ರಾಯಚೂರು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘದ ನೇತೃತ್ವದೊಂದಿಗೆ ಏಪ್ರಿಲ್ 13ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ವೈದ್ಯಕೀಯ ಸಂಘದ ಕಾರ್ಯದರ್ಶಿ ಶುಶೂತ್ ನಿಲೋಫರ್ ಹೇಳಿದರು.
ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ನವೋದಯ ವೈಧ್ಯಕೀಯ ಕಾಲೇಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದೊಂದಿಗೆ ಬೆಳಿಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ಆರೋಗ್ಯ ಶಿಬಿರ ನಡೆಯಲಿದೆ” ಎಂದರು.
“ಸಾಮಾನ್ಯ ಆರೋಗ್ಯ, ಶಸ್ತ್ರ ಚಿಕಿತ್ಸಾ, ಇಸಿಜಿ, ಇಕೋ ತಪಾಸಣೆ, ಮೂಳೆ, ಕೀಲು ಚಿಕಿತ್ಸೆ, ನೇತ್ರ, ಮನೋವೈದ್ಯ, ಚರ್ಮರೋಗ, ಕಿವಿ, ಮೂಗು, ಗಂಟಲು, ಮಕ್ಕಳ ತಪಾಸಣೆ, ಮೂತ್ರ, ಮೂತ್ರಪಿಂಡ, ಹೃದಯ ರೋಗ, ನರರೋಗ, ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸೆ ವಿಭಾಗಗಳ ವೈದ್ಯರು ತಪಾಸಣೆ ನಡೆಸಲಿದ್ದಾರೆ. ಅಗತ್ಯ ಬಿದ್ದರೆ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಉಚಿತವಾಗಿ ಔಷಧಿಯನ್ನೂ ವಿತರಿಸಲಾಗುತ್ತದೆ. ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಬಂದು ತಪಾಸಣೆ ಪಡೆಯಬಹುದಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | 21 ವರ್ಷಗಳ ಬಳಿಕ ಪಿಯುಸಿ ಪಾಸ್ ಮಾಡಿದ ಅಂಗನವಾಡಿ ಶಿಕ್ಷಕಿ
ವೈದ್ಯಕೀಯ ಸಂಘದ ಅಧ್ಯಕ್ಷ ಶ್ರೀಶೈಲ ಅಮರಖೇಡ್ ಮಾತನಾಡಿ, “ವೈದ್ಯಕೀಯ ಸಂಘದಿಂದ ನಾಲ್ಕನೇ ಆರೋಗ್ಯ ಶಿಬಿರ ನಡೆಸಲಾಗುತ್ತಿದೆ. ನಗರ ಎಲ್ಲ ವೈದ್ಯರು, ವೈದ್ಯಕೀಯ ಸಂಸ್ಥೆಗಳ ಸಹಕಾರದಿಂದ ಶಿಬಿರ ನಡೆಸಲಾಗುತ್ತದೆ. ಶಿಬಿರದಲ್ಲಿ ಭಾಗವಹಿಸುವ ಪ್ರತಿಯೊಬ್ಬ ವ್ಯಕ್ತಿಗೂ ತಪಾಸಣೆಯ ಅಗತ್ಯ ಬಿದ್ದರೆ ಶಸ್ತ್ರ ಚಿಕಿತ್ಸೆ ಒದಗಿಸಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಐಎಂಎ ಪದಾಧಿಕಾರಿಗಳಾದ ಡಾ. ಶ್ರೀಧರ ವೈಟ್ಲ, ಡಾ. ರಾಘವೇಂದ್ರ ಎಸ್, ಡಾ. ದೀಪಶ್ರೀ, ಡಾ. ರಾಮನಗೌಡ ಇದ್ದರು.