ಮಾನ್ವಿ ತಾಲೂಕಿನ ವಸತಿ ನಿಲಯದ ಬಾಕಿ ಹಣವನ್ನು ಮಂಜೂರು ಮಾಡಲು ಕಟ್ಟಡದ ಮಾಲೀಕರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಾನ್ವಿ ಪ್ರಭಾರಿ ಅಧಿಕಾರಿ ಸಂಗನಬಸಪ್ಪ ಬಿರಾದಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ರಾಯಚೂರು ಜಿಲ್ಲಾ ಕಚೇರಿಯಲ್ಲಿ ವ್ಯವಸ್ಥಾಪಕರಾಗಿರುವ ಇವರಿಗೆ ಮಾನ್ವಿಯ ಕಚೇರಿಯ ಪ್ರಭಾರ ಜವಾಬ್ದಾರಿ ನೀಡಲಾಗಿತ್ತು. ಮಾನ್ವಿಯಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯ ನಡೆಸಲು ಕಟ್ಟಡವೊಂದನ್ನು ಬಾಡಿಗೆ ಪಡೆಯಲಾಗಿತ್ತು. ತಿಂಗಳಿಗೆ ₹60 ಸಾವಿರ ಬಾಡಿಗೆಯಂತೆ 11 ತಿಂಗಳ ಬಾರಿಗೆ ಹಣ ಬಾಕಿ ಉಳಿದಿತ್ತು. ಆ ಹಣವನ್ನು ಮಂಜೂರು ಮಾಡಿಸಲು ಕಟ್ಟಡ ಮಾಲೀಕರಿಂದ ₹15 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ಕಟ್ಟಡ ಮಾಲೀಕ ತಿಪ್ಪಯ್ಯ ಶೆಟ್ಟಿ ಈ ಕುರಿತು ಮಂಗಳವಾರ ಲೋಕಾಯುಕ್ತರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು. ಬುಧವಾರ ದಾಳಿ ನಡೆಸಿದ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿದ್ದ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ ಎನ್ ಶಶಿಧರ, ಇನ್ಸ್ ಪೆಕ್ಟರ್ ಗಳಾದ ಕಾಳಪ್ಪ ಬಡಿಗೇರ್, ರವಿ ಪುರುಷೋತ್ತಮ್, ಮುಖ್ಯಪೇದೆಗಳಾದ ಶಿವರಾಮ ಸ್ವಾಮಿ, ಏಕಾಂಬರನಾಥ, ಸಿಬ್ಬಂದಿಯಾದ ಗೋಪಾಲರಾವ್ ಪವಾರ್, ಅಶೋಕ, ರವಿ, ಬಸವರಾಜ್, ಬಸಯ್ಯ, ಗೋಪಾಲ್, ಶರಣಬಸವ, ಅಜಿತ್ ಇದ್ದರು.
