ರಾಜಧನ ಆಧಾರಿತ ಮರಳು ಸಾಗಾಣಿಕೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ರಾಯಚೂರು ಜಿಲ್ಲಾ ಟಿಪ್ಪರ್ ಮಾಲೀಕರ ಅಸೋಸಿಯೇಷನ್ನ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ಸರ್ಕಾರಿ ಮತ್ತು ಖಾಸಗಿ ಕಟ್ಟಡ, ಸೇತುವೆ, ಬ್ರಿಡ್ಜ್, ಪ್ರಮುಖ ರಸ್ತೆಗಳು ಸಾರ್ವಜನಿಕ ಮನೆ ನಿರ್ಮಾಣ ಸೇರಿದಂತೆ ಇತರೆ ಮೂಲಭೂತ ಕಾಮಗಾರಿ ನಿರ್ಮಾಣಕ್ಕೆ ಉತ್ಕ್ರಷ್ಠ ಮರಳು ಪೂರೈಕೆ ಅನಿವಾರ್ಯವಾಗಿದೆ” ಎಂದು ಹೇಳಿದರು.
“ಜಿಲ್ಲೆಯ ಕೃಷ್ಣಾ ಮತ್ತು ತುಂಗಭದ್ರಾ ನದಿಗೆ ಹೊಂದಿಕೊಂಡಿರುವ ಚೀಕಲಪರ್ವಿ, ಯಡಿವಾಳ, ಮದ್ಲಾಪುರ, ಕರ್ಕಿಹಳ್ಳಿ ಕ್ವಾರಿಗಳನ್ನು ಹಟ್ಟಿ ಚಿನ್ನದ ಗಣಿ ಮೂಲಕ ಮತ್ತು ಕೋಳೂರು, ಬುದ್ದಿನ್ನಿ, ಸಸಳ್ಳಿ, ಜಾಲವಾಡಗಿ ಬ್ಲಾಕ್ 1, 2 ಮತ್ತು 3ರ ಪಟ್ಟಾ ಲ್ಯಾಂಡ್ ಕ್ವಾರಿಗಳ ಮರಳು ಸಾಗಾಣಿಕೆಗೆ ಜಿಲ್ಲಾಡಳಿತವೇ ಪರವಾನಗಿ ನೀಡಿದ್ದು, ರಾಯಲ್ಟಿ ಆಧಾರಿತ ಮರಳು ಪೂರೈಕೆ ಮಾಡುವುದನ್ನೇ ನೂರಾರು ಟಿಪ್ಪರ್ ಮಾಲೀಕರು ಉಪ ಜೀವನವನ್ನಾಗಿಸಿಕೊಂಡಿದ್ದಾರೆ” ಎಂದು ಹೇಳಿದರು.
“ಕಳೆದ 7 ತಿಂಗಳಿಂದ ಕಾನೂನಾತ್ಮಕ ಮರಳು ಸಾಗಾಣಿಕೆಗೆ ಜಿಲ್ಲಾಡಳಿತ ನಿರ್ಬಂಧವೇರಿದ
ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಟ್ಟಡ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು, ಇದನ್ನೇ ಅವಲಂಬಿಸಿರುವ ಕಾರ್ಮಿಕರು ಕೂಲಿ ಇಲ್ಲದೇ ಪರದಾಡುವಂತಾಗಿದೆ. ಲಕ್ಷಾಂತರ ಸಾಲ ಮಾಡಿ ಖರೀದಿಸಿರುವ ವಾಹನಗಳ ಕಂತು ಪಾವತಿಸದೆ ಖಾಸಗಿ ಫೈನಾನ್ಸ್ನವರ ಕಿರುಕುಳಕ್ಕೆ ಬೇಸತ್ತಿದ್ದೇವೆ” ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಹೆಸರಿಗೆ ಮಾತ್ರ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿದ್ದು, ನಮ್ಮ ಸಮಸ್ಯೆಗಳನ್ನು ಕನಿಷ್ಟ ಆಲಿಸಲು ಸಮಯಾವಕಾಶವಿಲ್ಲದ ಪ್ರಜಾಪ್ರಭುತ್ವ ವಿರೋಧಿ ಸಚಿವರಾಗಿದ್ದಾರೆ. ಅಧಿಕಾರ ವಹಿಸಿಕೊಂಡ ದಿನದಿಂದಲೂ ಜಿಲ್ಲೆಯ ಜನತೆಯಿಂದ ಅಂತರ ಕಾಯ್ದುಕೊಂಡಿರುವ ಸಚಿವರು ಕೇವಲ ಮೌಖಿಕವಾಗಿ ಹೇಳಿ ಜಿಲ್ಲಾದ್ಯಂತ ಮರಳು ಮಾರಾಟ ಸ್ಥಗಿತಗೊಳಿಸುವಂತೆ ಒತ್ತಡವೇರಿ ನಮ್ಮೆಲ್ಲರ ಕುಟುಂಬ ಸದಸ್ಯರ ಜೀವನದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ” ಎಂದು ದೂರಿದರು.
“ರಾಯಚೂರಿನ ಮರಳಿಗೆ ಅನ್ಯ ಜಿಲ್ಲೆಗಳಲ್ಲಿ ಭಾರೀ ಬೇಡಿಕೆಯಿದ್ದು, ಹಲವು ವರ್ಷಗಳಿಂದ ಮರಳು ಸಾಗಾಣಿಕೆ ರಾಯಲ್ಟಿ ಮತ್ತು ಕೋಟ್ಯಂತರ ತೆರಿಗೆ ಸಂಗ್ರಹದಲ್ಲಿ ರಾಯಚೂರು ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ನಿತ್ಯ 150ಕ್ಕೂ ಮೇಲ್ಪಟ್ಟು ರಾಯಲ್ಟಿ ವಿತರಿಸಿದರೂ ಸ್ಥಳೀಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದಿನವೊಂದಕ್ಕೆ 30 ಲಕ್ಷದಂತೆ ತಿಂಗಳಿಗೆ ₹10 ಕೋಟಿ ಆದಾಯವಿದೆ” ಎಂದರು.
“ಬರದ ಭೀಕರತೆಯಲ್ಲಿಯೂ ಮರಳು ಸಾಗಾಣಿಕೆಯಿಂದ ಬರುವ ಲಕ್ಷಾಂತರ ತೆರಿಗೆ ಹಣ ಅಭಿವೃದ್ಧಿ ಚಟುವಟಿಕೆಗೆ ವ್ಯಯಿಸಲು ಮುತುವರ್ಜಿ ವಹಿಸದ ಉಸ್ತುವಾರಿ ಸಚಿವರು ಜಲ್ಲಿ ಕ್ರಷರ್, ಮರಳು, ಕಪ್ಪುಮಣ್ಣು ಮತ್ತು ಕೋಟ್ಯಂತರ ಬೆಲೆ ಬಾಳುವ ಕೆಪಿಸಿಯ ಹಾರುಬೂದಿ ಅಕ್ರಮ ಸಾಗಾಣಿಕೆಗೆ ಅವಕಾಶ ಕಲ್ಪಿಸಿ ಕೇವಲ ನಮ್ಮ ಹಕ್ಕಾಗಿರುವ ಕಾನೂನಾತ್ಮಕ ಮರಳು ಮಾರಾಟಕ್ಕೆ ಮಾತ್ರ ಪರವಾನಗಿ ನೀಡದೆ ಜನವಿರೋಧಿ ನೀತಿ ಅನುಸರಿಸುತ್ತಿದ್ದಾರೆ” ಎಂದು ಆರೋಪಿಸಿದರು.
“ಉಸ್ತುವಾರಿ ಸಚಿವರ ತವರು ಕ್ಷೇತ್ರದ ಕಲಬುರಗಿ ಜಿಲ್ಲೆಯ ಸೇಡಂ ಮತ್ತು ಚಿತ್ತಾಪುರ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಮರಳುಗಾರಿಕೆ ರಾಜಾ ರೋಷವಾಗಿ ನಡೆಯುತ್ತಿದ್ದರೂ ತುಟಿಬಿಚ್ಚದ ಸಚಿವರು ಅಲ್ಲಿನ ಆಪ್ತ ಹಿಂಬಾಲಕರ ಒತ್ತಡಕ್ಕೆ ಮಣಿದು, ಜಿಲ್ಲೆಯಲ್ಲಿ ಮಾತ್ರ ಮರಳು ಮಾರಾಟ ಸ್ಥಗಿತಗೊಳಿಸಿ ಅನ್ಯಜಿಲ್ಲೆ ಆದಾಯವೃದ್ಧಿಗೆ ಜಿಲ್ಲೆಯವರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಟಿಪ್ಪರ್ ಮಾಲೀಕರ ಸಮಸ್ಯೆಗಳಿಗೆ ಸಕಾರಾತ್ಮಕ ಸ್ಪಂದಿಸಿ ಕಾನೂನಾತ್ಮಕ ಮರಳು ಸಾಗಾಣಿಕೆಗೆ ಅವಕಾಶ ಮಾಡಿಕೊಡದಿದ್ದಲ್ಲಿ ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನಾಧಿಕಾರಿಗಳ ಧೋರಣೆ ಖಂಡಿಸಿ ಮರಳುಗಾರಿಕೆ ಸಮನಾಂತರವಾಗಿ ತಕ್ಷಣವೇ ಜಿಲ್ಲಾದ್ಯಂತ ಜಲ್ಲಿ ಕ್ರಷರ್, ಮರಳು ಮತ್ತು ಕೆಪಿಸಿಯ ಹಾರುಬೂದಿ ಸಾಗಾಣಿಕೆ ಸ್ಥಗಿತಗೊಳಿಸುವ ಆದೇಶ ಹೊರಡಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಖ್ಯದ್ವಾರದಲ್ಲಿಯೇ ಧರಣಿ ಸತ್ಯಾಗ್ರಹದೊಂದಿಗೆ ಮುಂಬರುವ ಲೋಕಸಭಾ ಚುನಾವಣೆ ಬಹಿಷ್ಕರಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ; ಪರೀಕ್ಷಾ ಕೇಂದ್ರಗಳ ಸುತ್ತಲೂ ಪ್ರತಿಬಂಧಕಾಜ್ಞೆ ಜಾರಿ
ಈ ಸಂದರ್ಭದಲ್ಲಿ ಅಧ್ಯಕ್ಷ ಕೆ ಸಿ ಅಣ್ಣಯ್ಯ, ಗೌರವಾಧ್ಯಕ್ಷ ವೈ ಎಸ್ ಅಶೋಕ, ಉಪಾಧ್ಯಕ್ಷ ಶಿವಮೂರ್ತಿ, ಬಸವರಾಜ, ಗುರುರಾಜ, ವಿನೋದ, ಬಾಬಾ ಪಾಟೀಲ್, ಶಶಿ ಪಾಟೀಲ್ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ