ಸಂಗೀತ, ಚಿತ್ರಕಲಾ, ರಂಗಕಲಾ ಶಿಕ್ಷಕರ ನೇಮಕಾತಿಗಾಗಿ ಆಗ್ರಹಿಸಿ ಎಐಡಿವೈಒ ಸಂಘಟನೆಯ ಸದಸ್ಯರು ರಾಯಚೂರು ಜಿಲ್ಲೆ ಲಿಂಗಸೂಗೂರಿನಲ್ಲಿ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ರಾಯಚೂರು ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್ ಅವರು ಮಾತನಾಡಿ, “ರಾಜ್ಯದಲ್ಲಿ ಒಟ್ಟು 5240 ಸರ್ಕಾರಿ ಪ್ರೌಢ ಶಾಲೆಗಳಿವೆ. ಅವುಗಳಲ್ಲಿ ಕೆಲಸ ಮಾಡುತ್ತಿರುವ ಈ ಎಲ್ಲ ಸಹಪಠ್ಯ ವಿಷಯಗಳ ಒಟ್ಟು ಬೋಧಕರ ಸಂಖ್ಯೆ 1500ನ್ನೂ ದಾಟುವುದಿಲ್ಲ. ಅದರಲ್ಲಿ ಅನೇಕರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಇನ್ನೂ ಕೆಲವರನ್ನು ಕಡಿಮೆ ದಾಖಲಾತಿಯ ಕಾರಣಕ್ಕೆ ಬೇರೆ ಶಾಲೆಗಳಿಗೆ ವರ್ಗಾಯಿಸಲಾಗುತ್ತಿದೆ. ಪ್ರತಿ ಮಗುವಿಗೂ ಈ ವಿಷಯಗಳಲ್ಲಿ ಅರಿವು ತರಬೇತಿ ಬೇಕೆಂದ ಮೇಲೆ ಕಡಿಮೆ ದಾಖಲಾತಿಯ ಕಾರಣಕ್ಕೆ ಅಲ್ಲಿಂದ ಶಿಕ್ಷಕರನ್ನು ವರ್ಗಾಯಿಸುವ ಕ್ರಮವೇ ಅವೈಜ್ಞಾನಿಕವಾಗಿದೆ. ಇದರಿಂದಾಗಿ ರಾಜ್ಯದ ಬಹುತೇಕ ಶಾಲೆಗಳಲ್ಲಿಂದು ಈ ಸಹಪಠ್ಯ ವಿಷಯಗಳ ಬೋಧನೆಗೆ ಶಿಕ್ಷಕರೇ ಇಲ್ಲದಂತಾಗಿದೆ” ಎಂದರು.
“2008-09ನೇ ಸಾಲಿನಲ್ಲಿ ಸುಮಾರು 600ಕ್ಕೂ ಅಧಿಕ ಶಿಕ್ಷಕರನ್ನು ನೇಮಕಾತಿ ಮಾಡಿದ್ದು, ಬಿಟ್ಟರೆ ಈವರೆಗೆ ಈ ಶಿಕ್ಷಕರ ನೇಮಕಾತಿಗಳೇ ಆಗಿಲ್ಲ. ವಸತಿ ಶಾಲೆಗಳಿಗೆ 2022-23ರಲ್ಲಿ ಸುಮಾರು 1200 ಶಿಕ್ಷಕರ ನೇಮಕವಾಗಿದೆ. ರಾಜ್ಯದಲ್ಲಿ 2.58 ಲಕ್ಷ ಹುದ್ದೆಗಳು ಖಾಲಿ ಇವೆ. ಇನ್ನೂ ಬಹುತೇಕ ಶಾಲೆಗಳಿಗೆ ಈ ಶಿಕ್ಷಕರ ನೇಮಕಾತಿ ಆಗಬೇಕಿದೆ. ಶಿಕ್ಷಣವೆಂದರೆ ಕೇವಲ ಮೆದುಳಿಗೆ ಮಾಹಿತಿ ತುಂಬುವುದಲ್ಲ. ಬದಲಿಗೆ ಚಾರಿತ್ರ್ಯ ನಿರ್ಮಿಸುವುದು ಎಂದು ಸಾಕ್ರೆಟಿಸ್ ಹೇಳುತ್ತಾರೆ. ಅಂದರೆ ಮಕ್ಕಳಿಗೆ ಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನಗಳು ಮಾತ್ರವಲ್ಲದೇ ಸಂಗೀತ, ಚಿತ್ರಕಲೆ, ರಂಗಕಲೆ ಇವೇ ಮೊದಲಾದ ಲಲಿತ ಕಲೆಗಳೂ ಅವಶ್ಯಕವಾಗಿವೆ” ಎಂದು ಹೇಳಿದರು.
“ಆ ಮೂಲಕ ಮಾತ್ರವೇ ಪರಿಪೂರ್ಣ ವ್ಯಕ್ತಿತ್ವ ವಿಕಸನ ಸಾಧ್ಯ ಎಂದರು. ಮಕ್ಕಳ ಬೌದ್ಧಿಕ, ಮಾನಸಿಕ, ಭಾವನಾತ್ಮಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಇವುಗಳು ತುಂಬಾ ಅವಶ್ಯಕ. ಇದನ್ನು ಗಂಭೀರವಾಗಿ ಪರಿಗಣಿಸಿಯೇ ನಮ್ಮ ಶಿಕ್ಷಣ ತಜ್ಞರು ಪ್ರೌಢಶಾಲಾ ಹಂತದಲ್ಲಿಯೇ ಮಕ್ಕಳಿಗೆ ಈ ಲಲಿತಕಲೆಗಳ ಅರಿವು ಮತ್ತು ತರಬೇತಿ ಸಿಗಲೆಂದು ಈ ಕಲೆಗಳಲ್ಲಿ ಪರಿಣಿತಿ ಹೊಂದಿದ ಶಿಕ್ಷಕರ ನೇಮಕಾತಿಗೆ ಶಿಫಾರಸು ಮಾಡಿದ್ದಾರೆ. ಈ ಹಿಂದಿನ ಅನೇಕ ಶಿಕ್ಷಣ ಆಯೋಗಗಳೂ ಕೂಡ ಈ ಅಂಶವನ್ನು ಎತ್ತಿಹಿಡಿದಿವೆ. ಆದ್ದರಿಂದ ಈ ಅಂಶವನ್ನು ಸರ್ಕಾರ ತುಂಬಾ ಗಂಭೀರವಾಗಿ ಪರಿಗಣಿಸಬೇಕು” ಎಂದು ಹೇಳಿದರು.
“ಕರ್ನಾಟಕದಲ್ಲಿ ನಿರುದ್ಯೋಗದ ಬೇಗೆಯಲ್ಲಿ ಬೇಯುತ್ತಿರುವ ಸಂಗೀತ, ಚಿತ್ರಕಲೆ ಮತ್ತು ರಂಗ ಕಲೆಗಳಲ್ಲಿ ಪದವಿ ಪಡೆದವರ ನೇಮಕಾತಿಗಾಗಿ ಕೂಡಲೇ ಅಧಿಸೂಚನೆಯನ್ನು ಹೊರಡಿಸಬೇಕು. ಕೂಡಲೇ ಖಾಲಿ ಇರುವ ಸಂಗೀತ, ಚಿತ್ರಕಲೆ, ರಂಗಕಲಾ ಶಿಕ್ಷಕರನ್ನು ಕೂಡಲೇ ಭರ್ತಿ ಮಾಡಬೇಕು. ಅಲ್ಪಸಂಖ್ಯಾತ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಮಾತ್ರವಲ್ಲದೇ ಉಳಿದ ಎಲ್ಲ ಸರ್ಕಾರಿ ಶಾಲೆಗಳಿಗೆ ಖಾಯಂ ಆಗಿ ಈ ಎಲ್ಲ ಸಹಪಠ್ಯ ವಿಷಯಗಳಿಗೆ ಶಿಕ್ಷಕರನ್ನು ಕೂಡಲೇ ನೇಮಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಬಾಲಕನಿಗೆ ಪೂರ್ಣ ಟಿಕೆಟ್; ಬಡ್ಡಿ ಸಮೇತ್ ಹಣ ಹಿಂದಿರುಗಿಸಲು ಕಂಡಕ್ಟರ್ಗೆ ಆದೇಶ
“ಕಡಿಮೆ ದಾಖಲಾತಿಯ ಕಾರಣಕ್ಕೆ ಈ ಹುದ್ದೆಗಳನ್ನು ರದ್ದುಪಡಿಸುವುದನ್ನು ನಿಲ್ಲಿಸಿ, ಎಲ್ಲ ಪ್ರೌಢ ಶಾಲೆಗಳಿಗೂ ಈ ವಿಷಯಗಳಿಗೆ ಖಾಯಂ ಶಿಕ್ಷಕರನ್ನು ನೇಮಕ ಮಾಡಬೇಕು” ಎಂದು ಒತ್ತಾಯಿಸಿದರು.
ಈ ವೇಳೆ ಜಿಲ್ಲಾ ಉಪಾಧ್ಯಕ್ಷ ತಿರುಪತಿ ಗೋನವಾರ, ಯಲ್ಲಪ್ಪ ದೊರೆ, ಬಾಲಾಜಿ ಸಿಂಗ್, ಶಂಕರ ಜಾದವ್, ಎಸ್ ಬಿ ಚರ್ಕಿ, ಮೀನಾಕ್ಷಿ, ದಿವ್ಯಾನಾಗಪ್ಪ, ಬದ್ರಿನಾಥ, ಚಂದ್ರು ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ