ಅಮರೇಶ್ವರ ಕ್ಯಾಂಪಿನ ಹಾಲು ಉತ್ಪಾದಕರ ಸಂಘದ ಸದಸ್ಯರ ನೇಮಕ ಚುನಾವಣೆಯಲ್ಲಿ ರಾಜಕೀಯ ಪ್ರಾಬಲ್ಯದಿಂದ ಅರ್ಹ ರೈತರಿಗೆ ಅನ್ಯಾಯವಾಗಿದೆ ಎಂದು ರೈತ ಎಂ ಪ್ರಕಾಶ ಆರೋಪಿಸಿದರು.
ರಾಯಚೂರು ನಗರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, “ಮಾನ್ವಿ ತಾಲೂಕಿನ ಅಮರೇಶ್ವರ ಕ್ಯಾಂಪಿನ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತವು 1987ರಿಂದ ಈವರೆಗೆ ಕಾರ್ಯನಿರ್ವಹಿಸುತ್ತಿದೆ. ಪ್ರತಿ 5 ವರ್ಷಗಳಿಗೊಮ್ಮೆ ಚುನಾವಣೆ ನಡೆಸದೆ ರೈತರೆಲ್ಲರೂ ಸೇರಿ ಒಮ್ಮತದಿಂದ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದೆವು. ಆದರೆ 2018ರಿಂದ ಸಂಘದಲ್ಲಿ ಲೋಪದೋಷಗಳು ಕಂಡುಬಂದಿದ್ದು, ಈ ಬಗ್ಗೆ ರೈತರು ಪ್ರಶ್ನೆ ಮಾಡಿದರೆ ಉತ್ತರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ” ಎಂದು ದೂರಿದರು.
“ಸಂಘದಲ್ಲಿದ್ದ ಅರ್ಹ ರೈತರಿಗೆ ಅನ್ಯಾಯ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ದ್ರೋಹ ಬಗೆಯುವ ಕೆಲಸ ಮಾಡಿದ್ದಾರೆ. ಜತೆಗೆ ಸಂಘದ ಹೆಸರಿನಲ್ಲಿ ಮಂಜೂರಾಗಿದ್ದ ಸರ್ಕಾರಿ ನ್ಯಾಯಬೆಲೆ ಅಂಗಡಿಗೆ ಬರುವ ಆದಾಯವನ್ನು ಸಂಘಕ್ಕೆ ನೀಡದೆ ಜಿ ಸತ್ಯ ನಾರಾಯಣ ಸೇರಿದಂತೆ ಇತರೆ ಪ್ರಬಲ ವ್ಯಕ್ತಿಗಳು ತಮ್ಮ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದರು.
“2019–20ನೇ ಸಾಲಿನ ಚುನಾವಣೆಯಲ್ಲಿ ನಿಜವಾಗಿ ಹಾಲು ಹಾಕಿದವರು 13 ಮಂದಿ ರೈತರು ಮಾತ್ರ ಮತ ಚಲಾಯಿಸಲು ಆಯ್ಕೆಯಾಗಿದ್ದರು. ಆದರೆ 2024–25ನೇ ಸಾಲಿನಲ್ಲಿ ಸುಳ್ಳು ದಾಖಲು ಸೃಷ್ಟಿಸಿ ರೈತರ ಹೆಸರಿನ ಮೇಲೆ ಅವರು ಯಾವುದೇ ಹೈನುಗಾರಿಕೆ ಮಾಡಿರದಿದ್ದರೂ ಅವರ ಬೇರೊಂದು ಸೊಸೈಟಿಯಲ್ಲಿ ಹಾಲು ಖರೀದಿಸಿ ರೈತರ ಹೆಸರಿಗೆ ಹಾಲು ಹಾಕಿ ಸಂಘದ ಚುನಾವಣೆಗೆ ಮತ ಚಲಾಯಿಸುವ ಅಧಿಕಾರವನ್ನು ನೀಡಿದ್ದು, ಅರ್ಹರಿಗೆ ಅನ್ಯಾಯ ಎಸಗಿದ್ದಾರೆ” ಎಂದು ಆರೋಪಿಸಿದರು.
“ಐದು ವರ್ಷಗಳ ಅವಧಿಯಲ್ಲಿ ಸಂಘದ ಸಾಮಾನ್ಯ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳದೆ ಚುನಾವಣೆಯಲ್ಲಿ ಮತ ಚಲಾಯಿಸಲು ಮಾತ್ರ ಸದಸ್ಯತ್ವ ನೀಡಿದ್ದಾರೆ. 2019ರಲ್ಲಿ 43 ಜನ ರೈತರು ಸದಸ್ಯತ್ವ ಪಡೆದುಕೊಂಡಿದ್ದರು. 2020ರಲ್ಲಿ 41 ಜನ ಸದಸ್ಯರಿದ್ದರೆ, 2021ರಲ್ಲಿ ಇಬ್ಬರನ್ನು ತೆಗೆದು 39ಜನ ಸದಸ್ಯರಿದ್ದರು. 2022ರಲ್ಲಿ 40 ಜನ ರೈತರು ಸದಸ್ಯತ್ವ ಪಡೆದುಕೊಂಡಿದ್ದರು. 2023ರ ಸೆಪ್ಟಂಬರ್ನಲ್ಲಿ 37, ಅಕ್ಟೊಬರ್ನಲ್ಲಿ 108 ಏಕಾಏಕಿ ಹೆಚ್ಚಳವಾದರೆ ಚುನಾವಣೆಗಾಗಿ ಅನರ್ಹ ರೈತರನ್ನು ಸೇರ್ಪಡೆ ಮಾಡಿಕೊಂಡು ಚುನಾವಣೆಯಲ್ಲಿ ಮತದಾನ ಬಳಿಕ ಸೆಪ್ಟೆಂಬರ್ 1ರಿಂದ ಅಕ್ಟೋಬರ್ 30ರವರೆಗೆ ಮತ್ತೆ ಯಥಾ ಸ್ಥಿತಿ ಮೊದಲು ನಾಲ್ಕು ವರ್ಷ ಯಾವ ರೀತಿ ಹಾಲು ಹಾಕಿದ್ದ ಸದಸ್ಯರು ಇದ್ದದು, ಅದೇ 31 ಜನ ಮಾತ್ರ ಇದ್ದರು. ಸಂಘದ ಸದಸ್ಯರ ನೇಮಕ ಚುನಾವಣೆ ಸಲುವಾಗಿಯೇ ನಕಲಿ ರೈತರನ್ನು ಸೃಷ್ಟಿಸಿ ಅಧಿಕಾರ ಹಿಡಿದಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ
ಬೈಲಾ ನಿಯಮ ಪ್ರಕಾರ ಐದು ವರ್ಷಗಳ ಸಾಮಾನ್ಯ ಸಭೆಯಲ್ಲಿ ಕನಿಷ್ಠ ಮೂರು ವರ್ಷಗಳು ಹಾಜರಾತಿ ಇರಬೇಕು. ಸಾಮಾನ್ಯ ಸಭೆಗಳಿಗೆ ಹಾಜರಿಯಾಗದೆ 27 ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ನೀಡದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ, ಸಹಕಾರಿ ಸಂಘಗಳ ಉಪನಿಬಂಧಕರು ಮನವಿ ಮಾಡಿದರೂ ಈವರೆಗೆ ಕ್ರಮಕೈಗೊಂಡಿಲ್ಲ” ಎಂದು ಆಪಾದಿಸಿದರು.
“ನ್ಯಾಯಕ್ಕಾಗಿ ಹೈಕೋರ್ಟ್ ಕಲಬುರಗಿ ಪೀಠಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದು, ವಿಚಾರಣೆಯಲ್ಲಿದೆ. ಸಂಘದ ಕಾರ್ಯದರ್ಶಿಯ ಮೇಲೆ ಒತ್ತಡ ಹೇರಿ ತಮಗೆ ಬೇಕಾದ ರೀತಿಯಲ್ಲಿ ಸುಳ್ಳು ಸಹಿಗಳನ್ನು ಪಡೆದುಕೊಂಡಿದ್ದಾರೆ. ಅರ್ಹ ರೈತರಿಗೆ ಅನ್ಯಾಯವಾಗಿದ್ದು ನ್ಯಾಯ ಒದಗಿಸಿಕೊಡಬೇಕಾಗಿದೆ” ಎಂದು ಒತ್ತಾಯಿಸಿದರು.
ರೈತರಾದ ಪಿ ವೀರೇಶ, ನಾಗೇಂದ್ರ ಚೌದರಿ, ಶಿವಾರ್ಜುನ ನಾಯಕ, ಸಂಗಮೇಶ ನಾಯಕ, ಶಿವಕುಮಾರ ಇದ್ದರು.
