ದಲಿತರಿಗೆ ಪ್ರತ್ಯೇಕ ಚುನಾಯಿತ ಹಕ್ಕಿಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾಡಿದ ಹೋರಾಟಕ್ಕೆ ಪ್ರತಿಫಲ ದೊರಕದಂತೆ, ಮಹಾತ್ಮಗಾಂಧಿ ಅವರು ಪೂನಾದ ಯರವಾಡ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಕುಳಿತಿದ್ದರು. ಆ ಮೂಲಕ ದಲಿತರ ಸ್ವಾತಂತ್ರ್ಯ ರಾಜಕೀಯ ಹಕ್ಕನ್ನು ಕಸಿದುಕೊಂಡರು ಎಂದು ದಲಿತ ಸಾಹಿತ್ಯ ಪರಿಷತ್ತಿನ ಕೋರೆನಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಯಚೂರು ನಗರದ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯಾಲಯದಲ್ಲಿ ಭಾನುವಾರ ದಲಿತ ಸಾಹಿತ್ಯ ಪರಿಷತ್ ಕಾರ್ಯಕರ್ತರು ಹಮ್ಮಿಕೊಂಡಿದ್ದ, ‘ಪೂನಾ ಒಪ್ಪಂದ’ದ ಉಪನ್ಯಾಸ ಕಾರ್ಯಕ್ರಮ ಮತ್ತು ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ತಾಲೂಕು ಘಟಕಗಳ ರಚನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
“ದೇಶದಲ್ಲಿ ಏಕಸ್ವಾಮ್ಯದ ಪಾರುಪತ್ಯವನ್ನು ಜಾರಿಗೊಳಿಸುವ ಹುನ್ನಾರ ನಡೆದಿದ್ದು, ಇದರಿಂದ ಬಹುಸಂಖ್ಯಾತರ ಅಸ್ಮಿತೆ ಮತ್ತು ಅಸ್ತಿತ್ವವೇ ನಶಿಸಿಹೋಗುತ್ತಿದೆ. ಭಾರತ ವಿವಿಧತೆಯನ್ನು ಹೊಂದಿದ ದೇಶವಾಗಿದೆ. ಅದನ್ನು ಮುಂದಿನ ತಲೆಮಾರುಗಳಿಗೆ ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈದ್ ಮಿಲಾದ್ | ಮೀನುಗಾರರಿಗೆ ರಜೆ ಬ್ಯಾನರ್; ಖಂಡನೆ-ಸ್ಪಷ್ಟನೆ
“ಭಾರತದಲ್ಲಿ ಮನುವಾದ ಮತ್ತು ಭೀಮವಾದದ ನಡುವೆ ನಿರಂತರವಾಗಿ ಸಂಘರ್ಷ ನಡೆದು ಬರುತ್ತಿದ್ದು, ಮನುವಾದದಿಂದ ದೇಶದ ಬಹುತ್ವಕ್ಕೆ ಅಪಾಯವಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ತಾಯರಾಜ್ ಮರ್ಚೆಟ್ಹಾಳ್, ಡಾ.ಹುಸೇನಪ್ಪ ಅಮರಾಪೂರ, ಅರಣು ಕುಮಾರ್, ರಾಮಣ್ಣ, ಈರಪ್ಪ ಕೊಂಬಿನ, ಯಂಕಪ್ಪ ಪಿರಂಗಿ, ಶರಣಪ್ಪ ಬಲ್ಲಟಗಿ, ವೀರೇಶ್ ಕಣ್ಣಾರಿ, ಭೀಮಣ್ಣ ಉಡುಮಗಲ್, ವೆಂಕಟೇಶ್ ಚಂದ್ರಬಂಡಾ, ಸಿದ್ದಪ್ಪ, ಶಿವರಾಜ್ ಸುರೇಶ್, ಮೂರ್ತಿ, ಮಾರಪ್ಪ, ಶಾಂತಪ್ಪ ಪಿತಗಲ್, ತಿಮ್ಮಪ್ಪ, ಡಾ.ಬಸವರಾಜ್, ಆರ್ ಕೆ.ಈರಣ್ಣ, ಪಾರ್ಥಾ ಸಿರವಾರ, ಮೌನೇಶ ಶಾಖಾಪುರ, ನರಸಿಂಹ ಸೇರಿದಂತೆ ಇತರರು ಇದ್ದರು.
ಸಿಟಿಜನ್ ಜರ್ನಲಿಸ್ಟ್ : ತಾಯರಾಜ್ ಅಸ್ಕಿಹಾಳ