚ್ಚಳವಾಗಿದೆ ಎನ್ನಲಾಗಿದೆ. ನಾಲ್ಕು ನಿಗಮಗಳ ಸಿಬ್ಬಂದಿಗಳಿಗೆ ಸುಮಾರು 3 ವರ್ಷಗಳ ಬಾಕಿ ವೇತನ ನೀಡಬೇಕಿದೆ ಮತ್ತು ಹೊಸ ವೇತನ ಒಪ್ಪಂದ ಮಾಡಬೇಕಿದೆ ಎಂದು ಆಗ್ರಹಿಸಿದರು.
“1950ರ ಆರ್ಟಿಸಿ ಕಾಯ್ದೆ ಪ್ರಕಾರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸರ್ಕಾರ ಬಜೆಟ್ ಬೆಂಬಲ ನೀಡುವುದು ಅಗತ್ಯವಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಲಾಭ ನಷ್ಟದ ಲೆಕ್ಕದಲ್ಲಿ ಸರ್ಕಾರ ನೋಡಬಾರದು. ನಷ್ಟವನ್ನು ಸರ್ಕಾರವೇ ಭರಿಸಬೇಕಾಗಿದೆ. ಖಾಸಗಿ ಕಂಪನಿಗಳ ಜತೆಗೆ ದುಬಾರಿ ಒಪ್ಪಂದಗಳನ್ನು ಮಾಡಿಕೊಂಡು ನಿಗಮಗಳೇ ನಷ್ಟವುಂಟು ಮಾಡಿಕೊಳ್ಳುತ್ತಿವೆ. ನಿಗಮದ ಬಸ್ಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡುವ ಮೂಲಕ ನಷ್ಟ ಕಡಿಮೆ ಮಾಡಬಹುದು. ಈ ವಿಧಾನಗಳನ್ನು ಕೈಬಿಟ್ಟು ದರ ಹೆಚ್ಚಿಸಿ ಸರ್ಕಾರ ಜನವಿರೋಧಿ ಕ್ರಮಕ್ಕೆ ಮುಂದಾಗಿದೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪರಿಶಿಷ್ಟ ಜಾತಿಯವರ ಮೇಲೆ ಸುಳ್ಳು ಪ್ರಕರಣ ದಾಖಲು; ಪಿಎಸ್ಐ ಅಮಾನತಿಗೆ ಆಗ್ರಹ
“ನಿತ್ಯವೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಇದೀಗ ಸಾರಿಗೆ ದರ ಹೆಚ್ಚಳವಾಗಿದ್ದು, ಕೂಲಿಕಾರ್ಮಿಕರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವುದು ದುಬಾರಿಯಾಗಿದೆ. ಈ ಹಿನ್ನೆಲೆಯಲ್ಲಿ ದರ ಹೆಚ್ಚಳದ ತೀರ್ಮಾನವನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ ಜಿ ವಿರೇಶ, ತಾಲೂಕ ಕಾರ್ಯದರ್ಶಿ ಹೆಚ್ ಪದ್ಮಾ, ಡಿ ಎಸ್ ಶರಣಬಸವ, ಕರಿಯಪ್ಪ ಅಚ್ಚೋಳ್ಳಿ, ವರಲಕ್ಷ್ಮೀ, ಗೋಕರಮ್ಮ, ಶ್ರೀನಿವಾಸ, ಕೆ ಶ್ರೀನಿವಾಸ ಸೇರಿದಂತೆ ಬಹುತೇಕರು ಇದ್ದರು.
