ರಾಯಚೂರಿನ ಸಿರವಾರ ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗಿರುವ ದಾದಿಯರ ವಸತಿ ಗೃಹಗಳು ನಿರ್ಮಾಣಗೊಂಡು ವರ್ಷಗಳೇ ಕಳೆದರೂ ಇಂದಿಗೂ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿವೆ. ನಿತ್ಯ ರೋಗಿಗಳ ಸೇವೆ ಮಾಡುವ ದಾದಿಯರಿಗಾಗಿ ಸರ್ಕಾರ ನೀಡುವ ಮೂಲಸೌಕರ್ಯಗಳನ್ನು ಅವರಿಗೆ ತಲುಪಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ ಎನ್ನುವುದು ಸರ್ಕಾರಿ ದಾದಿಯರ ಗಂಭೀರ ಆರೋಪ.
ಸರ್ಕಾರವು ಸುಮಾರು 3 ವರ್ಷಗಳ ಹಿಂದೆ 2022 ರಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಕಟ್ಟಡಗಳನ್ನು ನಿರ್ಮಿಸಿತು. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಿಸಲಾದ ಈ ಗೃಹಗಳನ್ನು ನರ್ಸ್ಗಳ ವಸತಿಗಾಗಿ ಬಳಸಬೇಕಾಗಿತ್ತು. ಆದರೆ ಉದ್ಘಾಟನೆ ನಡೆಯದೇ ಇರುವುದರಿಂದ ಕಟ್ಟಡಗಳು ಖಾಲಿ ಬಿದ್ದಿವೆ. ಕಟ್ಟಡಗಳ ಬಾಗಿಲು-ಕಿಟಕಿಗಳಿಗೆ ಈಗಾಗಲೇ ಹಾನಿಯಾದ ಲಕ್ಷಣಗಳು ಕಾಣಿಸುತ್ತಿವೆ. ಆಸ್ಪತ್ರೆಯಲ್ಲಿ ನೂರಾರು ನರ್ಸ್ಗಳು ಕೆಲಸ ಮಾಡುತ್ತಿದ್ದರೂ ವಸತಿ ಸೌಲಭ್ಯವಿಲ್ಲದೆ ಹೊರಗಿನ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ.
ಸರ್ಕಾರಿ ವಸತಿ ಅನುಕೂಲವಾದರೆ ನರ್ಸ್ಗಳಿಗೆ ಆರ್ಥಿಕ ಭಾರವಾದರೂ ಕಡಿಮೆ ಆಗುತ್ತಿತ್ತು ಎನ್ನುತ್ತಾರೆ ದಾದಿಯರು. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಮಾತನಾಡಿ, “ಪ್ರತಿ ದಿನ ದಾದಿಯರು ಕೆಲಸ ಮುಗಿಸಿ ದೂರದ ಮನೆಗಳಿಗೆ ಪ್ರಯಾಣಿಸುವ ತೊಂದರೆ ಅನುಭವಿಸುತ್ತಿದ್ದಾರೆ. ದೂರದ ಊರುಗಳಿಂದ ಬಂದು ಕರ್ತವ್ಯ ನಿರ್ವಹಿಸುತ್ತಿರುವ ದಾದಿಯರಿಗೆ ಬಾಡಿಗೆ ಮನೆಯಿಂದ ದೊಡ್ಡ ಹೊರೆ ಎದುರಾಗುತ್ತಿದೆ. ಹೆಚ್ಚಿನ ಸಂಬಳವಿಲ್ಲದ ಕಾರಣ ಬಾಡಿಗೆಯ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಅವರ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ವಸತಿ ಗೃಹಗಳು ನಿರ್ಮಾಣವಾಗಿ ಬಳಕೆಗೆ ಬಂದರೆ, ದಾದಿಯರಿಗೆ ದೊಡ್ಡ ನೆಮ್ಮದಿ ಲಭಿಸಲಿದೆ” ಎಂದರು.

ಸೇವೆಯೊಂದಿಗೆ ಜೀವನ ನಿರ್ವಹಣೆಯ ತೊಂದರೆ ಕಡಿಮೆಯಾಗಲು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ನಿರೀಕ್ಷೆ ವ್ಯಕ್ತವಾಗಿದೆ. ಕೆಲವೊಮ್ಮೆ ರಾತ್ರಿ ಕೆಲಸಕ್ಕೆ ಹಾಜರಾಗಬೇಕಾದರೆ ಭಯದ ಸ್ಥಿತಿಯಲ್ಲಿ ಬರುತ್ತೇವೆ. ವಸತಿ ಸಮಸ್ಯೆ ಪರಿಹಾರವಾದರೆ ಸೇವಾ ಕಾರ್ಯ ಇನ್ನಷ್ಟು ಪರಿಣಾಮಕಾರಿ ಆಗಲಿದೆ ಎಂದರು.
ಆಸ್ಪತ್ರೆಯ ವಸತಿಗಳು ಬಳಕೆಯಿಲ್ಲದೆ ಹೊರಗಡೆ ಬಾಡಿಗೆ ಮನೆಗಳ ಮೊರೆ ಹೋಗಬೇಕಾಗಿದೆ. ಬಂದ ವೇತನದಿಂದ ಮನೆ ಬಾಡಿಗೆ, ವಿದ್ಯುತ್, ಇನ್ನಿತರ ಖರ್ಚು ಭರಿಸುವುದೇ ದುಸ್ತರವಾಗಿದೆ. ಆದರೆ ಸರ್ಕಾರದ ನಿರ್ಲಕ್ಷ್ಯವೇ ಅವರ ಬದುಕಿಗೆ ಹೆಚ್ಚುವರಿ ಹೊರೆ ತರುತ್ತಿದೆ. ಹೊಸ ವಸತಿ ಗೃಹ ಉದ್ಘಾಟನೆ ತಕ್ಷಣ ನಡೆಯಲಿ ಎಂಬುದು ಎಲ್ಲರ ನಿರೀಕ್ಷೆಯಾಗಿದ್ದು, ದಾದಿಯರ ಸಮಸ್ಯೆಗಳಿಗೆ ಅಂತ್ಯ ತರಲು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ವ್ಯಕ್ತವಾಗಿದೆ.
ಸ್ಥಳೀಯ ನಿವಾಸಿ ಮೇಶಕ್ ದೊಡ್ಮನಿ ಮಾತನಾಡಿ, “ವಸತಿ ಗೃಹಗಳು ಉದ್ಘಾಟನೆಗೊಂಡು ದಾದಿಯರು ವಸತಿ ಗೃಹಗಳಲ್ಲಿ ವಾಸವಿರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ಜಾರಿ ಮಾಡಬೇಕು. ಪ್ರತಿ ದಿನ ರೋಗಿಗಳು ಆಸ್ಪತ್ರೆಗೆ ಬಂದಾಗೊಮ್ಮೆ ವೈದ್ಯರು ಇಲ್ಲ , ನರ್ಸ್ ಗಳು ಇಲ್ಲವೆಂದು ಗೋಳಾಡುತ್ತಿರುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ವಸತಿ ಗೃಹಗಳು ಕಾರ್ಯ ಪ್ರಾರಂಭಿಸಬೇಕು” ಎಂದರು.
ಆಸ್ಪತ್ರೆಯ ವಸತಿ ಗೃಹಗಳಲ್ಲಿ ಸಿಬ್ಬಂದಿಗಳು ವಾಸವಿದ್ದರೆ ತುರ್ತು ಕ್ರಮಕ್ಕೆ ಹಾಗೂ ರಾತ್ರಿ ವೇಳೆ ರೋಗಿಗಳನ್ನು ಪ್ರಥಮ ಚಿಕಿತ್ಸೆಗೆ ಅನುಕೂಲವಾಗುತ್ತದೆ. ತಾಲ್ಲೂಕಿನ ಸುತ್ತಮುತ್ತ ಹಳ್ಳಿಗಳಿಂದ ಸಾರ್ವಜನಿಕರು ವೈದ್ಯರು ಇರಲ್ಲ ಎಂದು ಭಾವಿಸಿಕೊಂಡು ಜಿಲ್ಲಾಸ್ಪತ್ರೆಗೆ ತೆರಳುತ್ತಾರೆ ಇದರಿಂದ ಸುಮಾರು ಅನಾಹುತ ಘಟನೆಗಳು ಆಗಿವೆ” ಎಂದರು.

ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ (DHO) ಸುರೇಂದ್ರ ಮಾತನಾಡಿ, ಆಸ್ಪತ್ರೆಯ ದಾದಿಯರ ವಸತಿ ಗೃಹಗಳನ್ನು ಇನ್ನೂ ಹಸ್ತಾಂತರ ಮಾಡಲಾಗಿಲ್ಲ. ಆದರೆ ಶೀಘ್ರದಲ್ಲೇ ಪ್ರಾರಂಭಿಸುವ ಕಾರ್ಯ ನಡೆಯಲಿದೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ರಾಯಚೂರು | ರಸಗೊಬ್ಬರ ದುಬಾರಿ ಮಾರಾಟಕ್ಕೆ ಕಾನೂನು ಕ್ರಮ : ಶರಣಪ್ರಕಾಶ ಪಾಟೀಲ್
ಕೋಟ್ಯಂತರ ಅನುದಾನ ವ್ಯಯಿಸಿ ಜಾರಿಗೆ ತಂದ ಎಷ್ಟೋ ಅಭಿವೃದ್ಧಿ ಯೋಜನೆಗಳು ಜನಸಾಮಾನ್ಯರಿಗೆ ತಲುಪುವುದೇ ಇಲ್ಲ. ಇಂಥ ಆರೋಪಗಳ ಮಧ್ಯೆಯೂ ದಾದಿಯರ ಬಳಕೆಗೆ ನಿರ್ಮಿಸಿರುವ ಸರ್ಕಾರಿ ವಸತಿ ಗೃಹಗಳು ಸುಮ್ಮನೆ ಪಾಳು ಬಿದ್ದಿವೆ. ಕೂಡಲೇ ಸ್ಥಳೀಯ ಆಡಳಿತ ಇತ್ತ ಗಮನಹರಿಸಿ ವಸತಿ ಗೃಹಗಳನ್ನು ಉತ್ತಮ ಸ್ಥಿತಿಗೆ ತಂದು ಬಳಕೆಗೆ ನೀಡಬೇಕಾಗಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್