ಕಲ್ಯಾಣ ಕರ್ನಾಟಕ ಭಾಗದ ಜನರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಅವಮಾನಿಸಿರುವ ಆರಗ ಜ್ಞಾನೇಂದ್ರ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಡಾ.ರಜಾಕ್ ಉಸ್ತಾದ್ ಆಗ್ರಹಿಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಪಶ್ಚಿಮ ಘಟ್ಟಗಳಲ್ಲಿ ಡಾ. ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಆರಗ ಜ್ಞಾನೇಂದ್ರ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಬಣ್ಣ ಮತ್ತು ಖಂಡ್ರೆ ಅವರ ಕೂದಲಿನ ಬಗ್ಗೆ ಅವಹೇಳನಕಾರಿಯಾಗಿ ಮಾತಡಿದ್ದು, ತಮ್ಮ ಕುಚೋಧ್ಯತನ ಪ್ರದರ್ಶಿಸಿದ್ದಾರೆ. ಅವರ ಹೇಳಿಕೆ ಇಡಿ ಸಮಾಜವೇ ನಾಚಿಕೆಪಡುವಂತಾಗಿದೆ” ಎಂದು ಕಿಡಿಕಾರಿದ್ದಾರೆ.
“ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವ ಕುರಿತು ಪರ ವಿರೋಧ ನಿಲುವುಗಳಿವೆ. ವರದಿ ಅನುಷ್ಟಾನ ಕುರಿತು ಕೇಂದ್ರ ಸರ್ಕಾರವೇ ನಿರ್ಧರಿಸಬೇಕಿದೆ. ಅವರದ್ದೇ ಪಕ್ಷ ಕೇಂದ್ರದಲ್ಲಿದೆ. ಅವರ ಮೇಲೆ ಒತ್ತಡ ಹಾಕುವದನ್ನು ಬಿಟ್ಟು, ಕಲ್ಯಾಣ ಕರ್ನಾಟಕ ಭಾಗದ ಜನರನ್ನು ನಿಂಧಿಸಿರುವದು ಖಂಡನೀಯ” ಎಂದರು.
“ಬಿಜೆಪಿಗರು ಸೋಲು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ. ಮನಬಂದಂತೆ ಮಾತನಾಡುತ್ತಿದ್ದಾರೆ. ಸಂವಿಧಾನ ಹೆಸರಿನಲ್ಲಿ ಪ್ರಮಾಣ ಪತ್ರ ಸ್ವೀಕಾರ ಮಾಡಿದ ಅವರು, ಸಂವಿಧಾನ ವಿರೋಧಿಯಾಗಿ ವರ್ತಿಸುತ್ತಿದ್ದಾರೆ. ಕೂಡಲೇ ರಾಜ್ಯಪಾಲರು ಅವರ ಶಾಸಕತ್ವ ಅನರ್ಹಗೊಳಿಸಬೇಕು. ಬಿಜೆಪಿ ನಾಯಕರು ಜ್ಞಾನೇಂದ್ರ ಅವರನ್ನು ಉಚ್ಛಾಟಿಸಬೇಕು” ಎಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಮರೇಗೌಡ ಹಂಚಿನಾಳ, ಸುಧೀಂಧ್ರ ಜಹಗೀರದಾರ ಉಪಸ್ಥಿತರಿದ್ದರು.