ರಾಯಚೂರು ನಗರದ ಕಾಟೆದರವಾಜ್ ಬಳಿಯ ಹಜರತ್ ಅಲ್ಲಾವುದ್ದೀನ್ ಬಾಬಾ ದರ್ಗಾದ ಬಳಿ ನಿರ್ಮಾಣ ಮಾಡುತ್ತಿರುವ ದ್ವಾರ ನಿರ್ಮಾಣ ಮಾಡುವದನ್ನು ವಿರೋಧಿಸಿ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿದಾಗ ಎರಡು ಗುಂಪುಗಳ ಮಧ್ಯೆ ವಾಗ್ವಾದ ನೂಕು ನುಗ್ಗಲು ನಡೆದಿದೆ.
ಕನಕದಾಸ ಜಯಂತಿಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರು ತೆರಳುತ್ತಿದ್ದಾಗ ಸೂಪರ್ ಮಾರ್ಕೆಟ್ಗೆ ಆಗಮಿಸಿದರು. ಪೂರ್ವಭಾವಿಯಾಗಿ ಅನೇಕ ಯುವಕರು ದರ್ಗಾ ಬಳಿ ಜಮಾವಣೆಗೊಂಡಿದ್ದರು. ಎರಡು ಗುಂಪುಗಳ ಮಧ್ಯೆ ಪರ ವಿರೋಧ ಘೋಷಣೆಗಳು ಕೇಳಿಬಂದವು. ಪೊಲೀಸರು ಎರಡು ಗುಂಪುಗಳನ್ನು ತಹಬಂದಿಗೆ ತರಲು ಹರಸಾಹಸ ಪಡಬೇಕಾಯಿತು.
ನಗರಸಭೆ ಅನುದಾನದಲ್ಲಿ ಕಮಾನ್ ನಿರ್ಮಾಣ ಮಾಡಲು ಕಾಮಗಾರಿ ಪ್ರಾರಂಭವಾಗಿದ್ದು, ಸಾರ್ವಜನಿಕರ ಸಂಚಾರ ಇರುವ ರಸ್ತೆಯನ್ನು ಬಂದ್ ಮಾಡಿ ಕಮಾನ್ ನಿರ್ಮಾಣ ಮಾಡಲು ಬಿಜೆಪಿ ಮುಖಂಡರು ವಿರೋಧಿಸಿದರು. ನಗರದ ಜನಸಂದಣಿ ಸ್ಥಳದಲ್ಲಿ ಕಮಾನ್ ನಿರ್ಮಿಸಿದರೆ ಸಂಚಾರಕ್ಕೆ ತೊಂದರೆಯಾಗುವುದಲ್ಲದೇ ರಸ್ತೆಯೇ ಇಲ್ಲದಂತಾಗುತ್ತದೆ ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | 43.27 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆ; ಆರ್ಟಿಪಿಎಸ್ ದಾಖಲೆ
ನಗರಸಭೆ ಸಭೆಯ ನಿರ್ಣಯದಂತೆ 15 ಲಕ್ಷ ರೂ ವೆಚ್ಚದ ಅನುದಾನದಲ್ಲಿ ಕಮಾನ್ ನಿರ್ಮಾಣ ಮಾಡಲು ನಗರಸಭೆ ಸಾಮಾನ್ಯಸಭೆ ಅನುಮೋದಿಸಿದೆ. ಕಮಾನ್ ನಿರ್ಮಾಣಕ್ಕೆ ನಗರಸಭೆಯೇ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಿದ್ದು, ಈಗ ವಿರೋಧ ವ್ಯಕ್ತಪಡಿಸುತ್ತಿರುವ ವಿರುದ್ದ ಮುಸ್ಲಿಂ ಸಮುದಾಯದ ಯುವಕರೂ ಕೂಡ ಆಕ್ಷೇಪ ವ್ಯಕ್ತಪಡಿಸಿದರು.
ಪರ ವಿರೋಧದ ಮಧ್ಯೆ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಎರಡು ಗುಂಪುಗಳನ್ನು ಸಮಜಾಯಿಷಿ ಕಳುಹಿಸಿದರು. ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ.
ವರದಿ : ಹಫೀಜುಲ್ಲ